ಉಪ್ಪುಂದ: ಬೈಕಿನ ಹಿಂಬದಿಯಲ್ಲಿ ನಾಯಿ ಸರಪಳಿಯಿಂದ ಎಳೆದೊಯ್ಯುವ ಅಮಾನವೀಯ ಕೃತ್ಯ

ಉಪ್ಪುಂದ: ತನ್ನ ಮನೆಯಲ್ಲಿ ಸಾಕಿ ಬೆಳೆಸಿದ ನಾಯಿಯನ್ನು ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ ದರದರನೇ ಎಳೆದೊಯ್ಯುತ್ತಿರುವ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ. ಶನಿವಾರ ಸಂಜೆ ಸಮಯದಲ್ಲಿ ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವ್ಯಕ್ತಿಯೊರ್ವ ತನ್ನ ಸಾಕು ನಾಯಿಯನ್ನು ಅತ್ಯಂತ ಕ್ರೂರವಾಗಿ ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ 2 ಕಿ.ಮೀ. ದೂರದವರೆಗೆ ಎಳೆದೊಯ್ಯುತ್ತಾನೆ.
ನಾಯಿಯನ್ನು ಅತ್ಯಂತ ಕ್ರೂರವಾಗಿ ರಸ್ತೆಯ ಮೇಲೆ ಎಳೆದೊಯ್ಯುತ್ತಿರುವುದನ್ನು ನೋಡಿದ ಸಾರ್ವಜನಿಕರು ತಕ್ಷಣ ನಿಲ್ಲಿಸಿ ವಿಚಾರಿಸಿದಾಗ ನಾನು ಮನೆಯಲ್ಲಿ ಸಾಕಿದ ನಾಯಿ ನೀವ್ಯಾರು ಕೇಳುವವರು ಎಂಬ ಹುದ್ದಾಟತನ ತೋರಿದ್ದು, ಜನರ ಗುಂಪು ಹೆಚ್ಚಾಗುತ್ತಿದ್ದಂತೆ ಈತನ ನಿಜ ಮುಖವಾಡ ಕಳಚಿ ಬಿದ್ದಿದೆ ಎನ್ನಲಾಗಿದೆ.
ಈತ ಬೈಂದೂರು ಭಾಗದ ಪಡುವರಿ ನಿವಾಸಿ ಎಂದು ತಿಳಿದು ಬಂದಿದ್ದು ಹೆಸರು ಮಾತ್ರ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ನಾಯಿಯನ್ನು ಎಳೆದೊಯ್ದ ರಭಸಕ್ಕೆ ನಾಯಿಯ ಕಾಲಿನಲ್ಲಿ ಗಾಯವಾಗಿ ರಕ್ತ ದರದರನೇ ಸುರಿದೆ. ರಸ್ತೆಯ ಮೇಲೆ ಬಿದ್ದಿರುವ ರಕ್ತವನ್ನು ನೋಡಿದ ನೆಟ್ಟಿಗರು ವ್ಯಕ್ತಿಯನ್ನು ತರಾಟೆ ತೆಗೆದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ವ್ಯಕ್ತಿಯೋರ್ವ ಕ್ರೂರವಾಗಿ ನಾಯಿಯನ್ನು ಹಿಂಸಿಸುವ ಅಮಾನವೀಯ ಕೃತ್ಯಕ್ಕೆ ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆ ಬುದ್ದಿವಂತರ ಜಿಲ್ಲೆಯಲ್ಲಿ ಇಂತಹ ಕ್ರೂರ ಘಟನೆ ನಡೆದಿದ್ದು ಜಿಲ್ಲೆಯ ಜನತೆ ತಲೆ ತಗ್ಗಿಸುವಂತೆ ಮಾಡಿದೆ.
ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಇನ್ನು ಮುಂದಿನ ದಿನದಲ್ಲಿ ಈ ತರದ ಘಟನೆಗಳು ನಡೆಯದಂತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.