ತುಮಕೂರು: ಸಾಕು ನಾಯಿ ‘ಖುಷಿ’ಗೆ ಅದ್ಧೂರಿ ಸೀಮಂತ ಶಾಸ್ತ್ರ; 500 ಜನರಿಗೆ ಭರ್ಜರಿ ಚಿಕನ್ ಊಟ ಹಾಕಿಸಿ ಶ್ವಾನ ಪ್ರೇಮ ಮೆರೆದ ಮಾಲೀಕ!

ತುಮಕೂರು: ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಸರಿಘಟ್ಟ ಗ್ರಾಮದಲ್ಲಿ ಮಾನವೀಯತೆ ಮತ್ತು ಪ್ರಾಣಿ ಪ್ರೇಮವನ್ನು ಸಾರುವ ಅಪರೂಪದ ಘಟನೆಯೊಂದು ನಡೆದಿದ್ದು, ಶ್ವಾನ ಪ್ರೇಮಿ ಪ್ರವೀಣ್ ಎಂಬುವವರು ತಮ್ಮ ಸಾಕು ನಾಯಿ ‘ಖುಷಿ’ಗೆ ಮನುಷ್ಯರಂತೆಯೇ ಅತ್ಯಂತ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಮನೆಯ ಸದಸ್ಯರ ಸೀಮಂತವನ್ನು ಹೇಗೆ ಸಂಭ್ರಮದಿಂದ ಆಚರಿಸಲಾಗುತ್ತದೆಯೋ, ಅದೇ ಮಾದರಿಯಲ್ಲಿ ಗರ್ಭಿಣಿ ಶ್ವಾನಕ್ಕೆ ಹೊಸ ಬಟ್ಟೆ ತೊಡಿಸಿ, ಮೈತುಂಬಾ ಹೂವಿನ ಹಾರ ಹಾಕಿ ಸಿಂಗರಿಸಲಾಗಿತ್ತು.


ಅಷ್ಟೇ ಅಲ್ಲದೆ, ಕೇಕ್ ಕತ್ತರಿಸುವ ಮೂಲಕ ಖುಷಿಯ ಗರ್ಭಧಾರಣೆಯನ್ನು ಸಂಭ್ರಮಿಸಿದ ಪ್ರವೀಣ್, ಇಡೀ ಗ್ರಾಮವೇ ಬೆರಗಾಗುವಂತೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರಾಣಿಗಳನ್ನೂ ತಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿ ಕಾಣುವ ಇಂದಿನ ಕಾಲಘಟ್ಟದಲ್ಲಿ, ಪ್ರವೀಣ್ ಅವರ ಈ ವಿಶಿಷ್ಟ ಶ್ವಾನ ಪ್ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಶೇಷ ಸೀಮಂತಕ್ಕಾಗಿ ಪ್ರವೀಣ್ ಸುಮಾರು 20 ಸಾವಿರ ರೂಪಾಯಿಗಳಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ. ಕೇವಲ ಶಾಸ್ತ್ರಕ್ಕೆ ಮಾತ್ರ ಸೀಮಿತವಾಗದೆ, ಊರಿನವರಿಗಾಗಿ ಭರ್ಜರಿ ಮಾಂಸದೂಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇದಕ್ಕಾಗಿ ಸುಮಾರು 50 ಕೆಜಿ ಗೀ ರೈಸ್ ಹಾಗೂ 50 ಕೆಜಿ ಚಿಕನ್ ಗ್ರೇವಿಯನ್ನು ತಯಾರಿಸಲಾಗಿದ್ದು, ಸರಿಸುಮಾರು 500ಕ್ಕೂ ಹೆಚ್ಚು ಜನರಿಗೆ ಪ್ರೀತಿಯ ಭೋಜನ ಬಡಿಸಲಾಗಿದೆ. ಶ್ವಾನದ ಮೇಲಿನ ಈ ಅಪಾರ ಕಾಳಜಿಯನ್ನು ಕಂಡು ದಸರಿಘಟ್ಟ ಗ್ರಾಮಸ್ಥರು ಮಾರುಹೋಗಿದ್ದು, “ನಾಯಿ ನಿಷ್ಠೆಯ ಪ್ರಾಣಿ ಮಾತ್ರವಲ್ಲ, ಅದು ಕುಟುಂಬದ ಸದಸ್ಯನೂ ಹೌದು” ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಿದೆ. ಸದ್ಯ ಈ ವಿಶಿಷ್ಟ ಸೀಮಂತದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಾಣಿ ಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
