ನಿರೀಕ್ಷಣೆಯಿಲ್ಲದ ಕೆರೆಗಳು – ಮಾಲಿನ್ಯದಿಂದ ಮುಳುಗುತ್ತಿದೆ ಬೆಂಗಳೂರು
ಬೆಂಗಳೂರು: ಸಿಲಿಕಾನ್ ಸಿಟಿಯ ಕೆರೆಗಳ ಸುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಿ ಐದು ವರ್ಷಗಳಾದರೂ ಕ್ಯಾಮೆರಾ ಅಳವಡಿಕೆ ಆರಂಭವಾಗಿಲ್ಲ. ಇದರಿಂದ ಕೆರೆ ಒತ್ತುವರಿ, ಮಾಲಿನ್ಯಕ್ಕೆ ಕಡಿವಾಣ ಬಿದ್ದಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿಕಣ್ಮರೆಯಾಗುತ್ತಿರುವ ಕೆರೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಹೈಕೋರ್ಟ್, ಮಾಲಿನ್ಯ ಮತ್ತು ಒತ್ತುವರಿ ತಡೆಗಟ್ಟಲು ಕೆರೆಗಳ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಆ ಮೂಲಕ ಕೆರೆಗಳಿಗೆ ತ್ಯಾಜ್ಯ ಎಸೆಯದಂತೆ ಎಚ್ಚರ ವಹಿಸುವಂತೆ ಬಿಬಿಎಂಪಿಗೆ 2019ರಲ್ಲಿಯೇ ನಿರ್ದೇಶನ ನೀಡಿತ್ತು. ಅದರಂತೆ, 5 ಕೋಟಿ ರೂ.ಗಳ ಯೋಜನೆ ರೂಪಿಸಿದ ಬಿಬಿಎಂಪಿ, 2022ರಲ್ಲಿಯೇ ಅನುಮೋದನೆ ನೀಡಿತ್ತು. ಆದರೆ, ಟೆಂಡರ್ದಾರರ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಕೆರೆ ಸಂರಕ್ಷಣೆಯಲ್ಲಿತೊಡಗಿಸಿಕೊಂಡ ಕಾರ್ಯಕರ್ತರಿಗೆ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ವೆಬ್ಸೈಟ್ ಮಾಹಿತಿ ಪ್ರಕಾರ, ನಗರದಲ್ಲಿಒಟ್ಟು 210 ಕೆರೆಗಳಿವೆ. ಇದರಲ್ಲಿ167 ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರೆ, 33 ಕೆರೆಗಳು ಬಿಡಿಎ ವ್ಯಾಪ್ತಿಗೆ ಸೇರಿವೆ. ಇನ್ನುಳಿದಂತೆ 5 ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, 4 ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಿಎಂಆರ್ಸಿಎಲ್ಗೆ ತಲಾ 1 ಕೆರೆ ಸೇರಿವೆ. ಈ ಕೆರೆಗಳಿಗೆ ಕಳೆದ ಐದು ವರ್ಷಗಳಿಂದಲೂ ಸಿಸಿಟಿವಿ ಅಳವಡಿಸದ ಕಾರಣ ಒತ್ತುವರಿ ಮುಂದುವರಿದಿದೆ. ಅಲ್ಲದೆ, ಕೆರೆ ಆವರಣದಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ.
‘‘ಬಿಬಿಎಂಪಿಯು ಕೆರೆಗಳ ಒತ್ತುವರಿ ತೆರವಿನ ನಂತರ ಸಿಸಿಟಿವಿ ಅಳವಡಿಸಲು ತೀರ್ಮಾನಿಸಿದ ನಿರ್ಧಾರ ಉತ್ತಮವಾಗಿತ್ತು. ಆದರೆ, ಐದು ವರ್ಷ ಕಳೆದರೂ ಕ್ಯಾಮೆರಾಗಳನ್ನು ಅಳವಡಿಸದ ಬಿಬಿಎಂಪಿ, ಒತ್ತುವರಿ ಮತ್ತು ತ್ಯಾಜ್ಯ ಸುರಿಯಲು ಅವಕಾಶ ಮಾಡಿಕೊಟ್ಟಿದೆ. ಮಹದೇವಪುರ ವಲಯದ ಕೆಲವು ಕೆರೆಗಳಿಗೆ ಕ್ಯಾಮೆರಾಗಳನ್ನು ಅಳವಡಿಸುವಂತೆ ಬಿಬಿಎಂಪಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದು ಹೀಗೇ ಮುಂದುವರಿದರೆ, ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳ ಮೇಲಿನ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ. ಅಧಿಕಾರಿಗಳು ಜವಾಬ್ದಾರಿ ಅಧಿರಿಧಿತು ಕೆಲಸ ಮಾಡಬೇಕು,’’ ಎಂದು ಕೆರೆ ಸಂರಕ್ಷಣೆಯಲ್ಲಿತೊಡಗಿಸಿಕೊಂಡಿರುವ ಮಹದೇವಪುರ ವಲಯದ ಕಾರ್ಯಕರ್ತ ಬಾಲಾಜಿ ರಘೋತ್ತಮ್ ಬಾಲಿ ಆಗ್ರಹಿಸಿದರು.
ಶೀಘ್ರವೇ ಐದು ಕೆರೆಗಳಿಗೆ ಕ್ಯಾಮೆರಾ
‘‘ಯೋಜನೆಗೆ ಅನುಮೋದನೆ ಪಡೆದ ಮೊದಲ ಒಂದು ವರ್ಷದ ಅವಧಿಯಲ್ಲಿಟೆಂಡರ್ ಪ್ರಕ್ರಿಯೆಯಲ್ಲಿಯಾರೂ ಭಾಗವಹಿಸಲಿಲ್ಲ. ವಿವಿಧ ಕಾರಣಗಳಿಂದ ಎರಡನೇ ವರ್ಷವೂ ಕಾರ್ಯಗತಗೊಳಿಸಲಾಗಲಿಲ್ಲ. ಹೀಗಾಗಿ, ಎರಡು ವರ್ಷ ಅವಧಿಯ ಯೋಜನೆ ರದ್ದಾಗಿತ್ತು. ಈಗ ಮತ್ತೆ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆಯಲಾಗಿದೆ. ವಿವರವಾದ ಯೋಜನಾ ವರದಿ ಆಧರಿಸಿ, ಬೇಡಿಕೆ ಮತ್ತು ಇತರೆ ಕಾರಣಗಳಿಂದ ಸಿಸಿಟಿವಿ ಅಳವಡಿಕೆಗೆ 11 ಕೆರೆಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ ಜಕ್ಕೂರು, ಯಲಹಂಕ, ದಾಸರಹಳ್ಳಿ, ಕೆಂಪಾಂಬುಧಿ ಮತ್ತು ವಿಭೂತಿಪುರ ಕೆರೆಗಳಿಗೆ ಕ್ಯಾಮೆರಾ ಅಳವಡಿಕೆ ಕಾರ್ಯ ಶೀಘ್ರವೇ ಆರಂಭವಾಗಲಿದೆ,’’ ಎಂದು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು