ಭಾರತೀಯ ವಿದ್ಯಾರ್ಥಿ ಗಡೀಪಾರು ಪ್ರಕರಣ: ‘ವೀಸಾ ದುರುಪಯೋಗ ಸಹಿಸುವುದಿಲ್ಲ’ ಎಂದ ಅಮೆರಿಕ ರಾಯಭಾರ ಕಚೇರಿ

ನವದೆಹಲಿ: ಅಮೆರಿಕದ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕೈಕೋಳ ಹಾಕಿ, ನೆಲಕ್ಕೆ ಕೆಡವಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಪ್ರತಿಕ್ರಿಯಿಸಿದ್ದು, ‘ವೀಸಾ ದುರುಪಯೋಗ ಹಾಗೂ ಅಕ್ರಮ ಪ್ರವೇಶವನ್ನು ನಾವು ಸಹಿಸುವುದಿಲ್ಲ’ ಎಂದಿದೆ.
ಅಮೆರಿಕವು ಕಾನೂನುಬದ್ಧ ಪ್ರಯಾಣಿಕರನ್ನು ತನ್ನಲ್ಲಿ ಸ್ವಾಗತಿಸುತ್ತಲೇ ಇದೆ. ಆದರೆ ಅಕ್ರಮ ಪ್ರವೇಶ, ವೀಸಾಗಳ ದುರುಪಯೋಗ ಅಥವಾ ಅಮೆರಿಕ ಕಾನೂನಿನ ಉಲ್ಲಂಘನೆಯನ್ನು ನಾವು ಸಹಿಸಲು ಸಾಧ್ಯವಿಲ್ಲ ಮತ್ತು ಸಹಿಸುವುದಿಲ್ಲ’ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಈ ಬಗ್ಗೆ ಅಮೆರಿಕದ ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ನ್ಯೂಯಾರ್ಕ್ನಲ್ಲಿನ ಭಾರತೀಯ ರಾಯಭಾರ ಸಿಬ್ಬಂದಿ ತಿಳಿಸಿದ್ದಾರೆ.
ಟ್ರಂಪ್ ಜತೆ ಮೋದಿ ಮಾತಾಡಲಿ: ಕಾಂಗ್ರೆಸ್
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ನಡೆದ ದೌರ್ಜನ್ಯವನ್ನು ಕಾಂಗ್ರೆಸ್ ಖಂಡಿಸಿದ್ದು, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್ ಜತೆ ಮಾತನಾಡಬೇಕು ಎಂದು ಆಗ್ರಹಿಸಿದೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಘೋಷಿಸಿದರು. ಆದರೆ ಮೋದಿಯವರು ಕದನ ವಿರಾಮದ ವಿಷಯಕ್ಕಾಗಲಿ, ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಲಿ ಟ್ರಂಪ್ ಜೊತೆ ಮಾತಾಡುವ ಧೈರ್ಯ ತೋರಿಲ್ಲ. ಟ್ರಂಪ್ ಅವರೊಂದಿಗೆ ಮಾತನಾಡಿ, ಭಾರತೀಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಅಮೆರಿಕದಲ್ಲಿ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳನ್ನು ಆವರಿಸಿರುವ ಭಯದ ಕುರಿತು ಮಧ್ಯಪ್ರವೇಶಿಸುವಂತೆ ಮನವಿ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.