ಕಡಿಮೆ ಬೆಲೆಗೆ ಚಿನ್ನದ ನಾಣ್ಯ ನೀಡುವ ನೆಪ: ನಕಲಿ ಬಿಲ್ಲೆ ನೀಡಿ ₹6 ಲಕ್ಷ ವಂಚಿಸಿದ ಇಬ್ಬರ ಬಂಧನ

ದಾವಣಗೆರೆ: ಕಡಿಮೆ ಬೆಲೆಗೆ ಚಿನ್ನದ (Gold) ನಾಣ್ಯ ನೀಡುವುದಾಗಿ ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಹೊನ್ನಾಳಿ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ.


ಬಂಧಿತರನ್ನು ಶಿವಮೊಗ್ಗದ (Shivamogga) ಹಾಡೋನಹಳ್ಳಿ ಗ್ರಾಮದ ಪರಶುರಾಮ ಹಾಗೂ ನ್ಯಾಮತಿಯ ದಾನಿಹಳ್ಳಿ ಗ್ರಾಮದ ಮನೋಜ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 5.90 ಲಕ್ಷ ರೂ. ನಗದು, ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ವಾಹನವನ್ನು ಜಪ್ತಿ ಮಾಡಿದ್ದಾರೆ.

ಆರೋಪಿಗಳು ಮಂಡ್ಯ ಜಿಲ್ಲೆಯ ಮಳವಳ್ಳಿಯ ಕುಂದೂರು ಗ್ರಾಮದ ಮೂರ್ತಿ ಎಂಬವರಿಗೆ ನಕಲಿ ಚಿನ್ನ ನೀಡಿ ವಂಚಿಸಿದ್ದರು. ಆರೋಪಿಗಳು ಮನೆ ಅಡಿಪಾಯ ತೆಗೆಯುವಾಗ ಬಂಗಾರದ ನಾಣ್ಯಗಳು ಸಿಕ್ಕಿದ್ದು, ಕಡಿಮೆ ದರಕ್ಕೆ ನೀಡುವುದಾಗಿ ನಂಬಿಸಿದ್ದರು. ಮೊದಲು ಪರೀಕ್ಷೆ ನಡೆಸಲು ಅಸಲಿ ನಾಣ್ಯ ನೀಡಿದ್ದರು. ಖರೀದಿ ವೇಳೆ ನಕಲಿ ನಾಣ್ಯಗಳನ್ನು ನೀಡಿ 6 ಲಕ್ಷ ರೂ. ನಗದು ಪಡೆದು ವಂಚಿಸಿದ್ದರು.

ವಂಚನೆಯಾಗಿದ್ದು ಅರಿತ ಮೂರ್ತಿ ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿ ಪರಶುರಾಮ ಈ ಹಿಂದೆ ಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜೈಲು ಸೇರಿ ನಂತರ ಬಿಡುಗಡೆ ಆಗಿದ್ದ ಎಂದು ತಿಳಿದು ಬಂದಿದೆ