ಅನ್ಯಕೋಮಿಯನಿಗೆ ಜೈಶ್ರೀರಾಮ್ ಘೋಷಣೆ ನಿರಾಕರಣೆಗೆ ಥಳಿತದ ಆರೋಪದಲ್ಲಿ ಟ್ವಿಸ್ಟ್

ಬೆಂಗಳೂರು: ಬೆಂಗಳೂರಿನ ಹೆಗ್ಡೆ ನಗರ ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಗುಂಪೊಂದು ಭಾನುವಾರ ಸಂಜೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘‘ಜೈ ಶ್ರೀರಾಂ” ಎಂಬ ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸಂತ್ರಸ್ತ ಚಾಲಕ ಆರೋಪಿಸಿದ್ದಾರೆ. ಆದರೆ, ಪೊಲೀಸರಿಗೆ ನೀಡಿದ ದೂರಿನಲ್ಲಿ ಆ ಬಗ್ಗೆ ಉಲ್ಲೇಖಿಸಿಲ್ಲ ಎನ್ನಲಾಗಿದೆ. ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
‘‘ಜೈ ಶ್ರೀ ರಾಮ್’’ ಎಂಬ ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ ಹಿಂದೂಗಳ ಗುಂಪು ಹಲ್ಲೆ ಮಾಡಿದೆ ಎಂದು ಆಟೋ ಚಾಲಕ ವಾಸೀಂ ಆರೋಪಿಸಿದ್ದಾರೆ. ಹಲ್ಲೆಕೋರರು ಮದ್ಯಪಾನದ ಅಮಲಿನಲ್ಲಿದ್ದರು. ‘‘ಜೈ ಶ್ರೀರಾಂ’’ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದರು. ಒಪ್ಪದಿದ್ದಾಗ ಹಲ್ಲೆ ಮಾಡಿದರು ಎಂದು ಆಟೋ ಚಾಲಕ ಆರೋಪಿಸಿದ್ದಾರೆ.
ಸಂತ್ರಸ್ತ ಆಟೋ ಚಾಲಕ ವಾಸೀಂ ಹೇಳಿದ್ದೇನು?
ಎಜೆಬಿಜೆ ಲೇಔಟ್ ಪಕ್ಕದಲ್ಲಿರುವ ತೆರೆದ ಮೈದಾನದ ಬಳಿ ಭಾನುವಾರ ಸಂಜೆ 4:30 ರಿಂದ 6:30 ರ ನಡುವೆ ಈ ಘಟನೆ ನಡೆದಿದೆ. ಸ್ನೇಹಿತ ಜಮೀರ್ ಜೊತೆ ಆ ಪ್ರದೇಶಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ವಾಸೀಂ ಹೇಳಿದ್ದಾರೆ. ಆಗ ಆರರಿಂದ ಎಂಟು ಜನರ ಗುಂಪು ತಮ್ನ್ನು ನಿಂದಿಸಲು ಪ್ರಾರಂಭಿಸಿದೆ. ಅಲ್ಲದೆ ‘‘ಜೈ ಶ್ರೀರಾಂ’ ಘೋಷಣೆ ಕೂಗಬೇಕೆಂದು ಒತ್ತಾಯಿಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತು. ಈ ಸಂದರ್ಭ ಜಮೀರ್ ಪರಾರಿಯಾಗುವಲ್ಲಿ ಯಶಸ್ವಿಯಾದರೂ, ತಮ್ಮ ಮೇಲೆ ಗುಂಪು ಥಳಿಸಿದೆ. ಇದರಿಂದಾಗಿ ಗಾಯಗೊಂಡಿದ್ದೇನೆ ಎಂದು ವಾಸೀಂ ಹೇಳಿದ್ದಾರೆ.

ಪೊಲೀಸರು ಹೇಳುವುದೇ ಬೇರೆ!
ಆದಾಗ್ಯೂ, ಪೊಲೀಸರು ನೀಡಿರುವ ಹೇಳಿಕೆಯು ಸಂತ್ರಸ್ತ ಹೇಳಿದ್ದಕ್ಕಿಂತ ಭಿನ್ನವಾಗಿದೆ. ವಾಸೀಂ ನೀಡಿರುವ ಅಧಿಕೃತ ದೂರಿನಲ್ಲಿ ಯಾವುದೇ ಧಾರ್ಮಿಕ ಘೋಷಣೆ ಬಗ್ಗೆ ಉಲ್ಲೇಖಿಸಲಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ ವಿಭಾಗ) ಸಜೀತ್ ವಿಜೆ ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಸಾಕ್ಷಿಗಳೊಂದಿಗೆ ನಾವು ಮಾತನಾಡಿದ್ದೇವೆ ಮತ್ತು ದಾಳಿಕೋರರು ಯಾವುದೇ ಧಾರ್ಮಿಕ ಘೋಷಣೆಗಳನ್ನು ಮಾಡಿದ್ದಾರೆ ಎಂಬ ಆರೋಪವನ್ನು ಯಾರೂ ಸಮ್ಮತಿಸಿಲ್ಲ ಎಂದು ಅವರು ಹೇಳಿದ್ದಾರೆ.
ವೀಡಿಯೊ ಪರಿಶೀಲನೆಯಲ್ಲಿದೆ ಮತ್ತು ಎಲ್ಲಾ ಕೋನಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.