Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಕಲಿ ದಾಖಲೆಯಿಂದ ಸರ್ಕಾರಿ ಜಮೀನು ವರ್ಗಾವಣೆ – ನಿವೃತ್ತ ಐಎಎಸ್ ಅಧಿಕಾರಿಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಮುಂದುವರಿಸಿದ ಹೈಕೋರ್ಟ್

Spread the love

ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಎರಡು ಎಕರೆ ಸರ್ಕಾರಿ ಜಮೀನನ್ನು ಈ ಹಿಂದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದವರ ತಾಯಿಗೆ ನೆರವಾಗುವಂತೆ ಮಾಡುವ ಮೂಲಕ ಕರ್ತವ್ಯಲೋಪ ಎಸಗಿದ್ದ ಆರೋಪದಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನಿವೃತ್ತರಾಗಿರುವ ಐಎಎಸ್ ಅಧಿಕಾರಿ ವಿ. ಶಂಕರ್ ಮತ್ತಿತರರ ವಿರುದ್ದ ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ 2019ರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿ.ಶಂಕರ್, ಸರ್ವೇಯರ್ ಡಿ.ಬಿ. ಗಂಗಯ್ಯ, ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ಕೆ. ಜಯಪ್ರಕಾಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದ ನ್ಯಾಯಪೀಠ, ಆರೋಪದ ಭೂಮಿಗೆ ಸಂಬಂಧಿಸಿದಂತೆ ಮೂಲ ಮಂಜೂರುದಾರರು ಹಾಗೂ ಸರ್ಕಾರದ ಆಗಿನ ಮುಖ್ಯ ಕಾರ್ಯದರ್ಶಿಯವರ ತಾಯಿ ಪೋಡಿ ಮಾಡಿಸುವಂತೆ ಅರ್ಜಿ ಸಲ್ಲಿಸಿಲ್ಲ. ಆದರೆ, ಮುಖ್ಯ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಅರ್ಜಿದಾರರು ಪೋಡಿ ಮಾಡಿಕೊಟ್ಟಿದ್ದಾರೆ ಎಂಬ ಅಂಶ ಗೊತ್ತಾಗಲಿದೆ. ಅಲ್ಲದೆ, ಮೂರೇ ತಿಂಗಳಲ್ಲಿ ಪೋಡಿ ಮಾಡಿಕೊಟ್ಟಿದ್ದು, ರಾಜ್ಯದಲ್ಲಿ ಇದೊಂದು ಮೂರು ತಿಂಗಳಲ್ಲಿ ಪೋಡಿ ಮಾಡಿಕೊಟ್ಟಿರುವುದಕ್ಕೆ ಏಕೈಕ ಉದಾಹರಣೆಯಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಅರ್ಜಿದಾರರು ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸರ್ಕಾರದ ಆದೇಶಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿ ನಕಲಿ ದಾಖಲೆ ಸೃಷ್ಟಿಸಿ ಭೂ ದಾಖಲೆಗಳನ್ನು ಬದಲಾವಣೆ ಮಾಡಿರುವ ಆರೋಪವಿದ್ದು, ಈ ಸಂಬಂಧ ವಿಚಾರಣೆ ನಡೆದು ನಿರ್ಧಾರ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಾರಾಬಾಯಿ ಅವರ ಹೆಸರಿಗೆ ಭೂ ದಾಖಲೆಗಳನ್ನು ಮಾಡಿಕೊಟ್ಟಿದ್ದ ಪ್ರಕರಣ ಸಂಬಂಧ ವಿಚಾರಣೆಗೊಳಪಡೊಸೊದ್ದ ಪ್ರಾದೇಶಿಕ ಆಯುಕ್ತರು ಎಲ್ಲ ಅಧಿಕಾರಿಗಳಿಗೂ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ವಾದಿಸಿದ್ದರು. ಇದನ್ನು ತಳ್ಳಿ ಹಾಕಿದ ನ್ಯಾಯಪೀಠ, ಅಂದಿನ ಪ್ರಾದೇಶಿಕ ಆಯುಕ್ತರು ಮುಖ್ಯ ಕಾರ್ಯದರ್ಶಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗಾಗಿ ಆ ವಿಚಾರಣೆ ನಿಸ್ಪಕ್ಷಪಾತದಿಂದ ಕೂಡಿದೆ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ : ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿ ಗ್ರಾಮದಲ್ಲಿ ಅರವಿಂದ್ ಜಾಧವ್​ ಅವರ ತಾಯಿ ತಾರಾಬಾಯಿ ಮಾರುತಿರಾವ್ ಜಾಧವ್ ಅವರಿಗೆ ನಕಲಿ ಮಾರಾಟ ಪತ್ರವನ್ನು ಸೃಷ್ಟಿಸಿ ಕಾನೂನುಗಳನ್ನು ಉಲ್ಲಂಘಿಸಿ ಭೂ ದಾಖಲೆಗಳಲ್ಲಿನ ಹೆಸರನ್ನು ನಮೂದಿಸಲು ಅರ್ಜಿದಾರರು ನೆರವು ಮಾಡಿದ್ದರು ಎಂಬ ಆರೋಪವಿತ್ತು.

ಈ ಸಂಬಂಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಭೂಮಿಯನ್ನು ಪೋಡಿ ಮಾಡಿರುವ ಸಂಬಂಧ 2016ರಲ್ಲಿ ಭಾಸ್ಕರನ್ ಎಂಬುವರು ಎಸಿಬಿಗೆ ದೂರು ದಾಖಲಿಸಿದ್ದರು. ದೂರಿನಲ್ಲಿ ಆನೇಕಲ್ ತಾಲೂಕಿನ ರಾಮನಾಯಕನಹಳ್ಳಿ ಗ್ರಾಮದಲ್ಲಿ ಸರ್ವೇ ಸಂಖ್ಯೆ 29ಕ್ಕೆ ಸಂಬಂಧಿಸಿದಂತೆ ನಕಲಿ ಭೂ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರು. ನಿಯಮಗಳನ್ನು ಉಲ್ಲಂಘಿಸಿ ಜಮೀನಿನ ಪೋಡಿ ಮಾಡಿ ರಾಜ್ಯದ ಖಜಾನೆಗೆ ಕೋಟ್ಯಂತರ ರೂ.ಗಳನ್ನು ನಷ್ಟವುಂಟು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ಈ ಸಂಬಂಧ ಸರ್ಕಾರ 2022ರಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


Spread the love
Share:

administrator

Leave a Reply

Your email address will not be published. Required fields are marked *