ಅಂಕೋಲಾದಲ್ಲಿ ದುರ್ಘಟನೆ: ಗೊಬ್ಬರದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

ಕಾರವಾರ: ತಂದೆಯ ನಿರ್ಲಕ್ಷ್ಯದಿಂದ ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಹೆಣ್ಣುಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ.


ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2) ಮೃತ ಹೆಣ್ಣುಮಗು. ಶ್ರೀಕಾಂತ್ ಹೆಬ್ಬಾರ್ ದನದ ಕೊಟ್ಟಿಗೆ ಕೆಲಸಕ್ಕಾಗಿ ಕೊಟ್ಟಿಗೆಗೆ ತೆರಳಿದ್ದು, ಇವರೊಂದಿಗೆ ಪುಟ್ಟ ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತಾ ಕೊಟ್ಟಿಗೆ ಬಳಿ ಇದ್ದ ಗೊಬ್ಬರದ ಗುಂಡಿಗೆ ಬಿದ್ದಿದೆ.

ಕೊಟ್ಟಿಗೆಯಲ್ಲಿ ಕೆಲಸದಲ್ಲಿ ಮಗ್ನರಾಗಿದ್ದ ಶ್ರೀಕಾಂತ್ ಮಗುವಿನ ಚಲನವಲನದ ಬಗ್ಗೆ ಗಮನ ಹರಿಸಿರಲಿಲ್ಲ. ಮಗು ಸದ್ದು ಮಾಡದಿದ್ದುದನ್ನು ಗಮನಿಸಿ ಹುಡುಕಿದಾಗ ಗೊಬ್ಬರದ ಗುಂಡಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣವೇ ಅಂಕೋಲದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು.
