ದರ್ಗಾ ಭೇಟಿಗೆ ಬಂದ ಬಾಲಕ ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋದ ದುರ್ಘಟನೆ: ಪತ್ತೆಗಾಗಿ ಶೋಧ ಕಾರ್ಯಾಚರಣೆ

ರಾಮನಗರ: ದರ್ಗಾಗೆ ಬಂದಿದ್ದ ಬಾಲಕ ನೀರಿನಲ್ಲಿ ಆಟವಾಡಲು ಹೋಗಿ ಅರ್ಕಾವತಿ ನದಿಯಲ್ಲಿ ಕೊಚ್ಚಿಹೋದ ಘಟನೆ ರಾಮನಗರ ಹೊರವಲಯದ ಹಳ್ಳಿಮಾಳ ಸಮೀಪ ನಡೆದಿದೆ.
ಮೊಹಮ್ಮದ್ ಸೈಫ್ (9) ನೀರಿನಲ್ಲಿ ಕೊಚ್ಚಿಹೋದ ಬಾಲಕ. ಸೋಮವಾರ ಅರ್ಕಾವತಿ ನದಿ ಪಕ್ಕದಲ್ಲಿರುವ ದರ್ಗಾಗೆ ಬೆಂಗಳೂರಿನ ಲಕ್ಕಸಂದ್ರದ ನಿವಾಸಿಗಳಾದ ರಿಯಾಜ್ ಮತ್ತು ಸಮೀಮ್ ಭಾನು ತಮ್ಮ ಪುತ್ರನ ಜೊತೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಆಟವಾಡುತ್ತಿದ್ದ ಮೊಹಮ್ಮದ್ ಸೈಫ್ ಕಾಲುಜಾರಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಬಾಲಕ ಪತ್ತೆಯಾಗದೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದು, ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.