ಅಮೃತಸರದಲ್ಲಿ ವಿಷಮದ್ಯ ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ

ಪಂಜಾಬ್ : ಅಮೃತಸರ ಜಿಲ್ಲೆಯಲ್ಲಿ ವಿಷಪೂರಿತ ಮದ್ಯಸೇವನೆಯಿಂದಾಗಿ ಜನರು ಅಸ್ವಸ್ಥರಾಗಿ ಸಾವನ್ನಪ್ಪುತ್ತಿರುವ ದುರಂತದಲ್ಲಿ ಮೃತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಸಂಜೆಯಿಂದ ಸಾವುಗಳ ಸರಣಿ ಪ್ರಾರಂಭವಾಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚುವ ಸಂಭವವಿದೆ. ಥೆರ್ವಾಲ್, ಮರ್ರಿ, ಪಟಲ್ ಪುರಿ, ಭಂಗಾಲಿ ಗ್ರಾಮಗಳಿಂದ ಇದುವರೆಗೂ 12 ಸಾವುಗಳು ವರದಿಯಾಗಿದೆ. ಎಂದು ಅಮೃತಸರ ಗ್ರಾಮೀಣ ಪ್ರದೇಶದ ಎಸ್ಎಸ್ಪಿ ಮಣಿಂದರ್ ಸಿಂಗ್ ತಿಳಿಸಿದ್ದಾರೆ.
ಅಮೃತಸರದ ಸಂಸದ ಹಾಗೂ ಕಾಂಗ್ರೆಸ್ ನಾಯಕ ಗುರ್ಜೀತ್ ಸಿಂಗ್ ಔಜ್ಲಾ ಈ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ವಿಷಪೂರಿತ ಮದ್ಯ ದುರಂತಗಳು ಸಂಭವಿಸುತ್ತಲೇ ಇದೆ. ಪದೇಪದೇ ಈ ರೀತಿಯ ಘಟನೆಗಳು ನಡೆದರೂ ಸಹ ಸಿಎಂ, ಗೃಹ ಸಚಿವರು ಹಾಗೂ ಅಬಕಾರಿ ಸಚಿವರು ಬಾಯ್ಮುಚ್ಚಿ ಕುಳಿತಿದ್ದಾರೆ ಎಂದು ರಾಜ್ಯ ಎಎಪಿ ಸರ್ಕಾರವನ್ನು ಟೀಕಿಸಿದ್ದಾರೆ.