ಬೆಂಗಳೂರು ಐಟಿ ಹೊನಲಿಗೆ ಟಕ್ಕರ್: ಆಂಧ್ರದಿಂದ ಟಿಸಿಎಸ್ಗೆ ಕೇವಲ 99 ಪೈಸೆಗೆ ಭೂಮಿ!

ಅಮರಾವತಿ: ನೆರೆಯ ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ಹೆಚ್ಚಿನ ಐಟಿ ಕಂಪನಿಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಟಾಟಾ ಸಮೂಹದ ಒಡೆತನದ ಟಿಸಿಎಸ್ ಕಂಪನಿಗೆ ವಿಶಾಖಪಟ್ಟಣದಲ್ಲಿ ಕಚೇರಿ ತೆರೆಯಲು ಕೇವಲ 99 ಪೈಸೆಗೆ 21.6 ಎಕರೆ ಭೂಮಿಯನ್ನು ನೀಡಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ. ಆಂಧ್ರ ಸರ್ಕಾರದ ಈ ಕ್ರಮವನ್ನು ದೇಶದ ಐಟಿ ಹಬ್ ಆಗಿರುವ ಬೆಂಗಳೂರಿಗೆ ಸಡ್ಡು ಕೊಡಲು ನಡೆಸಿದ ಪ್ರಯತ್ನ ಎಂದು ಹೇಳಲಾಗ್ತಿದೆ. ಇನ್ನು ಆಂಧ್ರಪ್ರದೇಶದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ , 21.6 ಎಕರೆ ಭೂಮಿಯಲ್ಲಿ ಕಂಪನಿಯು ಕಚೇರಿ ತೆರೆಯಲಿದೆ. ಕಂಪನಿ 1370 ಕೋಟಿ ರು. ಹೂಡಿಕೆ ಮಾಡಲಿದ್ದು, ಮುಂದಿನ 2 – 3 ವರ್ಷದಲ್ಲಿ 12,000 ಉದ್ಯೋಗ ಸೃಷ್ಟಿಯಾಗಲಿದೆ. ಕಂಪನಿಯನ್ನು ರಾಜ್ಯಕ್ಕೆ ಕರೆತರುವಲ್ಲಿ ಐಟಿ ಸಚಿವ ನಾರಾ ಲೋಕೇಶ್ ಪಾತ್ರ ಅಧಿಕವಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆಲ್ಲಾ ಬೆಂಗಳೂರಿನಲ್ಲಿ ಮಳೆ ಅವಾಂತರವಾಗಿ ಮೂಲಸೌಕರ್ಯದ ಬಗ್ಗೆ ಭಾರೀ ಟೀಕೆ ವ್ಯಕ್ತವಾದಾಗಲೆಲ್ಲಾ ಆಂಧ್ರದ ರಾಜಕಾರಣಿಗಳು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಬನ್ನಿ ಎಂದು ಜಾಲತಾಣದ ಮೂಲಕವೇ ಐಟಿ-ಬಿಟಿ ಕಂಪನಿಗಳಿಗೆ ಆಫರ್ ನೀಡುತ್ತಿದ್ದರು. ಆದರೂ ಯಾವುದೇ ಕಂಪನಿಗಳು ಐಟಿ ಸಿಟಿ ಬಿಟ್ಟಿರಲಿಲ್ಲ. ಹೀಗಾಗಿ ಆಂಧ್ರ ಸರ್ಕಾರವೀಗ ಆಫರ್ ಮೂಲಕ ಐಟಿ ಕಂಪನಿಗಳ ಸೆಳೆಯಲು ಮುಂದಾಗಿದೆ. ಈ ಕುರಿತು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಮ್ಮ X ಪೋಸ್ಟ್ನಲ್ಲಿ 1990ರ ದಶಕದಲ್ಲಿ ನನ್ನ ಮೊದಲ ಅವಧಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ಹೈದರಾಬಾದ್ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನದಲ್ಲಿತ್ತು ಎಂದು ನನಗೆ ನೆನಪಿದೆ. ಇಂದು, ಹೈದರಾಬಾದ್ ಎಲ್ಲಾ ನಿಯತಾಂಕಗಳಲ್ಲಿ ಭಾರತದ ನಂಬರ್ ಒನ್ ನಗರವಾಗಿದೆ. ಇಂದಿನ ದಿನದಲ್ಲಿ ನಮ್ಮ ಮುಂದಿರುವುದು ಹೊಸ ಸವಾಲು ಮತ್ತು ಅವಕಾಶ . ನಾವು ಅದನ್ನು ಸಮರ್ಥವಾಗಿ ಪೂರೈಸುತ್ತೇವೆ. ಎರಡನೇ ಸ್ಥಾನದಲ್ಲಿರುವುದು ಎಂದರೆ ನಾವು ಇನ್ನಷ್ಟು ಶ್ರಮಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.