Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜಧಾನಿಯಲ್ಲಿ ಧಾರಾಕಾರ ಮಳೆ: 10 ಲಕ್ಷ ರೂಪಾಯಿ ಹಾನಿ, ಬಿಬಿಎಂಪಿಯಿಂದ ವೈಜ್ಞಾನಿಕ ಕ್ರಮಕ್ಕೆ ಮೆಗಾ ಪ್ಲ್ಯಾನ್

Spread the love

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾದ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಅನಾಹುತ ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿ ಸ್ಥಾಪಕತ್ವ ಯೋಜನೆ ಅಡಿ 173 ಕಿ.ಮೀ. ಮಣ್ಣಿನ ಕಾಲುವೆಗಳಿಗೆ ಆರ್​ಸಿಸಿ ತಡೆಗೋಡೆ ನಿರ್ಮಾಣ ಮಾಡಲು ಮುಂದಾಗಿದೆ. ಬೃಹತ್ ನೀರು ಕಾಲುವೆಗಳ ಒತ್ತುವರಿ ತೆರವಿಗೆ ಪರಿಣಾಮಕಾರಿ ಕ್ರಮಕೈಗೊಳ್ಳಲು ಯೋಚಿಸಿದೆ. ಹಾಗೇ, ಕೆರೆಗಳಿಗೆ ತೂಬು ಕಾಲುವೆ ಅಳವಡಿಸಿ ಪ್ರವಾಹ ತಡೆಗಟ್ಟಲು ಹೊರಟಿದೆ.

ಇನ್ನು, ಈವರೆಗೆ ಕೈಗೊಂಡ ಕ್ರಮಗಳ ಕುರಿತಾಗಿ ಬಿಬಿಎಂಪಿ ಮಾಹಿತಿ ಹಂಚಿಕೊಂಡಿದೆ. ಮಹದೇವಪುರ ವಲಯದಲ್ಲಿ ನೀರಿನ ಪ್ರಮಾಣ ಶೇ 80 ರಷ್ಟು ಇಳಿಕೆಯಾಗಿದೆ. ಸಾಯಿ ಲೇಔಟ್ ಪ್ರದೇಶದಲ್ಲಿ ಸ್ಥಳೀಯರ ನೆರವಿಗೆ ಆರೋಗ್ಯ ಶಿಬಿರ ಆರಂಭಿಸಲಾಗಿದೆ. ಬೊಮ್ಮನಹಳ್ಳಿ ವಲಯದ ಹೆಚ್​ಎಸ್​ಆರ್​ ಹಾಗೂ ಅನುಗ್ರಹ ಲೇಔಟ್​ನಲ್ಲಿ ಪಂಪ್ ಸೆಟ್ ಮೂಲಕ ನೀರು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಪಶ್ಚಿಮ ವಲಯದ ಕೆ. ಆರ್ ಮಾರ್ಕೆಟ್ ಸುತ್ತಮುತ್ತ ಕೊಳಚೆ ನೀರು ತೆರವು ಮಾಡಲಾಗಿದೆ. ದಕ್ಷಿಣ ವಲಯದ ಸಿಲ್ಕ್ ಬೋರ್ಡ್ ಜಲಾವೃತ ಹಾಗೂ ಕೆಎಎಸ್​ ಆಫೀಸರ್ಸ್ ಲೇಔಟ್ ಬಳಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಾಗಿದೆ. ಆರ್​ಆರ್​ ನಗರ ವಲಯದ ಅಂದರಹಳ್ಳಿ ಜನನಿ ಶಾಲೆ ಬಳಿ ತಡೆಗೋಡೆ ದುರಸ್ತಿ, ವಿದ್ಯುತ್ ಕಂಬ ಸಹ ಹಾನಿಯಾಗಿದ್ದು, ಈ ಸಂಬಂಧ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೇಳಿದೆ.

ಜವರೇಗೌಡ ದೊಡ್ಡಿ ಬಳಿ ಜಲಾವೃತ ಆಗಿದ್ದ ಪ್ರದೇಶದಲ್ಲಿ ನೀರು ತೆರವು ಮಾಡಲಾಗಿದೆ. ವಿದ್ಯಾಮಂದಿರ ಶಾಲೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಗೋಡೆ ತೆರವು ಮಾಡಲಾಗಿದೆ. ಧಾರಾಕಾರ ಮಳೆಯ ಪರಿಣಾಮ ಪಾಲಿಕೆ ವ್ಯಾಪ್ತಿಯ 183 ಕೆರೆಗಳ ಪೈಕಿ 75 ಕೆರೆಗಳು ಭರ್ತಿಯಾಗಿದ್ದು, ಸೋಮವಾರ (ಮೇ.19) ಸುರಿದ ಮಳೆಗೆ 25 ಮರಗಳು ಹಾಗೂ 44 ಮರದ ರೆಂಬೆ ಕೊಂಬೆಗಳು ಧರೆಗೆ ಉರಿಳಿವೆ. ಈವರೆಗೆ 10 ಮರಗಳು ಹಾಗೂ 25 ಮರದ ರೆಂಬೆ ಕೊಂಬೆಗಳ ತೆರವು ಮಾಡಲಾಗಿದೆ ಎಂದು ಅಂಕಿ-ಸಂಖ್ಯೆ ನೀಡಿದೆ.

ಬೆಂಗಳೂರಿನಲ್ಲಿ ದಾಖಲೆಯ ಮಳೆ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ 5.30ರವರೆಗೆ 13.1 ಮಿಲಿ ಮೀಟರ್​​ ಮಳೆಯಾಗಿದೆ. ಹೆಚ್​ಎಎಲ್​ ವಿಮಾನ ನಿಲ್ದಾಣ ಸುತ್ತಮುತ್ತ 4.8 ಮಿ.ಮೀ. ಮಳೆ ಸುರಿದಿದೆ. ಕೆಐಎಬಿ ಸುತ್ತಮುತ್ತ 4.8 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಮಳೆಯಿಂದ ಬೆಂಗಳೂರಿನಲ್ಲಿ ಅಪಾರ ಹಾನಿ

ಮೈಸೂರು ರಸ್ತೆಯ ಕೆಂಗೇರಿ ಬಳಿಯ ಗುರುಕುಲ ವಿದ್ಯಾಪೀಠ ಶಾಲೆಯ ಹಾಗೂ ಅನಾಥಾಶ್ರಮದಲ್ಲಿ ಅಪಾರ ಹಾನಿಯಾಗಿದೆ. ಸೋಮವಾರ ಸುರಿದ ಮಳೆಗೆ ರಾಜಕಾಲುವೆ ನೀರಿನ ಹರಿವು ಹೆಚ್ಚಾಗಿ ಶಾಲೆ ಹಾಗೂ ಆಶ್ರಮ ಜಲಾವೃತಗೊಂಡಿದೆ. 45ಕ್ಕೂ ಹೆಚ್ಚು ಮಕ್ಕಳು ಮಹಿಳೆಯರು ವಾಸವಿದ್ದ ಕಟ್ಟಡದ ಒಳಗೆ ನೀರು ನುಗ್ಗಿದೆ. ಕೂರಲು, ಮಲಗಲು ಕೂಡ ಜಾಗವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ.

ಶಾಲೆ ಹಾಗೂ ಆಶ್ರಮದ ಕಟ್ಡದಲ್ಲಿನ ದಿನಸಿ ಪದಾರ್ಥಗಳು, ಬಟ್ಟೆ ಬರೆ, ಸಾಮಗ್ರಿಗಳು, ಎಲೆಕ್ಟ್ರಾನಿಕ್ ಮತ್ತು ಇರತೆ ಬಹುತೇಕ ವಸ್ತುಗಳಿಗೆ ಹಾನಿಯಾಗಿದೆ. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಮಳೆಗಾಹುತಿಯಾಗಿವೆ. ಶಿವಾನಂದ ಸರ್ಕಲ್ ಬಳಿಯ ಹೋಟೆಲ್​​ ಬೇಸ್ಮೆಂಟ್​ ಜಲಾವೃತಗೊಂಡಿದೆ. ಇದರಿಂದ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಹೋಟೆಲ್​ ಸೋಮವಾರದಿಂದ ಬಂದ್ ಆಗಿದೆ. ಇದೇ ಕಟ್ಟಡದಲ್ಲಿ ಪಿಜ್ಜಾ ಶಾಪ್, ಬೆಂಗಳೂರು ಕೆಫೆ ಇದೆ. ಹೋಟೆಲ್​ನ ಆನ್​ಲೈನ್ ಹಾಗೂ ಆಫ್​ಲೈನ್ ಎರಡೂ ಸೇವೆ ಸ್ತಬ್ಧವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *