ಆಸ್ಪತ್ರೆಯಲ್ಲೇ ಮಾಡಿದ ಶಪಥ: ಪಿಎಸ್ಐ ಅನ್ನಪೂರ್ಣನ ದಿಟ್ಟ ನಿರ್ಧಾರ

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ನಡೆದ ಐದು ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್ಕೌಂಟರ್ ಮಾಡಿರುವ ಪಿಎಸ್ಐ ಅನ್ನಪೂರ್ಣ ಅವರ ದಿಟ್ಟತನಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಮ್ಮ ವೈಯಕ್ತಿಕ ಬದುಕನ್ನು ಲೆಕ್ಕಿಸದೇ ಈ ರೀತಿಯ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಪಿಎಸ್ಐ ಅನ್ನಪೂರ್ಣ ಅವರ ಹಿನ್ನೆಲೆ ರೋಚಕವಾಗಿದೆ.
ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯ ಐದು ವರ್ಷದ ಬಾಲಕಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ತುರ್ತು ಸಮಯದಲ್ಲಿ ಎನ್ಕೌಂಟರ್ ಮಾಡುವಂತಹ ದಿಟ್ಟ ಹೆಜ್ಜೆಯಿಟ್ಟ ಅಶೋಕ ನಗರ ಪೊಲೀಸ್ ಠಾಣೆಯ ಲೇಡಿ ಪಿಎಸ್ಐ ಅನ್ನಪೂರ್ಣ ರಾಜ್ಯಕ್ಕೆ ಮಾದರಿ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕು ಗುಜನಟ್ಟಿ ಗ್ರಾಮದ ನಿವಾಸಿಯಾಗಿರುವ ಅನ್ನಪೂರ್ಣ ಅವರು ಕಡು ಬಡತನದ ರೈತಾಪಿ ಕುಟುಂಬದಿಂದ ಬಂದವರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಮುಗಿಸಿ, ಕಳೆದ ವರ್ಷ ಯುಪಿಎಸ್ಸಿ ಪರೀಕ್ಷೆ ಬರೆದು ಪ್ರೀಲಿಮ್ಸ್ ಕ್ಲಿಯರ್ ಮಾಡಿದ್ದರು. ಪಿಎಸ್ಐ ಆಗಿ ಆಯ್ಕೆಯಾಗಿ 2018ರಲ್ಲಿ ಸೇವೆಗೆ ಸೇರ್ಪಡೆಯಾಗಿದ್ದರು.
ಮೂಲತಃ ಚೆನ್ನಮ್ಮನ ನೆಲದವರಾಗಿರುವ ಅನ್ನಪೂರ್ಣ ಅವರಿಗೆ ಶೌರ್ಯ ಎನ್ನುವುದು ರಕ್ತದಲ್ಲಿಯೇ ಬಂದಿದೆ. ಮುಂದಿನ ತಿಂಗಳು ಅವರ ಮದುವೆ ನಿಗದಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಾಲಕಿ ಕೊಲೆಯಾದ ಬಳಿಕ ಪಿಎಸ್ಐ ಅನ್ನಪೂರ್ಣ ಆಕೆಯ ಮುಖವನ್ನು ನೋಡಿ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕಿದ್ದರು. ಅಲ್ಲದೇ ಮಗುವನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿ, ತಕ್ಕ ಕ್ರಮ ಕೈಗೊಳ್ಳುವುದಾಗಿ ಶಪಥ ಮಾಡಿದ್ದರು.
ಇದಾದ ಸ್ವಲ್ಪ ಹೊತ್ತಿನಲ್ಲೇ ಪಿಎಸ್ಐ ಅನ್ನಪೂರ್ಣ ಅವರ ತಂಡಕ್ಕೆ ಆರೋಪಿ ಸೆರೆ ಸಿಕ್ಕಿದ್ದಾನೆ. ಪೊಲೀಸರು ಬಂಧಿಸಲು ಹೋದಾಗ ಆರೋಪಿ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದು, ಈ ವೇಳೆ ಪಿಎಸ್ಐ ಅನ್ನಪೂರ್ಣ, ಆತ್ಮರಕ್ಷಣೆಗಾಗಿ 2 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದರು. ಆದರೆ ಆತ ಲೆಕ್ಕಿಸದೇ ತಪ್ಪಿಸಿಕೊಳ್ಳಲು ಹೋದಾಗ ಕಾಲಿನತ್ತ ಗುಂಡು ಹಾರಿಸಿದರು. ಆದರೆ ಗುಂಡು ಬೆನ್ನಿಗೆ ನಾಟಿದೆ. ಕೂಡಲೇ ಗಾಯಗೊಂಡ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಆರೋಪಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಪಿಎಸ್ಐ ಅನ್ನಪೂರ್ಣ ಅವರ ಈ ಕಾರ್ಯಕ್ಕೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಘಟನೆಯ ಹಿನ್ನೆಲೆ ಏನು?
ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬಿಹಾರ ಮೂಲದ ಆರೋಪಿ ಬಾಲಕಿಯನ್ನು ಶೆಡ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್ನತ್ತ ಓಡಿ ಬಂದಿದ್ದರು. ಜನ ಬರುತ್ತಿರುವುದನ್ನು ಕಂಡ ಆರೋಪಿ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದನು.
