ಹುಲಿ ಬೆಡ್ರೂಮ್ಗೆ ದಾಳಿ: ಜಾರ್ಖಂಡ್ ಗ್ರಾಮದಲ್ಲಿ ಆತಂಕ, ಅರಣ್ಯ ಇಲಾಖೆ ರಕ್ಷಣೆ

ರಾಂಚಿ: ಸಾಮಾನ್ಯವಾಗಿ ಮನೆಯೊಳಗೆ ನಾಯಿಯೋ, ಬೆಕ್ಕೋ ಬಂದು ಸೇರಿಕೊಳ್ಳುವುದು ಸಾಮಾನ್ಯ. ಆದರೆ ಜಾರ್ಖಂಡ್ನ ರಾಂಚಿಯಲ್ಲಿ ಹುಲಿಯೊಂದು ಮನೆಯ ಬೆಡ್ರೂಮ್ಗೆ ಬಂದು ಅಡಗಿದ್ದ ಘಟನೆ ವರದಿಯಾಗಿದೆ. ಇಡೀ ಊರಿಗೆ ಆತಂಕ ಎದುರಾಗಿತ್ತು. ಹುಲಿ ಇದ್ದ ಮನೆಯ ಹೊರಗೆ ನೂರಾರು ಮಂದಿ ನೆರೆದಿದ್ದರು. ಮಾಹಿತಿ ಬಂದ ತಕ್ಷಣ ಅರಣ್ಯ ಇಲಾಖೆ ತಂಡ ಹುಲಿಯನ್ನು ರಕ್ಷಿಸಲು ಸ್ಥಳಕ್ಕೆ ತಲುಪಿತ್ತು.

ರಾಂಚಿಯ ಸಿಲ್ಲಿ ವಿಧಾನಸಭಾ ಕ್ಷೇತ್ರದ ಮರ್ದು ಗ್ರಾಮದಲ್ಲಿ ವಾಸಿಸುವ ಪುರಂದರ್ ಮಹತೋ ಎಂಬುವವರು ತಮ್ಮ ಕೋಣೆಯಿಂದ ವಿಚಿತ್ರ ಶಬ್ದ ಕೇಳಿಸುತ್ತಿದೆ ಎಂದು ಕೋಣೆಯೊಳಗೆ ಇಣುಕಿ ನೋಡಿದಾಗ ದೈತ್ಯ ಹುಲಿ ಕಣ್ಣಿಗೆ ಬಿದ್ದಿದೆ. ಹುಲಿಯನ್ನು ಕೆರಳಿಸದೆ ಮತ್ತು ಯಾವುದೇ ಶಬ್ದ ಮಾಡದೆ ಹೊರಗಿನಿಂದ ಕೋಣೆಯ ಬಾಗಿಲನ್ನು ಮುಚ್ಚಿ ಬಹಳ ಎಚ್ಚರಿಕೆಯಿಂದ ಹೊರಗೆ ಬಂದಿದ್ದರು.
ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರಲಾಗಿತ್ತು. ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯವನ್ನು ತಲುಪಿಸಿದರು, ಹುಲಿ ಗ್ರಾಮದಲ್ಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಇಡೀ ಗ್ರಾಮದಲ್ಲಿ ಕೋಲಾಹಲ ಉಂಟಾಗಿತ್ತು. ಗ್ರಾಮಸ್ಥರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಬಂದು ಹುಲಿಯನ್ನು ಬಂಧಿಸಿದ್ದ ಮನೆಯ ಹೊರಗೆ ಜಮಾಯಿಸಿದರು.

ಮಾಹಿತಿ ಬಂದ ತಕ್ಷಣ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಲುಪಿ ಅರಿವಳಿಕೆ ಇಂಜೆಕ್ಷನ್ ನೀಡುವ ಮೂಲಕ ಹುಲಿಯನ್ನು ರಕ್ಷಿಸಿತು. ಹುಲಿಯನ್ನು ರಕ್ಷಿಸಲು ಪಲಮು ಹುಲಿ ಅಭಯಾರಣ್ಯದಿಂದ ಅರಣ್ಯ ಇಲಾಖೆಯ ವಿಶೇಷ ತಂಡವನ್ನು ಕರೆಸಲಾಗಿದೆ. ಈ ಘಟನೆಯ ನಂತರ, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಜಾರ್ಖಂಡ್ನ ಗರ್ವಾ ಮತ್ತು ಲತೇಹಾರ್ ಜಿಲ್ಲೆಗಳಲ್ಲಿ ಚಿರತೆಯಿಂದ ಜನರು ಹಿಂದೆ ತುಂಬಾ ತೊಂದರೆಗೊಳಗಾಗಿದ್ದರು. ಆರೇಳು ಮಂದಿಯನ್ನು ಹತ್ಯೆ ಮಾಡಿತ್ತು.