ಕೂಳೂರು ಸೇತುವೆ ಬಳಿ ಮೂರು ದಿನ ರಸ್ತೆ ತಡೆ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಸೂಚನೆ

ಮಂಗಳೂರು: ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೇ ಸೇತುವೆಯ ಬಳಿಯ ಕೆಐಒಸಿಎಲ್ ಜಂಕ್ಷನ್ನಿಂದ ಅಯ್ಯಪ್ಪ ಗುಡಿಯವರೆಗೆ ಜುಲೈ 22ರ ರಾತ್ರಿ 8:00 ಗಂಟೆಯಿಂದ ಜುಲೈ 25ರ ಬೆಳಗ್ಗೆ 8:00 ರವರೆಗೆ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ. ಹೀಗಾಗಿ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.

ರಸ್ತೆ ದುರಸ್ತಿ ಹಿನ್ನೆಲೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತದೆ. ಆದ್ದರಿಂದ ಕೋಡಿಕಲ್ ಕ್ರಾಸ್ನಿಂದ ಕೆಐಒಸಿಎಲ್ ಜಂಕ್ಷನ್ವರೆಗೆ ಅದೇ ರೀತಿ ಪಣಂಬೂರು ಜಂಕ್ಷನ್ನಿಂದ ಕೆಐಒಸಿಎಲ್ ಜಂಕ್ಷನ್ವರೆಗೆ ಸಂಚಾರ ದಟ್ಟಣೆ ಹೆಚ್ಚಾಗಬಹುದಾಗಿದೆ.ಈ ಹಿನ್ನೆಲೆ ಕೆಐಒಸಿಎಲ್ ಜಂಕ್ಷನ್ ಬಳಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಹೊಸ ಸೇತುವೆ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಚಲಿಸುವುದು ಹಾಗೂ ಪೀಕ್ ಅವರ್ಸ್ ನಲ್ಲಿ ಸದರಿ ಮಾರ್ಗದಲ್ಲಿ ವಾಹನ ಸಂಚಾರವನ್ನು ತಪ್ಪಿಸಲು ಈ ಕೆಳಗೆ ನಮೂದಿಸಿದ ಬದಲಿ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
ವಾಹನ ಚಾಲಕರು ಮತ್ತು ಸಾರ್ವಜನಿಕರು ಉಪಯೋಗಿಸಬಹುದಾದ ಇತರ ಮಾರ್ಗಗಳು:
👉ಉಡುಪಿ ಕಡೆಯಿಂದ ಬೆಂಗಳೂರು, ಮೈಸೂರು ಕಡೆಗೆ ಚಲಿಸುವ ಎಲ್ಲಾ ವಿಧದ ಲಘು ವಾಹನ ಹಾಗೂ ಲಾರಿಗಳು ಪಡುಬಿದ್ರೆ ಕಡೆಯಿಂದ ಕಾರ್ಕಳ ಮೂಡಬಿದ್ರೆ ಮಾರ್ಗವಾಗಿ ಸಂಚರಿಸುವುದು.
👉ಉಡುಪಿ/ಮುಲ್ಕಿ ಕಡೆಯಿಂದ ಮಂಗಳೂರು ನಗರ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಮುಲ್ಕಿ ವಿಜಯ ಸನ್ನಿಧಿ ಬಳಿ ಎಡಕ್ಕೆ ತಿರುವು ತೆಗೆದುಕೊಂಡು ಕಿನ್ನಿಗೋಳಿ – ಕಟೀಲು – ಬಜಪೆ – ಮರವೂರು – ಕಾವೂರು ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು.
👉ಮಂಗಳೂರು ನಗರ / ಕೊಟ್ಟಾರ ಚೌಕಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಕಾವೂರು – ಮರವೂರು – ಬಜಪೆ – ಕಟೀಲು – ಕಿನ್ನಿಗೋಳಿ – ಮುಲ್ಕಿ ವಿಜಯ ಸನ್ನಿಧಿ ಮೂಲಕ ಉಡುಪಿ ಕಡೆಗೆ ಸಂಚರಿಸುವುದು.
👉ಬಿ.ಸಿ.ರೋಡ್, ಬೆಂಗಳೂರು ಹಾಗೂ ಮೈಸೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ಲಾರಿ ಹಾಗೂ ಲಘು ವಾಹನಗಳು ಬೀಕರ್ನಕಟ್ಟೆ- ಕುಲಶೇಖರ – ವಾಮಂಜೂರು – ಕೈಕಂಬ – ಬಜಪೆ – ಕಟೀಲು – ಕಿನ್ನಿಗೋಳಿ – ಮುಲ್ಕಿ ವಿಜಯ ಸನ್ನಿಧಿ ಮೂಲಕ ಉಡುಪಿ ಕಡೆಗೆ ಸಂಚರಿಸುವುದು.
👉MCF, ONGC, HPCL, BPCL, IOCL, Total Gas, BASF, ರಫ್ತಾರ್, ಏಜಿಸ್ ಇತ್ಯಾದಿ ಕಂಪೆನಿಗಳಿಗೆ ಬರುವ ಹಾಗೂ ಕಂಪೆನಿಯಿಂದ ಹೊರಡುವ ಎಲ್ಲಾ ರೀತಿಯ ಗ್ಯಾಸ್ ಟ್ಯಾಂಕರ್, ಡಿಸೇಲ್/ಪೆಟ್ರೋಲ್ ಟ್ಯಾಂಕರ್ ಹಾಗೂ ಇತರ ಘನ ವಾಹನಗಳು ಕೂಳೂರು ಹೊಸ ಸೇತುವೆಯಲ್ಲಿ ಸಂಚಾರ ದಟ್ಟಣೆಯ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚರಿಸಲು ಕೋರಿದೆ.
