ಸನ್ಯಾಸಿಗಳ ವೇಷದಲ್ಲಿ ಮಂಕು ಬೂದಿ ಎರಚಿ ಕಳ್ಳತನ; ಚಿನ್ನದ ಉಂಗುರ ಮತ್ತು ನಗದು ಕದ್ದೊಯ್ದು ಪರಾರಿ

ಕಾರ್ಕಳ : ಸನ್ಯಾಸಿಗಳ ವೇಷ ಧರಿಸಿ ಬಂದ ಇಬ್ಬರು ಅಂಗಡಿಯೊಂದಕ್ಕೆ ನುಗ್ಗಿ ಅಲ್ಲಿದ್ದ ಆಶೀರ್ವಾದ ಮಾಡುವ ನೆಪದಲ್ಲಿ ಮಂಕು ಬೂದಿ ಎರಚಿ ಅಂಗಡಿ ಮಾಲೀಕನ ಚಿನ್ನದ ಉಂಗುರ ಮತ್ತು ನಗದು ಕದ್ದು ಹೋದ ಘಟನೆ ಅಜೆಕಾರಿನ ಅಂಗಡಿಯೊಂದರಲ್ಲಿ ನಡೆದಿದೆ.
ಅಜೆಕಾರಿನ ಸುಧಣ್ಣ ರೆಸಿಡೆನ್ಸಿ ಸಮೀಪದ ಶ್ರೀದುರ್ಗಾ ಎಂಟರ್ ಪ್ರೈಸಸ್ ಎಲೆಕ್ಟ್ರಾನಿಕ್ಸ್ ಅಂಗಡಿ ಒಳಗೆ ಬಂದ ಸನ್ಯಾಸಿಗಳು ಹಿಂದಿ ಭಾಷೆಯಲ್ಲಿ ‘ನಿಮಗೆ ಒಳ್ಳೆಯದಾಗುವಂತೆ ಆರ್ಶಿವಾದ ಮಾಡುತ್ತೇವೆ’ ಎಂದು ಹೇಳಿ ಮಾಲೀಕನ ಉಂಗುರ, ನಗದು ಅಪಹರಿಸಿ ಪರಾರಿಯಾಗಿದ್ದಾರೆ.
ಅಂಗಡಿಗೆ ಬಂದ ಸನ್ಯಾಸಿಗಳಲ್ಲಿ ಒಬ್ಬ ಮಾಲೀಕನ ತಲೆ ಮೇಲೆ ಕೈ ಇಟ್ಟು ಅವರ ಗಮನ ಬೇರೆಡೆ ಸೆಳೆದಿದ್ದು, ಇನ್ನೊಬ್ಬ ಮಾಲೀಕನ ಬಲಕ್ಕೆ ಹಿಡಿದು ಗಮನಕ್ಕೆ ಬಾರದಂತೆ ಬೆರಳಿನಲ್ಲಿದ್ದ 2 ಪವನ್ ತೂಕದ ಚಿನ್ನದ ಉಂಗುರ, ಕಿಸೆಯಲ್ಲಿದ್ದ ₹2 ಸಾವಿರ ಕಳವು ಮಾಡಿ ಅಂಗಡಿಯಿಂದ ಹೊರಟು ಹೋಗಿದ್ದಾರೆ. ಮಾಲೀಕರಿಗೆ ಸ್ವಲ್ಪ ಸಮಯ ಮಂಕು ಬಡಿದಂತಾಗಿದ್ದು, 3- 4 ನಿಮಿಷಗಳ ಬಳಿಕ ಎಚ್ಚರಗೊಂಡಾಗ ಸನ್ಯಾಸಿಗಳು ಹೊರಟು ಹೋಗಿರುವುದು ಗಮನಕ್ಕೆ ಬಂದಿದೆ. ಅಕ್ಕಪಕ್ಕದ ಅಂಗಡಿಯವರಲ್ಲಿ ವಿಚಾರಿಸಿದಾಗ ಆ ಇಬ್ಬರು ಎಲ್ಲಿ ಹೋದರು ಎಂದು ತಿಳಿಯಲಿಲ್ಲ. ಈ ಬಗ್ಗೆ ಮಾಲೀಕ ಕಾಪುವಿನ ರಂಜಿತ್ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.