ಬೀಗ ಹಾಕಿದ ಮನೆಯಲ್ಲಿ ಕಳ್ಳತನ – ಚಿನ್ನಾಭರಣ, ನಗದು ಕಳವು; ಲಾಕರ್ ಕೀ ನಾಪತ್ತೆ!

ಉಡುಪಿ: ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಉಡುಪಿಯ ಸುಧೀರ್ ಕುಮಾರ್ ಅವರು ಜೂ. 20ರಂದು ಮನೆಗೆ ಬೀಗ ಹಾಕಿ ಕೇರಳದ ಕಾಸರಗೋಡಿನಲ್ಲಿ ನಡೆದ ಕುಟುಂಬದ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಜೂ.
24ರಂದು ಮಧ್ಯಾಹ್ನ ಮನೆಗೆ ಬಂದು ಬೀಗ ತೆರೆದು ಒಳಗೆ ಪ್ರವೇಶಿಸಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಕಳ್ಳರು ಕಪಾಟಿನಲ್ಲಿರುವ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಸಣ್ಣ ಬೆಳ್ಳಿಯ ದೀಪಗಳು, ಚಿನ್ನದ ತಾಯಿತ, 35,000 ರೂ. ನಗದು ಸಹಿತ ಒಟ್ಟು 63,000 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಕರ್ಣಾಟಕ ಬ್ಯಾಂಕ್ ಅಂಬಾಗಿಲು ಶಾಖೆಯ ಲಾಕರ್ ಕೀ ಕೂಡ ಕಳವು ಮಾಡಿದ್ದಾರೆ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.