‘ದಿ ಕೇರಳ ಸ್ಟೋರಿ 2’ ವಿವಾದ: ಸಿನಿಮಾ ಬಿಡುಗಡೆ ಬಗ್ಗೆ ಕೇರಳ ಸಿಎಂ ಕೆಂಡಾಮಂಡಲ!

2023ರಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ವಿವಾದ ಸೃಷ್ಟಿ ಆಗಿತ್ತು. ಈಗ ಆ ಸಿನಿಮಾದ ಸೀಕ್ವೆಲ್ ಬರುತ್ತಿದೆ. ಈ ಬಾರಿ ಕೂಡ ವಿವಾದಗಳು ಶುರುವಾಗಿವೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ. ‘ದಿ ಕೇರಳ ಸ್ಟೋರಿ 2’ (The Kerala Story 2) ಕುರಿತಂತೆ ಈಗಾಗಲೇ ಪರ-ವಿರೋಧದ ಚರ್ಚೆ ಶುರು ಆಗಿದೆ.
‘ದ್ವೇಷ ಹುಟ್ಟಿಸುವ ‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗದ ಬಿಡುಗಡೆಯ ಕುರಿತಾದ ವರದಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಮೊದಲ ಭಾಗದಲ್ಲಿ ಕೋಮುವಾದಿ ಅಜೆಂಡಾ ಮತ್ತು ಸ್ಪಷ್ಟ ಸುಳ್ಳುಗಳನ್ನು ಈಗಾಗಲೇ ನೋಡಿರುವ ಕೇರಳ ಜನತೆ, ನಮ್ಮ ಜಾತ್ಯತೀತ ರಚನೆಯನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವ ಈ ಸಿನಿಮಾವನ್ನು ಮತ್ತೊಮ್ಮೆ ತಿರಸ್ಕರಿಸುತ್ತಾರೆ’ ಎಂದು ಪಿಣರಾಯಿ ವಿಜಯನ್ ಅವರು ಟ್ವೀಟ್ ಮಾಡಿದ್ದಾರೆ.
‘ಕೋಮು ವೈಷಮ್ಯವನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವ ಕಲ್ಪಿತ ನಿರೂಪಣೆಗಳು ಹೇಗೆ ಮುಕ್ತವಾಗಿ ಅಂಗೀಕರಿಸಲ್ಪಡುತ್ತವೆ ಮತ್ತು ಕಲೆಯ ವಿಮರ್ಶಾತ್ಮಕ ಅಭಿವ್ಯಕ್ತಿಗಳು ಬಾಯಿ ಮುಚ್ಚಲ್ಪಡುತ್ತವೆ ಎಂಬುದು ಆಘಾತಕಾರಿ. ನಮ್ಮ ಸಾಮರಸ್ಯದ ಭೂಮಿಯನ್ನು ಭಯೋತ್ಪಾದನೆಯ ಕೇಂದ್ರದಂತೆ ಚಿತ್ರಿಸುವ ಈ ಪ್ರಯತ್ನಗಳ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲಬೇಕು. ಸತ್ಯ ಯಾವಾಗಲೂ ಗೆಲ್ಲುತ್ತದೆ’ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪೋಸ್ಟ್ ಮಾಡಿದ್ದಾರೆ.ಇತ್ತೀಚೆಗೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ಸಿನಿಮಾದ ಕಥೆ ಏನು ಎಂಬುದರ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿದೆ. ಹಿಂದೂ ಹುಡುಗಿಯರನ್ನು ಮೋಸದಿಂದ ಪ್ರೀತಿ, ಮದುವೆಯ ಬಲೆಗೆ ಬೀಳಿಸಿ ಹೇಗೆ ಮತಾಂತರ ಮಾಡಲಾಗುತ್ತದೆ ಮತ್ತು ಹಿಂಸೆ ನೀಡಲಾಗುತ್ತದೆ ಎಂಬುದನ್ನು ಈ ಟ್ರೇಲರ್ನಲ್ಲಿ ತೋರಿಸಲಾಗಿದೆ.ಫೆಬ್ರವರಿ 27ಕ್ಕೆ ‘ದಿ ಕೇರಳ ಸ್ಟೋರಿ 2’ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಕಾಮಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್ಲಾಲ್ ಶಾ ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಅದಿತಿ ಭಾಟಿಯಾ, ಐಶ್ವರ್ಯಾ ಊಜಾ, ಉಲ್ಕಾ ಗುಪ್ತಾ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಟ್ರೇಲರ್ ಈಗಾಗಲೇ ವೈರಲ್ ಆಗಿದೆ.
