ಮಸೀದಿಗಳ ವಕ್ಫ್ ಸ್ಥಾನಮಾನ: ಕಾನೂನು ಮತ್ತು ಶರೀಯತ್ ಅನ್ವಯ

ಮಸೀದಿಗಳು ಮುಸ್ಲಿಮರ ಅವಿಭಾಜ್ಯ ಅಂಗವಾಗಿದೆ. ಒಬ್ಬ ಮುಸ್ಲಿಂ ನಿರ್ದಿಷ್ಟ ಸಮಯದಲ್ಲಿ ಸಾಮೂಹಿಕ ನಮಾಜಿಗೆ ಹಾಜರಾಗುವ ಮೂಲಕ ಮಸೀದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಏಕೆಂದರೆ ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸುವ ನಮಾಜ್ ಮನೆಯಲ್ಲಿ ನಿರ್ವಹಿಸುವ ನಮಾಜಿಗಿಂತ ಎರಡು ಪಟ್ಟು ಶ್ರೇಷ್ಠವಾಗಿರುತ್ತದೆ.
ಒಂದು ಕಟ್ಟಡವು ಮಸೀದಿಯ ಸ್ಥಾನಮಾನವನ್ನು ಪಡೆಯಬೇಕಾದರೆ ಅದು ಶರೀಯತ್ ನಿರ್ದೇಶಿಸಿದ ಪಾವಿತ್ರ್ಯತೆ ಮತ್ತು ಸಿಂಧುತ್ವದ ಪ್ರಾಥಮಿಕ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.ಆದುದರಿಂದ ಖಾಸಗಿ ಒಡೆತನಕ್ಕೆ ಸೇರಿದ ಜಮೀನಿನಲ್ಲಿ ಮಸೀದಿಗಳ ರಚನೆಯನ್ನು ಮಸೀದಿಗಳಾಗಿ ಪರಿಗಣಿಸಲಾಗುವುದಿಲ್ಲಕುರಾನ್ ಹೇಳುತ್ತದೆ. “ಖಂಡಿತವಾಗಿಯೂ ಮಸೀದಿಗಳು ಅಲ್ಲಾಹನಿಗೆ ಸೇರಿದವುಗಳು ..” (72:18)
ಮಸೀದಿಗಳು ಅಲ್ಲಾಹನಿಗೆ ಮಾತ್ರ ಎಂಬ ಕುರಾನ್ ಹೇಳಿಕೆಯು ಬಹಳ ಸಮಗ್ರ ಅರ್ಥವನ್ನು ಹೊಂದಿದೆ. ಒಬ್ಬ ವ್ಯಕ್ತಿಯು ತನ್ನ ಖಾಸಗಿ ಭೂಮಿಯಲ್ಲಿ ಮಸೀದಿಯನ್ನು ಸ್ಥಾಪಿಸಲು ಉದ್ದೇಶಿಸಿದಾಗ, ಅವನು ಇಸ್ಲಾಮಿ ಕಾನೂನಿನ ಎರಡು ಅಧಿಕೃತ ನಿರ್ದೇಶನಗಳನ್ನು ಜಾರಿಗೊಳಿಸಬೇಕು, ಅದನ್ನು ವಕ್ಫ್ ಮಾಡುವ ಪ್ರಕ್ರಿಯೆ ಎಂದು ಹೇಳಲಾಗುತ್ತದೆ.
ಮಸೀದಿ ನಿರ್ಮಿಸಲು ಉದ್ದೇಶಿಸಿರುವ ಭೂಮಿಯ ಮಾಲಕತ್ವವನ್ನು ಅದರ ಖಾಸಗಿ ಮಾಲಕತ್ವದಿಂದ ಮುಕ್ತಗೊಳಿಸುವುದು ಮತ್ತು ಅಲ್ಲಾಹನ ಮಾಲಕತ್ವಕ್ಕೆ ನೋಂದಾಯಿಸುವುದು…, ಮಸೀದಿಯೊಂದು ವಕ್ಫ್ ಆಗುವಿಕೆಗೆ ಇರುವ ಇಸ್ಲಾಮಿ ಕಾನೂನಿನ ಶರತ್ತುಗಳಾಗಿದೆ. ಈ ಕಾರಣದಿಂದ ಮಸೀದಿ ಅಥವಾ ಅದು ನೆಲೆ ನಿಂತಿರುವ ಜಮೀನಿನ ಮಾಲಕತ್ವವನ್ನು ಯಾವುದೇ ಸಂಸ್ಥೆ ಅಥವಾ ಘಟಕಕ್ಕೆ ಸಹಜವಾಗಿಯೋ ಅಥವಾ ಕಾನೂನಿನ ಮೂಲಕವೋ ವರ್ಗಾಯಿಸುವುದಾಗಲಿ ಅಥವಾ ಮಾರಾಟ ಮಾಡಲಿಕ್ಕಾಗಲಿ ಸಾಧ್ಯವಾಗಲಾರದು. ಏಕೆಂದರೆ ವಕ್ಫ್ ಎಂಬುವುದು ಶಾಶ್ವತವಾಗಿ ನೆಲೆಗೊಳ್ಳುವ ಘಟಕವಾಗಿದೆ.
ವಕ್ಫ್ ಎಂಬ ಪರಿಕಲ್ಪನೆಯ ಮೂಲವು ಪ್ರವಾದಿ ಮುಹಮ್ಮದ್ (ಸ.ಅ) ಅವರ ಜೀವಿತಾವಧಿಯಲ್ಲಿಯೇ ಪ್ರಾರಂಭಗೊಂಡಿತ್ತು. ಅವರು ಮದೀನಾದಲ್ಲಿ ತಮ್ಮ ಅನುಯಾಯಿಗಳಿಂದ ದಾನಗಳನ್ನು ಅಪೇಕ್ಷಿಸುತ್ತಿದ್ದರು. ಹದೀಸ್ ಕ್ರೂಡೀಕರಣದ ಮಹಾನ್ ವಿದ್ವಾಂಸರಾದ ಬುಖಾರಿಯವರ ವರದಿ ಪ್ರಕಾರ ಆರಂಭಿಕ ವಕ್ಫ್ ಎರಡನೇ ಖಲೀಫ್ ಉಮರ್ ಅವರಿಂದ ನಡೆದಿತ್ತು. “ಇಬ್ನ್ ಉಮರ್ ವರದಿ ಮಾಡಿದ ಹದೀಸೊಂದರಲ್ಲಿ ಹೀಗೆ ದಾಖಲಾಗಿದೆ. ಉಮರ್ ಇಬ್ನ್ ಅಲ್-ಖತ್ತಬ್ ಖೈಬರಿನಲ್ಲಿ ಭೂಮಿಯನ್ನು ಪಡೆದರು; ಅವರು ಪ್ರವಾದಿ (ಸ) ರವರ ಬಳಿಗೆ ಅದರ ಬಗ್ಗೆ ಸಮಾಲೋಚಿಸಲು ಬಂದರು. ಅವರು ಹೇಳಿದರು, ‘ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಖೈಬರ್ನಲ್ಲಿ ಭೂಮಿ ಇದೆ, ಅದಕ್ಕಿಂತ ಹೆಚ್ಚಿನ ಬೆಲೆಬಾಳುವ ಆಸ್ತಿಯನ್ನು ನಾನು ಎಂದಿಗೂ ಪಡೆದಿಲ್ಲ; ಅದರ ಬಗ್ಗೆ ನೀವು ಏನು ಸಲಹೆ ನೀಡುತ್ತೀರಿ?’ ಅವರು ಹೇಳಿದರು; ‘ನೀವು ಬಯಸಿದರೆ, ಆಸ್ತಿಯನ್ನು ಬೇರ್ಪಡಿಸಲಾಗದಂತೆ ಮಾಡಿ ಮತ್ತು ಅದರಿಂದ ಬರುವ ಲಾಭವನ್ನು ದಾನವಾಗಿ ನೀಡಿ ಎಂದರು. ‘”
ಆದ್ದರಿಂದ, “ವಕ್ಫ್” ನಿಜವಾಗಿಯೂ ಏನೆಂದು ಅರ್ಥಮಾಡಿಕೊಳ್ಳಲು ಇದು ಸಹಾಯಕವಾಗಿದೆ. ಅಕ್ಷರಶಃ, ವಕ್ಫ್ ಎಂಬ ಪದದ ಅರ್ಥ ನಿಲ್ಲುವುದು,ನೆಲೆನಿಲ್ಲಿಸುವುದು ಎಂದಾಗಿದೆ
ಥಾಮಸ್ ಪ್ಯಾಟ್ರಿಕ್ ಹ್ಯೂಸ್ ಅವರ ಇಸ್ಲಾಂ ನಿಘಂಟು (ರೂಪಾ & ಕಂಪನಿ, ದೆಹಲಿ; 1999) ವಕ್ಫ್ ಎಂಬ ಪದವನ್ನು ವಿವರಿಸುತ್ತದೆ. ಇದು ದತ್ತಿ ಬಳಕೆ ಮತ್ತು ಅಲ್ಲಾಹನ ಸಂತೃಪ್ತಿಗಾಗಿ ಆಸ್ತಿಯ ವಿನಿಯೋಗ ಅಥವಾ ಸಮರ್ಪಣೆಯಾಗಿದೆ; ಅಂತಹ ದತ್ತಿ ಅಥವಾ ವಿನಿಯೋಗದ ಉದ್ದೇಶವು ಶಾಶ್ವತ ಸ್ವರೂಪದ್ದಾಗಿರಬೇಕು ಮತ್ತು ಯಾವುದೇ ಆಸ್ತಿ ಅಥವಾ ಭೂಮಿಯನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಲು ಸಾಧ್ಯವಾಗಬಾರದು.
ಆಯಾ ರಾಜ್ಯಗಳ ವಕ್ಫ್ ಮಂಡಳಿಗಳು ಧಾರ್ಮಿಕ ದತ್ತಿ ಉದ್ದೇಶಗಳಿಗಾಗಿ ಅಲ್ಲಾಹನ ಹೆಸರಿನಲ್ಲಿ ಮಸೀದಿ ಕಟ್ಟಡಗಳನ್ನು ನೋಂದಾಯಿಸುವ ಅಧಿಕಾರವನ್ನು ಹೊಂದಿ ಆಸ್ತಿಯು ಅಲ್ಲಾಹನ ಮಾಲಕತ್ವಕ್ಕೆ ವರ್ಗಾವಣೆ (ಮ್ಯುಟೇಷನ್) ಆದ ಬಗ್ಗೆ ಕಾನೂನಾನಾತ್ಮಕವಾದ ದಸ್ತಾವೇಜುಗಳನ್ನು ನೀಡುತ್ತದೆ.ಒಂದು ವೇಳೆ ವಕ್ಫ್ ಮಂಡಳಿಯಲ್ಲಿ ನೋಂದಣಿ ಜಾರಿಯಲ್ಲಿಲ್ಲದಿದ್ದರೆ, ಅವುಗಳು ವಕ್ಫ್ ಆಗಿರುವ ಮಸೀದಿಗಳಾಗಿರಲು ಸಾಧ್ಯವಿಲ್ಲ. ಏಕೆಂದರೆ, ಭಾರತೀಯ ಹಿನ್ನಲೆಯಲ್ಲಿ ವಕ್ಫ್ ಗಳು (ಧಾರ್ಮಿಕ ದತ್ತಿಗಳು) ಸರಕಾರದ ಎರಡು ಸರ್ವೇ ಮತ್ತು ಗಝೆಟ್ ನೋಟಿಫಿಕೇಶನ್ ಎಂಬ ಕಾನೂನು ಪ್ರಕ್ರಿಯೆಯಿಂದ ಮಾತ್ರ ನಿರ್ಧರಿಸಲ್ಪಡುತ್ತವೆ.
ಮೇಲಿನ ಉದಾಹರಣೆಗಳ ಪ್ರಮುಖ ಅಂಶಗಳನ್ನು ಈ ಕೆಳಗಿನಂತೆ ಸಂಕ್ಷೇಪಿಸಬಹುದು:
1) ಮಸೀದಿಯ ಒಡೆತನದ ಭೂಮಿಯನ್ನು ಖಾಸಗಿ ವ್ಯಕ್ತಿಯ ಹಕ್ಕಿನಿಂದ ಬಿಡುಗಡೆ ಮಾಡಬೇಕು ಮತ್ತು ಕಾನೂನುಬದ್ಧವಾಗಿ ಅಲ್ಲಾಹನ ಹೆಸರಿನಲ್ಲಿ ನೋಂದಾಯಿಸಿರತಕ್ಕದ್ದು.
2) ವರ್ಗಾವಣೆಗೊಂಡ (ವಕ್ಫ್ ಆದ)ಆಸ್ತಿಯ ಮಾಲಕತ್ವವನ್ನು ಯಾವುದೇ ಸಂದರ್ಭದಲ್ಲಿ, ಸಹಜವಾಗಿ ಅಥವಾ ಕಾನೂನುಬದ್ಧವಾಗಿ ಯಾವುದೇ ಇತರ ಘಟಕ ಅಥವಾ ಸಂಸ್ಥೆಗೆ ವರ್ಗಾಯಿಸಲು ಸಾಧ್ಯವಾಗಕೂಡದು.
3) ದಾನ ಮಾಡಿದ ಆಸ್ತಿ ಶಾಶ್ವತ ಸ್ವರೂಪದ್ದಾಗಿರತಕ್ಕದ್ದು.
ಆದರೆ ಭಾರತೀಯ ಟ್ರಸ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನೋಂದಾಯಿಸಲಾದ ಮಸೀದಿ ಮತ್ತು ಅದರ ಜಮೀನು, ಆಸ್ತಿಗಳು ವಕ್ಫ್ ಆಗುವಿಕೆಯ ಅನುಸರಣೆಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತವೆ…
ಪ್ರಸ್ತುತ ಕಾಲಘಟ್ಟದಲ್ಲಿ ಮಸೀದಿಗಳ ಸ್ಥಾಪನೆ ಮತ್ತು ಅದರ ಕಾರ್ಯಕಾರಿ ಸಮಿತಿಗಳನ್ನು ಭಾರತೀಯ ಟ್ರಸ್ಟ್ ಕಾಯ್ದೆ 1882 ರ ಅಡಿಯಲ್ಲಿ ನೋಂದಾಯಿಸಿ ಕಾರ್ಯನಿರ್ವಹಿಸುವುದು ಬಹಳ ಸಾಮಾನ್ಯವಾಗಿದೆ. ವಾಸ್ತವವಾಗಿ, ಟ್ರಸ್ಟ್ ಕಾಯ್ದೆಗಳ ಅಡಿಯಲ್ಲಿ ಅಲ್ಲಾಹನ ಮನೆಯ ನೋಂದಣಿಯು ಶರೀಯತ್ತಿನ ಅನುಸರಣೆಗೆ ಸಂಬಂಧಿಸಿದಂತೆ ಹಲವಾರು ನ್ಯೂನತೆಗಳನ್ನು ತರುತ್ತದೆ. ಏಕೆಂದರೆ ಭಾರತೀಯ ಟ್ರಸ್ಟ್ ಕಾಯ್ದೆಯು ಖಾಸಗಿ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದ ಅಥವಾ ಆಸ್ತಿಯ ಮಾಲಕತ್ವವನ್ನು ಟ್ರಸ್ಟಿಗಳಿಗೆ ವರ್ಗಾಯಿಸಿ ಫಲಾನುಭವಿಗಳಿಗೆ ಅದರ ಲಾಭವನ್ನು ವಿತರಿಸುವ ಹಕ್ಕು ಬಾಧ್ಯತೆಗಳ ಬಗೆಗಿರುವ ಕಾನೂನುಗಳಾಗಿವೆ.
ಅಲ್ಲಾಹನ ಸಂತೃಪ್ತಿಯ ಉದ್ದೇಶದಿಂದ ಮಸೀದಿ ನಿರ್ಮಾಣಕ್ಕಾಗಿ ತನ್ನ ಖಾಸಗಿ ಭೂಮಿಯನ್ನು ದಾನ ಮಾಡುವ ವ್ಯಕ್ತಿಯು, ಭೂಮಿಯ ಮಾಲಕತ್ವದ ಹಕ್ಕನ್ನು ಅಲ್ಲಾಹನಿಗೆ ವರ್ಗಾಯಿಸುವ ಬದಲು ಟ್ರಸ್ಟ್ ಮಂಡಳಿಗಳಿಗೆ ವರ್ಗಾಯಿಸುತ್ತಾನೆ. ಫಲಾನುಭವಿಗಳು ತಮ್ಮ ಪ್ರಯೋಜನಕಾರಿ ಹಿತಾಸಕ್ತಿಗಳನ್ನು ಅನುಭವಿಸುವ ಮತ್ತು ಟ್ರಸ್ಟಿಗಳು ಅದನ್ನು ಇತರರಿಗೆ ಮಾರಾಟ ಮಾಡುವ ಅಥವಾ ವರ್ಗಾಯಿಸುವ ವಿಶೇಷ ಹಕ್ಕುಗಳನ್ನು ಪಡೆಯುವ ಪ್ರಸ್ತುತ ಕಾಯಿದೆಯ ಬಳಕೆ, ಶರೀಯತ್ತಿನ ವಕ್ಫ್ ನಿಯಮಗಳ ಬೇಡಿಕೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ.
ಆದ್ದರಿಂದ, 1882 ರ ಭಾರತೀಯ ಟ್ರಸ್ಟ್ ಕಾಯ್ದೆಯ ಪ್ರಕಾರ ಟ್ರಸ್ಟ್ ಎಂಬ ಪದದ ವ್ಯಾಖ್ಯಾನವನ್ನು ಅರ್ಥಮಾಡಿಕೊಳ್ಳುವುದು ಬಹಳ ಸೂಕ್ತವಾಗಿದೆ.
“ಟ್ರಸ್ಟ್” ಎನ್ನುವುದು ಆಸ್ತಿಯ ಮಾಲಕತ್ವಕ್ಕೆ ಲಗತ್ತಿಸಲಾದ ಬಾಧ್ಯತೆಯಾಗಿದೆ, ಮತ್ತು ಮಾಲಕರು ಅಥವಾ ಅವರಿಂದ ಘೋಷಿಸಲ್ಪಟ್ಟ ಮತ್ತು ಸ್ವೀಕರಿಸಲ್ಪಟ್ಟ ಟ್ರಸ್ಟಿಗಳಿಂದ ಮತ್ತೊಬ್ಬರ ಪ್ರಯೋಜನಕ್ಕಾಗಿ ಸ್ಥಾಪಿಸಲ್ಪಟ್ಟವುಗಳಾಗಿರುತ್ತದೆ.ಯಾರ ಪ್ರಯೋಜನಕ್ಕಾಗಿ ವಿಶ್ವಾಸವನ್ನು ಸ್ವೀಕರಿಸಲಾಗಿದೆಯೋ ಆ ವ್ಯಕ್ತಿಯನ್ನು “ಫಲಾನುಭವಿ” ಎಂದು ಕರೆಯಲಾಗುತ್ತದೆ.
ಸರ್ವಶಕ್ತನಾದ ಅಲ್ಲಾಹನು ಪವಿತ್ರ ಕುರಾನಿನಲ್ಲಿ ಹೀಗೆ ಹೇಳುತ್ತಾನೆ: “ಅಲ್ಲಾಹನ ಮಸೀದಿಗಳನ್ನು ನಿರ್ವಹಿಸುವವರು, ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ನಂಬಿಕೆ ಇಡುವವರು, ಪ್ರಾರ್ಥನೆಯನ್ನು ಸ್ಥಾಪಿಸುವವರು ಮತ್ತು ಝಕಾತ್ ನೀಡುವವರು ಮತ್ತು ಅಲ್ಲಾಹನಲ್ಲದೆ ಯಾರಿಗೂ ಭಯಪಡದವರು ಮಾತ್ರ ಆಗಿರುತ್ತಾರೆ ಮತ್ತು ಅವರೇ ಸನ್ಮಾರ್ಗ ಲಭಿಸಿದವರು” (9:18)
ಇಮಾಮ್ ಜಾಫರ್ ಬಿ. ಮುಹಮ್ಮದ್ ಅಸ್-ಸಾದಿಕ್ (ರ) ಸಲಹೆ ನೀಡಿದ್ದಾರೆ: “ನೀವು ಮಸೀದಿಗಳಿಗೆ (ಹೆಚ್ಚಾಗಿ) ಭೇಟಿ ನೀಡಲು ಸೂಚಿಸಲಾಗಿದೆ ಏಕೆಂದರೆ ಇವು ಭೂಮಿಯ ಮೇಲಿನ ಅಲ್ಲಾಹನ ಮನೆಗಳಾಗಿವೆ.”
ಇಮಾಮ್ ಜಾಫರ್ ಬಿ. ಮುಹಮ್ಮದ್ ಅಸ್-ಸಾದಿಕ್ (ರ)ಹೇಳಿದರು. “ನಮಾಝನ್ನು (ಪ್ರಾರ್ಥನೆಗಳನ್ನು) ಅರಸುತ್ತಾ ಮಸೀದಿಗೆ ನಡೆಯುವವನು, ಅವನು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಗೂ – ಅವನಿಗೆ ಎಪ್ಪತ್ತು ಸಾವಿರ ಒಳ್ಳೆಯ ಕಾರ್ಯಗಳು ದೊರೆಯುತ್ತವೆ ಮತ್ತು ಅವನ ಸ್ಥಾನವು ಅದಕ್ಕೆ ತಕ್ಕಂತೆ ಹೆಚ್ಚಾಗುತ್ತದೆ……
ವಾಸ್ತವದಲ್ಲಿ, ಆಯಾ ರಾಜ್ಯಗಳ ವಕ್ಫ್ ಮಂಡಳಿಗಳಲ್ಲಿ ಮಸೀದಿಗಳ ನೋಂದಣಿ ಇಲ್ಲದೆ ಭಾರತೀಯ ಟ್ರಸ್ಟ್ ಕಾಯ್ದೆಯಡಿಯಲ್ಲಿ ಮಸೀದಿಗಳ ನೋಂದಣಿಯು ಅವುಗಳ ವಕ್ಫ್ ಆಗುವಿಕೆಯ ಪ್ರಕ್ರಿಯೆಗೆ ತಡೆಯಾಗಿದೆ .
ಸಮಾಲೋಚನೆ ಮತ್ತು ಅರ್ಹತಾ ಮಾನದಂಡಗಳನ್ನು ಅನುಸರಿಸಿ ಬಹುಮತದ ನಿರ್ಣಯದೊಂದಿಗೆ ಮಸೀದಿ ಸಮಿತಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆಯು ಟ್ರಸ್ಟ್ ಸ್ಥಾಪನೆಯ ಪ್ರಕ್ರಿಯೆಗೆ ತೀವ್ರವಾದ ಪ್ರತಿರೋದವನ್ನು ಒಡ್ದುತ್ತದೆ .
ಮೊಹಲ್ಲಾದ ಸದಸ್ಯರು ಪ್ರಜಾಸತ್ತಾತ್ಮಕವಾಗಿ ಮಸೀದಿ ಸಮಿತಿಗಳಿಗೆ ಸೇರುವ ಅವಕಾಶವನ್ನು ಟ್ರಸ್ಟ್ ಕಾಯಿದೆಯು ತಡೆಯುತ್ತದೆ.
“ ಮತ್ತು ಅಲ್ಲಾಹನ ಮಸೀದಿಗಳಿಂದ ತಡೆಯುವವನಿಗಿಂತ ಹೆಚ್ಚು ಅನ್ಯಾಯಶಾಲಿ ಯಾರು, ಅವುಗಳಲ್ಲಿ ಅವನ ಹೆಸರನ್ನು ಸ್ಮರಿಸಬೇಕು ಮತ್ತು ಅವುಗಳನ್ನು ಹಾಳುಮಾಡಲು ಶ್ರಮಿಸುವವನಿಗಿಂತ ಯಾರು ಹೆಚ್ಚು ಅನ್ಯಾಯವಂತರು? (ಇವುಗಳ ವಿಷಯದಲ್ಲಿ), ಭಯದಿಂದಲ್ಲದೆ ಅವರು ಅವುಗಳನ್ನು ಪ್ರವೇಶಿಸುವುದು ಅವರಿಗೆ ಸೂಕ್ತವಾಗಿರಲಿಲ್ಲ; ಅವರು ಇಹಲೋಕದಲ್ಲಿ ಅವಮಾನವನ್ನು ಎದುರಿಸಲಿದ್ದಾರೆ ಮತ್ತು ಪರಲೋಕದಲ್ಲಿ ಅವರಿಗೆ ದೊಡ್ಡ ಶಿಕ್ಷೆ ಸಿಗಲಿದೆ.” [ಅಲ್- ಕುರಾನ್, ಸೂರಾ ಅಲ್-ಬಕಾರ, ಅಧ್ಯಾಯ 2, ಶ್ಲೋಕ 114].
ಮನೆಯಲ್ಲಿ ಅಥವಾ ವಕ್ಫ್ ಆಗದ ಮಸೀದಿಗಳಲ್ಲಿ ನಿರ್ವಹಿಸುವ ನಮಾಜ್ ನಡುವೆ ಯಾವುದೇ ವ್ಯತ್ಯಾಸವಿಲ್ಲದಿರುವುದರಿಂದ, ವಕ್ಫ್ ಆಗಿರುವ ಮಸೀದಿಗಳಲ್ಲಿ ಲಭ್ಯವಿರುವ ದುಪ್ಪಟ್ಟು ಪ್ರತಿಫಲ ಲಭಿಸುವುದರಿಂದ ಸಂತ್ರಸ್ತರನ್ನಾಗಿಸುವುದು ಅನ್ಯಾಯವಾಗುತ್ತದೆ,
ಸಮಗ್ರವಾಗಿ ಅವಲೋಕಿಸಿದರೆ ಅಂತಹ ಮಸೀದಿಗಳು ಇಸ್ಲಾಮಿಕ್ ಇತಿಹಾಸದ “ಮಸ್ಜಿದುಲ್ ಅಲ್-ಲಿರಾರ್” ಎಂದು ಕರೆಯಲ್ಪಡುವ ಪ್ರಾಚೀನ ಮಸೀದಿಗೆ ಸಾಮ್ಯತೆ ಪಡೆಯುವ ಅಪಾಯ ಎದುರಾಗುತ್ತದೆ. ಏಕೆಂದರೆ, ಅರೇಬಿಕ್ ಪದ “ಲಿರಾರಾ”ದ ಅಕ್ಷರಶಃ ಅರ್ಥವು ಸಮ್ಮತವಿಲ್ಲದ ಅಥವಾ ಸ್ವೀಕಾರಾರ್ಹವಲ್ಲವೆಂದಾಗಿದೆ.
ಆದುದರಿಂದ, ಮಸೀದಿಗಳು ವಕ್ಫ್ ಆಗುವಿಕೆಯ ಇಸ್ಲಾಮಿಕ್ ಕಾನೂನಿನ ಬೇಡಿಕೆಗಳನ್ನು ಪೂರೈಸಿರಬೇಕು ಮತ್ತು ಕ್ರಮಬಧ್ಧವಾಗಿ ಸ್ಥಾಪಿತವಾಗಿರಬೇಕು ಮತ್ತು ವೈಯಕ್ತಿಕ ಅಥವಾ ಗುಂಪು ಪ್ರಾಬಲ್ಯಗಳ ಖಾಸಗಿ ಮಾಲಕತ್ವದ ಪ್ರಭಾವದಿಂದ ಮುಕ್ತವಾಗಿರಬೇಕು.