ಮತ್ತೆ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ -ಸಾಮಾಜಿಕ ಕಾರ್ಯಕರ್ತ ಬಲಿ

ಕಾಶ್ಮೀರ:ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ನಿಂತಿಲ್ಲ. ಪಹಲ್ಗಾಮ್ನಲ್ಲಿ 28 ಪ್ರವಾಸಿಗರನ್ನ ಅಮಾನುಷವಾಗಿ ಕೊಂದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯನ್ನ ಶುರು ಮಾಡಿದೆ. ಆದರೆ ಇದರ ಮಧ್ಯೆಯೇ ಇನ್ನೊಬ್ಬ ನಾಗರಿಕನನ್ನ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.
ಭಾನುವಾರ ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಸಾಮಾಜಿಕ ಕಾರ್ಯಕರ್ತನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲೇ ಪ್ರಾಣ ಹೋಗಿತ್ತು..
ಮನೆಗೇ ನುಗ್ಗಿ ಹೊಡೆದರು..
ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ಕಾಶ್ಮೀರದ ಇಂಚಿಂಚೂ ಗೊತ್ತು. ಅಲ್ಲಿನ ಮನೆಗಳಲ್ಲೇ ಅವರಿಗೆ ಆಶ್ರಯ ಕೊಡಲಾಗುತ್ತದೆ..ಊಟ ಹಾಕಿ ಸಲುಹಲಾಗುತ್ತದೆ ಎಂಬ ಆರೋಪ ಕೇಳಿಬರ್ತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಇದೀಗ ಉಗ್ರರು ಸಾಮಾಜಿಕ ಕಾರ್ಯಕರ್ತನನ್ನ ಮನೆಯೊಳಗೆ ನುಗ್ಗಿ ಹೊಡೆದಿದ್ದಾರೆ. ಅಂದರೆ ಅವರ ಮನೆಗೆ ನುಗ್ಗುವಷ್ಟು ಧೈರ್ಯ ಬರುತ್ತದೆ ಎಂದರೆ ಅಲ್ಲೆಲ್ಲೋ ಅಕ್ಕಪಕ್ಕದ ಮನೆಯವರ ಬೆಂಬಲ, ಸ್ಥಳೀಯರ ಸಹಕಾರ ಇರಲೇಬೇಕು ಎಂಬುದು ಸ್ಪಷ್ಟವಾಗುತ್ತದೆ. ಅಂದಹಾಗೇ, ಮೃತ ಸಾಮಾಜಿಕ ಕಾರ್ಯಕರ್ತನನ್ನ ಗುಲಾಮ್ ರಸೂಲ್ ಮಗ್ರೆ ಎಂದು ಗುರುತಿಸಲಾಗಿದೆ. ಭಯೋತ್ಪಾದಕರು ಇವರನ್ನ ಹತ್ಯೆ ಮಾಡೋಕೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ.
ಭದ್ರತೆ ಹೆಚ್ಚಳ..
ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗೋದಕ್ಕೇ ಭಯ ಪಡುವ ಘಟನೆ ಏಪ್ರಿಲ್ 22ರಂದು ನಡೆದು ಹೋಗಿದೆ. ಅಲ್ಲಿನ ಪಹಲ್ಗಾಮ್ಗೆ ಪ್ರವಾಸಕ್ಕೆ ಹೋಗಿದ್ದ ಸುಮಾರು 28 ಜನರನ್ನ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಕರ್ನಾಟಕದ ಮೂವರು ಕೂಡ ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಇಡೀ ಜಮ್ಮು ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಇಲ್ಲಿನ ಭದ್ರತಾ ಪಡೆಗಳು ಉಗ್ರರನ್ನ ಟಾರ್ಗೆಟ್ ಮಾಡಿ ದಾಳಿ ನಡೆಸತ್ತಿದ್ದಾರೆ. ಅವರ ಅಡಗುತಾಣಗಳನ್ನ ಹುಡುಕಿ ಹುಡುಕಿ ಸುಟ್ಟು ಭಸ್ಮ ಮಾಡುತ್ತಿದ್ದಾರೆ. ಶನಿವಾರ, ರಕ್ಷಣಾ ಪಡೆಗಳು ಐದು ಎಕೆ 47 ರೈಫಲ್ಸ್ಗಳು, 8 ಎಕೆ 47 ಮ್ಯಾಗ್ಜಿನ್ಗಳು, ಒಂದು ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್, 660 ಸುತ್ತು ಎಕೆ -47 ಮದ್ದುಗುಂಡುಗಳು, ಒಂದು ಪಿಸ್ತೂಲ್ ರೌಂಡ್ ಮತ್ತು 50 ಸುತ್ತು ಎಂ 4 ಮದ್ದುಗುಂಡುಗಳು ಸೇರಿದಂತೆ ಗಮನಾರ್ಹ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.