ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ಅಸ್ಸಾಂ ರೈಫಲ್ಸ್ ವಾಹನದ ಮೇಲೆ ದಾಳಿ, ಇಬ್ಬರು ಯೋಧರು ಸಾವು

ಬಿಷ್ಣುಪುರ: ಮಣಿಪುರದ ಬಿಷ್ಣುಪುರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಅರೆಸೈನಿಕ ವಾಹನದ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಸಾವನ್ನಪ್ಪಿದ್ದಾರೆ. ಮಣಿಪುರದ ನಂಬೋಲ್ ಸಬಲ್ ಲೈಕೈ ಬಳಿ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಚಲಿಸುತ್ತಿದ್ದಾಗ ಸೈನಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಭಯೋತ್ಪಾದಕರು (Terrorist Attack) ದಾಳಿ ನಡೆಸಿದರು. ಈ ಘಟನೆ ಸಂಜೆ 5.50ರ ಸುಮಾರಿಗೆ ಕತ್ತಲೆಯಾದ ಸಮಯದಲ್ಲಿ ಹೆಚ್ಚು ಜನವಸತಿ ಪ್ರದೇಶದಲ್ಲಿ ಸಂಭವಿಸಿದೆ.

ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಸಾವನ್ನಪ್ಪಿದರು. ಇತರ 5 ಮಂದಿ ಗಾಯಗೊಂಡರು. ಅವರನ್ನು ತಕ್ಷಣವೇ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ಸ್ಥಳಾಂತರಿಸಲಾಯಿತು. ಅಲ್ಲಿ ಅವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಜನನಿಬಿಡ ರಸ್ತೆಯಲ್ಲಿ ಸೈನಿಕರನ್ನು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ ನಂತರ ಭಯೋತ್ಪಾದಕರು ಬಿಳಿ ವ್ಯಾನ್ನಲ್ಲಿ ಪರಾರಿಯಾಗಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಗರಿಕರಿಗೆ ಹಾನಿಯಾಗದಂತೆ ಭದ್ರತಾ ಪಡೆಗಳು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿವೆ.
ಈ ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಈಗ ಶೋಧ ಆರಂಭಿಸಿವೆ. ಈ ಘಟನೆಯ ಬಗ್ಗೆ ಮಣಿಪುರದ ಮಾಜಿ ಮುಖ್ಯಮಂತ್ರಿ ಬಿರೇನ್ ಸಿಂಗ್ ದುಃಖ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
“ಇಂದು ಸಂಜೆ ನಡೆದ ದಾಳಿಯಲ್ಲಿ ಕನಿಷ್ಠ ಇಬ್ಬರು ಜವಾನರು ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡಿದ್ದಾರೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಇಂಫಾಲ್ನಿಂದ 407 ಟಾಟಾ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಸಂಜೆ 6 ಗಂಟೆ ಸುಮಾರಿಗೆ ನಂಬೋಲ್ ಪೊಲೀಸ್ ಠಾಣೆ ಪ್ರದೇಶದಲ್ಲಿ ದಾಳಿ ನಡೆದಿದೆ. ದಾಳಿಗೊಳಗಾದ ಸ್ಥಳ ಇಂಫಾಲ್ ವಿಮಾನ ನಿಲ್ದಾಣದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿದೆ. ಇಂಫಾಲ್ನಿಂದ ಬಿಷ್ಣುಪುರ ಜಿಲ್ಲೆಯ ಕಡೆಗೆ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಬಂದೂಕುಧಾರಿಗಳ ಗುಂಪೊಂದು ಹೊಂಚು ಹಾಕಿ ದಾಳಿ ನಡೆಸಿದೆ” ಎಂದು ಪಿಟಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.