Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ: ಟರ್ಕಿಶ್ ಡ್ರೋನ್​ಗಳಿಂದ  ಪಾಕ್ ದಾಳಿಗೆ ತಿರುಗೇಟು ನೀಡಿದ ಭಾರತೀಯ ಸೇನೆ

Spread the love

ಭಾರತದ ಮೇಲೆ ಹಾರಿಸಿದ್ದ ಹಲವು ಡ್ರೋನ್‌ಗಳನ್ನು ಧ್ವಂಸಗೊಳಿಸಿದ್ದೇವೆ. ಉರಿ, ಪೂಂಚ್‌, ಅಖ್ನೂರ್‌ ಸೇರಿ ಎಲ್‌ಒಸಿಯಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೂ ತಕ್ಕ ತಿರುಗೇಟು ನೀಡಿದ್ದೇವೆ. ಪಂಜಾಬ್‌ ಏರ್ ಡಿಫೆನ್ಸ್‌ ಸಿಸ್ಟಮ್‌ ಮೂಲಕ ಪಾಕಿಸ್ತಾನದ ಸೇನೆಯ ದಾಳಿ ಯತ್ನ ವಿಫಲಗೊಳಿಸಲಾಗಿದೆ. ಪಾಕಿಸ್ತಾನ ಪಡೆಗಳು ಟರ್ಕಿಶ್ ಡ್ರೋನ್‌ಗಳನ್ನು ಬಳಸಿ 36 ಸ್ಥಳಗಳ ಮೇಲೆ ದಾಳಿಗೆ ಯತ್ನಿಸಿವೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ. ನಿನ್ನೆ ರಾತ್ರಿ ಭಾರತದ ಹಲವು ನಗರಗಳ ಮೇಲೆ ಡ್ರೋನ್ ದಾಳಿಗೆ ಯತ್ನ ನಡೆದಿದೆ. ಪಾಕಿಸ್ತಾನ ಸೇನೆ ಡ್ರೋನ್ ದಾಳಿಗೆ ಯತ್ನಿಸಿತ್ತು. ಪಾಕಿಸ್ತಾನದಿಂದ 300-400 ಡ್ರೋನ್‌ಗಳನ್ನು ಹಾರಿಸಲಾಗಿದೆ. ನಾವು ಆ ಡ್ರೋನ್ ದಾಳಿ ಯತ್ನವನ್ನು ವಿಫಲಗೊಳಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳು ಒಟ್ಟಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.

ಯುದ್ಧದ ಭೀತಿ ಎದುರಾಗಿರುವುದರಿಂದ ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಪಾಕಿಸ್ತಾನಕ್ಕೆ ಹಣಕಾಸಿನ ಸಹಾಯ ಮಾಡಲು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ಅಂತಾರಾಷ್ಟ್ರೀಯ ಪಾಲುದಾರರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಷೇರುಪೇಟೆಯ ಕುಸಿತ, ಯುದ್ಧೋಪಕರಣಗಳ ಖರೀದಿ, ಆಹಾರ ವಸ್ತುಗಳ ಶೇಖರಣೆಗೆ ಹಣದ ಅಗತ್ಯವಿದೆ ಎಂದು ಪಾಕಿಸ್ತಾನ ಬೇಡಿಕೊಂಡಿದೆ.

ನಿನ್ನೆ ಪಾಕಿಸ್ತಾನ ಭಾರತದ 36 ಕಡೆಗಳಲ್ಲಿ 300ರಿಂದ 400 ಡ್ರೋನ್​ಗಳ ಮೂಲಕ ದಾಳಿ ನಡೆಸಲು ಯತ್ನಿಸಿತ್ತು. ಆ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಅದಾದ ನಂತರ ಭಾರತ ಕೂಡ ಪಾಕಿಸ್ತಾನದೊಳಗೆ ಅನೇಕ ಪ್ರದೇಶಗಳ ಮೇಲೆ ದಾಳಿ ನಡೆಸಿತ್ತು. ಇದೀಗ ಇಂದು ಮತ್ತೆ ಉರಿ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಮತ್ತೆ ಶಸ್ತ್ರಾಸ್ತ್ರ ಮತ್ತು ಫಿರಂಗಿ ಗುಂಡಿನ ದಾಳಿ ನಡೆಸಿದೆ. ಉರಿಯಲ್ಲಿ ಗುಂಡಿನ ದಾಳಿ ಮತ್ತು ಸ್ಫೋಟಗಳ ಸದ್ದು ಕೇಳಿಬಂದಿದೆ. ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ, ಉರಿ ಸೆಕ್ಟರ್‌ನಲ್ಲಿ ಶೆಲ್ ದಾಳಿ ಆರಂಭಿಸಿದೆ. ಹಾಗೇ, ಇಂದು ಸಂಜೆಯಿಂದ ಜಮ್ಮುವಿನ ಸಂಬಾ ಮುಂತಾದೆಡೆ ಡ್ರೋನ್ ದಾಳಿ ನಡೆದಿದೆ.

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಪ್ರಮುಖ ಸಂಸ್ಥೆಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಐಎಸ್ಎಫ್ ​(ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ಗೆ ನಿರ್ದೇಶನ ನೀಡಿದ್ದಾರೆ. ಭಾರತದಾದ್ಯಂತ ವಿಮಾನ ನಿಲ್ದಾಣಗಳು, ವಿದ್ಯುತ್ ಸ್ಥಾವರಗಳು, ಪರಮಾಣು ಸ್ಥಾಪನೆಗಳು, ಬಾಹ್ಯಾಕಾಶ ಸಂಶೋಧನಾ ಸೌಲಭ್ಯಗಳು ಮತ್ತು ಪ್ರಮುಖ ಸರ್ಕಾರಿ ಕಟ್ಟಡಗಳು ಸೇರಿದಂತೆ ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವ ಕಾರ್ಯವನ್ನು CISF ಹೊಂದಿದೆ.

ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಮತ್ತು ಯುದ್ಧ ವಿಮಾನಗಳು ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಧ್ವಂಸವನ್ನುಂಟುಮಾಡಿದೆ. ಈಗ ಭಾರತ ಪಾಕಿಸ್ತಾನದ ವಿರುದ್ಧ ಜಲದಾಳಿ ನಡೆಸಿದೆ. ಪಾಕಿಸ್ತಾನಕ್ಕೆ ಭಾರತ ಸಲಾಲ್ ಹಾಗೂ ಬಾಗ್ಲಿಹಾರ್​ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿದ್ದು, ಪ್ರವಾಹ ಭೀತಿ ಎದುರಾಗಿದೆ. ಈ ಪ್ರದೇಶದಲ್ಲಿ ಭಾರೀ ಮಳೆಯಾದ ನಂತರ ಗೇಟ್‌ಗಳನ್ನು ತೆರೆಯಲಾಯಿತು. ಭಾರೀ ಮಳೆಯಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ, ನೀರನ್ನು ಬಿಡುಗಡೆ ಮಾಡಬೇಕಾಯಿತು. ಗುರುವಾರ ಸಲಾಲ್ ವಿದ್ಯುತ್ ಯೋಜನೆಯ ಮೂರು ಗೇಟ್‌ಗಳು ಮತ್ತು ಬಾಗ್ಲಿಹಾರ್ ಯೋಜನೆಯ ಎರಡು ಗೇಟ್‌ಗಳನ್ನು ತೆರೆಯಲಾಯಿತು. ಇದರಿಂದ ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಎಲ್ಲಾ ಮಾಧ್ಯಮ ವಾಹಿನಿಗಳು, ಡಿಜಿಟಲ್ ವೇದಿಕೆಗಳು ಮತ್ತು ಇತರರು ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಅಥವಾ ರಿಯಲ್ ಟೈಮ್ ರಿಪೋರ್ಟ್ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಅಂತಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ಕಾರ್ಯಾಚರಣೆಯ ಪರಿಣಾಮಕಾರಿತ್ವಕ್ಕೆ ಅಪಾಯ ಉಂಟುಮಾಡಬಹುದು ಮತ್ತು ಸೇನಾ ಸಿಬ್ಬಂದಿ ಜೀವಗಳಿಗೆ ಅಪಾಯವನ್ನು ಉಂಟುಮಾಡಬಹುದು ಎಂದು ರಕ್ಷಣಾ ಇಲಾಖೆ ಹೇಳಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಭಾರತದೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಶುಕ್ರವಾರ ಪಾಕಿಸ್ತಾನದ ಸಂಸತ್​ನಲ್ಲಿ ಚರ್ಚೆ ನಡೆದಿದ್ದು, ಈ ವೇಳೆ ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ಆದರೆ, ನಮ್ಮ ಪ್ರಧಾನಿ ಶೆಹಬಾಜ್ ಷರೀಫ್ ಮೋದಿಯ ಹೆಸರನ್ನು ಕೂಡ ಉಚ್ಚರಿಸಲಾಗದ ಹೇಡಿ ಎಂದು ಪಾಕ್‌ ಪ್ರಧಾನಿ ವಿರುದ್ಧ ಸಂಸದ ಸಂಸದ ಶಾಹಿದ್‌ ಖಟ್ಟಕ್‌ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ರಾತ್ರಿ ಭಾರತವು ಜಮ್ಮು, ಪಠಾಣ್‌ಕೋಟ್, ಉಧಂಪುರ ಮತ್ತು ಇತರ ಕೆಲವು ಸ್ಥಳಗಳಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡುವ ಪಾಕಿಸ್ತಾನ ಸೇನೆಯ ಪ್ರಯತ್ನವನ್ನು ತಟಸ್ಥಗೊಳಿಸಿತು. ಈ ಹಿನ್ನೆಲೆಯಲ್ಲಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹತ್ವದ ಸಭೆ ನಡೆಸಿದ್ದಾರೆ. ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಭಾಗವಹಿಸಿದ್ದರು.

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಮತ್ತು ಡ್ರೋನ್ ದಾಳಿಯ ನಂತರ ಪಾಕಿಸ್ತಾನಿ ನಾಗರಿಕರಲ್ಲಿ ಅಪಾರ ಭೀತಿ ಉಂಟಾಗಿದೆ. ಪಾಕಿಸ್ತಾನದಲ್ಲಿ ಅಡಗಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಭಾರತದ ದಾಳಿಯಿಂದ ಕಂಗೆಟ್ಟಿದ್ದಾನೆ. ಗುರುವಾರ ರಾತ್ರಿ ಭಾರತೀಯ ಸೇನೆಯು ಲಾಹೋರ್, ಕರಾಚಿ ಮತ್ತು ಇಸ್ಲಾಮಾಬಾದ್‌ನಲ್ಲಿ ಡ್ರೋನ್ ದಾಳಿ ನಡೆಸಿತು. ಆದ್ದರಿಂದ, ಪಾಕಿಸ್ತಾನವು ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಮತ್ತು ಮುನ್ನಾ ಜಿಂಗಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಭಾರತದ ಭಯದಿಂದ ಈ ಮೂವರು ಭೂಗತ ಪಾತಕಿಗಳು ಪಾಕಿಸ್ತಾನದಿಂದ ಬೇರೆ ದೇಶಕ್ಕೆ ಪರಾರಿಯಾಗಿರಬಹುದು ಎನ್ನಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *