ತೆಕ್ಕಟ್ಟೆ: ಹೊಳೆಸಾಲುಗಳಲ್ಲಿ ಮೀನಿನ ಹರಿವು – ಯುವಕರಿಗೆ ಬೃಹತ್ ಬೇಟೆ!

ತೆಕ್ಕಟ್ಟೆ : ಮುಂಗಾರು ಮಳೆ ಆಗಮನಕ್ಕೂ ಮುನ್ನ ಹವಾಮಾನ ವೈಪರಿತ್ಯದಿಂದ ಸುರಿದ ಮಳೆಯಿಂದಾಗಿ ಕುಂದಾಪುರ ತಾಲೂಕಿನ ತಗ್ಗು ಪ್ರದೇಶಗಳಾದ ಮಾಲಾಡಿ, ಮಲ್ಯಾಡಿ ಸುತ್ತಮುತ್ತಲ ಹೊಳೆಸಾಲುಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು ಹಿಂಡು ಹಿಂಡಾಗಿ ಮೀನು ಸಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರ ತಂಡವೊಂದು ಕಳೆದೆರಡು ದಿನಗಳಿಂದಲೂ ಉತ್ಸಾಹದಿಂದ ಬಲೆ ಬೀಸುವಲ್ಲಿ ಕಾರ್ಯಪ್ರವೃತ್ತರಾಗಿದ್ದು, ಗ್ರಾಮೀಣ ಭಾಗದ ಹವ್ಯಾಸಿ ಯುವಕರ ತಂಡವು ಮೂಟೆಗಟ್ಟಲೇ ಬೃಹತ್ ಗಾತ್ರದ ಹೊಳೆ ಮೀನುಗಳನ್ನು ಬೇಟೆಯಾಡುತ್ತಿದ್ದಾರೆ.
ಈ ದೃಶ್ಯವನ್ನು ನೋಡಲು ಪರಿಸರದ ನೂರಾರು ಮಂದಿ ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಮಾಲಾಡಿಯ ರವೀಂದ್ರ, ಲಕ್ಷ್ಮಣ, ಚಂದ್ರ, ಚರಣ್, ಗಣೇಶ್, ನಾಗರಾಜ್, ನವೀನ್, ಭರತ್ ಕನ್ನುಕೆರೆ ಸೇರಿದಂತೆ ಯುವಕರ ತಂಡವು ಬಲೆ ಬೀಸಿ ಮೀನುಗಾರಿಕೆಯಲ್ಲಿ ನಿರತರಾಗಿದ್ದಾರೆ.
ಈ ತಾಜಾ ಮೀನಿಗೆ ಭಾರೀ ಬೇಡಿಕೆ : ಸರಿಸುಮಾರು ಮೂರರಿಂದ ನಾಲ್ಕು ಕೆ.ಜಿಗೂ ಅಧಿಕ ತೂಕದ ಮೀನುಗಳು ಸೆರೆಯಾಗಿದ್ದು, ಕೆ.ಜಿ.ಗೆ ಸುಮಾರು ರೂ.400 ಕ್ಕೂ ಅಧಿಕ ಬೆಲೆ ಇದೆ. ಗ್ರಾಮೀಣ ಭಾಗದಲ್ಲಿ ಈ ಬೀಸಿದ ಬಲೆಯಲ್ಲಿ ಸಿಕ್ಕಿದ ಬೃಹತ್ ಮೀನುಗಳ ಖರೀದಿಗಾಗಿ ಅರಸಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಿಡಿದ ಕ್ವಿಂಟಾಲುಗಟ್ಟಲೇ ಮೀನುಗಳನ್ನು ಕುಂದಾಪುರ,ತೆಕ್ಕಟ್ಟೆ, ಸಾಲಿಗ್ರಾಮ, ಸಾಸ್ತಾನದ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ.