ಮದುವೆ ನಿರಾಕರಿಸಿದ್ದಕ್ಕೆ ಬುರ್ಖಾ ಧರಿಸಿ ಬಂದು ಯುವತಿಯನ್ನು ಮಹಡಿಯಿಂದ ತಳ್ಳಿದ ತೌಫಿಕ್

ನವದೆಹಲಿ: ಮದುವೆಗೆ ಒಪ್ಪಲಿಲ್ಲವೆಂದು ವ್ಯಕ್ತಿಯೊಬ್ಬ ಯುವತಿಯನ್ನು ಐದನೇ ಮಹಡಿಯಿಂದ ಕೆಳಗೆ ತಳ್ಳಿರುವ ಘಟನೆ ದೆಹಲಿಯ ಜ್ಯೋತಿನಗರ ಪ್ರದೇಶದಲ್ಲಿ ನಡೆದಿದೆ. ಮೃತ ಯುವತಿಯನ್ನು ನೇಹಾ ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ತೌಫಿಕ್ ಎಂಬ ಆರೋಪಿಯನ್ನು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ತಾಂಡಾದಿಂದ ಬಂಧಿಸಲಾಗಿದೆ.
ಬುರ್ಖಾ ಧರಿಸಿ ಮನೆಗೆ ನುಗ್ಗಿ ನೇಹಾಳನ್ನು ಟೆರೇಸ್ನಿಂದ ತಳ್ಳಿದ್ದ ಆರೋಪಿ ತೌಫಿಕ್, ಬುರ್ಖಾ ಧರಿಸಿ ನೇಹಾಳ ಮನೆಯನ್ನು ಪ್ರವೇಶಿಸಿದ್ದ, ನೇಹಾರ ತಂದೆ ಮಧ್ಯೆ ತಡೆಯಲು ಬಂದಾಗ ಅವರನ್ನು ಪಕ್ಕಕ್ಕೆ ತಳ್ಳಿ ನೇರವಾಗಿ ಟೆರೇಸ್ಗೆ ಹೋಗಿದ್ದಾನೆ. ಅಲ್ಲಿ ನೇಹಾ ನೀರಿನ ಟ್ಯಾಂಕ್ ಪರಿಶೀಲಿಸುತ್ತಿದ್ದಳು. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ ತೌಫಿಕ್ ಆಕೆಯನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ನೇಹಾ ತೀವ್ರವಾಗಿ ಗಾಯಗೊಂಡಿದ್ದರು. ಆಕೆಯನ್ನು ಕೂಡಲೇ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಉಳಿಸಿಕೊಳ್ಳಲಾಗಲಿಲ್ಲ.

ತೌಫಿಕ್ ಹಾಗೂ ನೇಹಾ ಮೂರು ವರ್ಷಗಳಿಂದ ಪರಿಚಯವಿದ್ದರು ಆಕೆ ಆತನನ್ನು ಸಹೋದರನಂತೆ ಕಾಣುತ್ತಿದ್ದಳು.ರಾಖಿ ಹಬ್ಬದಂದು ಆತನಿಗೂ ರಾಖಿ ಕಟ್ಟಿದ್ದಳು ಎಂದು ತಿಳಿಸಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ತನ್ನನ್ನು ಮದುವೆಯಾಗುವಂತೆ ತೌಫಿಕ್ ಒತ್ತಡ ಹಾಕಿದ್ದ ಆದರೆ ಆಕೆ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಳು.
ತೌಫಿಕ್ ಒಂದು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಮತ್ತು ಬೆದರಿಕೆ ಹಾಕುತ್ತಿದ್ದ ಎಂದು ನೇಹಾಳ ಸಹೋದರಿ ಹೇಳಿದ್ದಾಳೆ. ಘಟನೆಗೆ ಕೆಲವೇ ದಿನಗಳ ಮೊದಲು, ನೇಹಾ ತನ್ನ ತಾಯಿಗೆ ಕಿರುಕುಳದ ಬಗ್ಗೆ ಹೇಳಿದ್ದಳು.
ಮೂಲತಃ ಉತ್ತರ ಪ್ರದೇಶದವನಾದ ತೌಫಿಕ್ ದೆಹಲಿಯ ಮಂಡೋಲಿ ಯಲ್ಲಿ ಕೆಲಸ ಮಾಡುತ್ತಿದ್ದ. ಅಪರಾಧ ಸ್ಥಳದಿಂದ ಪರಾರಿಯಾಗಿದ್ದ ಆತನನ್ನು ರಾಂಪುರದಿಂದ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.