ತಮಿಳು ನಿರ್ದೇಶಕ ವಿಕ್ರಮ್ ಸುಗುಮಾರನ್ 47ನೇ ವಯಸ್ಸಿನಲ್ಲಿ ಅಸ್ತಂಗತ

ಚೆನ್ನೈ: ಸಣ್ಣ ಪ್ರಾಯದಲ್ಲೇ ಖ್ಯಾತ ಸಿನಿಮಾ ನಿರ್ದೇಶಕರೊಬ್ಬರು ಕೊನೆಯುಸಿರೆಳೆದಿದ್ದಾರೆ. ಸುದ್ದಿ ಕೇಳಿ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ.
ತಮಿಳು ಚಲನಚಿತ್ರ ನಿರ್ದೇಶಕ ವಿಕ್ರಮ್ ಸುಗುಮಾರನ್ ಸೋಮವಾರ (ಜೂ.2) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಅವರಿಗೆ 47 ವರ್ಷ ವಯಸ್ಸಾಗಿತ್ತು.
ನಿರ್ಮಾಪಕರಿಗೆ ಸ್ಕ್ರಿಪ್ಟ್ ವಿವರಿಸಿ ಮಧುರೈನಿಂದ ಚೆನ್ನೈಗೆ ತೆರಳುತ್ತಿದ್ದ ವೇಳೆ ಹೃದಯಸ್ತಂಭನ ಉಂಟಾಗಿದೆ ಎಂದು ವರದಿಯಾಗಿದೆ.
ವಿಕ್ರಮ್ ಮಧುರೈನಿಂದ ಚೆನ್ನೈಗೆ ಬಸ್ ಹತ್ತಿದ್ದರು. ಆದರೆ ಪ್ರಯಾಣದ ಸಮಯದಲ್ಲಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ವಿಕ್ರಮ್ 1999 ರಿಂದ 2000 ರವರೆಗೆ ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 2013ರಲ್ಲಿ ʼಮಾಧ ಯಾನೈ ಕೂಟಂʼ ಸಿನಿಮಾದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಇದಾದ ನಂತರ 2023ರಲ್ಲಿ ʼರಾವಣ ಕೊಟ್ಟಂʼ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಶಾಂತನು ಭಾಗ್ಯರಾಜ್ ನಟಿಸಿದ್ದರು.
ʼತೇರಮ್ ಪೋರಮ್ʼ ಎನ್ನುವ ಪ್ರಾಜೆಕ್ಟ್ನಲ್ಲಿ ಅವರು ಕೆಲಸ ಮಾಡುತ್ತಿದ್ದರು.
ಅವರ ನಿಧನಕ್ಕೆ ನಟ ಶಾಂತನು ಭಾಗ್ಯರಾಜ್, ಸಂಗೀತ ಸಂಯೋಜಕ ಜಸ್ಟಿನ್ ಪ್ರಭಾಕರನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಅವರು ಚೆನ್ನೈನಲ್ಲಿ ವಾಸಿಸುವ ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.