ಹಾಸನದಲ್ಲಿ ತಹಸೀಲ್ದಾರ್ ಗೀತಾ ಅವರ ಕಾರು ಭಸ್ಮ: ಶಾರ್ಟ್ ಸರ್ಕ್ಯೂಟ್ ಶಂಕೆ, ದುಷ್ಕೃತ್ಯದ ಆಯಾಮದಲ್ಲಿ ತನಿಖೆ!

ಹಾಸನ : ತಹಸೀಲ್ದಾರ್ ಗೀತಾ ಅವರಿಗೆ ಸೇರಿದ ಖಾಸಗಿ ಕಾರು ಬೆಂಕಿಗೆ ಆಹುತಿಯಾದ ಘಟನೆ ಜುಲೈ 5ರ ಶನಿವಾರ ರಾತ್ರಿ ನಡೆದಿದೆ. ಹಾಸನ ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ.

ತಹಸೀಲ್ದಾರ್ ಗೀತಾ ತಮ್ಮ ಮನೆ ಎದುರು KA-02-MP-8646 ಸಂಖ್ಯೆಯ ಎಕ್ಸ್ ಕ್ರಾಸ್ ಕಾರನ್ನು ನಿಲ್ಲಿಸಿದ್ದ ವೇಳೆ, ಕಾರಿಗೆ ಹಠಾತ್ ಬೆಂಕಿ ಹಿಡಿದು ಸಂಪೂರ್ಣವಾಗಿ ಹೊತ್ತಿ ಉರಿಯಿತು.
ಪ್ರಾಥಮಿಕ ಮಾಹಿತಿ ಪ್ರಕಾರ, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ತಹಸೀಲ್ದಾರ್ ಗೀತಾ, ಪೊಲೀಸರು ಸಂಪೂರ್ಣ ತನಿಖೆ ನಡೆಸಬೇಕೆಂದು ದೂರು ನೀಡಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ, ಈ ಬೆಂಕಿ ಅವಘಡಕ್ಕೆ ಯಾವುದೇ ಕೌಟುಂಬಿಕ ಕಲಹ ಕೂಡ ಕಾರಣವಿದೆಯೇ ಎಂಬುದು ಸಹ ತನಿಖೆಯ ಭಾಗವಾಗಿದ್ದು, ಕಾರಿಗೆ ದುಷ್ಕೃತ್ಯವಾಗಿ ಬೆಂಕಿ ಹಚ್ಚಿರುವ ಶಂಕೆ ಕೂಡ ವ್ಯಕ್ತವಾಗಿದೆ.
ಹೃದಯಾಘಾತ ಪ್ರಕರಣಗಳ ಹೆಚ್ಚಳ ಜನರಲ್ಲಿ ಆತಂಕ, ಜಾಗೃತಿಗೆ ಜಿಲ್ಲಾಡಳಿತದಿಂದ ವಾಕಥಾನ್
ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರಲ್ಲಿ ಮೂಡಿರುವ ಆತಂಕವನ್ನು ನಿವಾರಿಸಲು ಮತ್ತು ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ ಬೃಹತ್ ಪ್ರಯತ್ನ ಕೈಗೊಂಡಿದೆ.
ಈ ಸಂಬಂಧ ಹಾಸನ ನಗರದಲ್ಲಿ ಜಾಗೃತಿ ಜಾಥಾ ಹಾಗೂ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಸನ ಡಿಸಿ ಕಚೇರಿಯಿಂದ ಆರಂಭವಾದ ವಾಕಥಾನ್, ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. “ಹೃದಯಕ್ಕೆ ಹೆಜ್ಜೆ ಹಾಕೋಣ, ಆರೋಗ್ಯ ಗೆಲ್ಲೋಣ” ಎಂಬ ಘೋಷಣೆಯೊಂದಿಗೆ ಸಹಸ್ರಾರು ಜನರು ಪಾಲ್ಗೊಂಡರು.
ಕಾರ್ಯಕ್ರಮಕ್ಕೆ ಹಾಸನ ಜಿಲ್ಲಾ ಜಿಲ್ಲಾಧಿಕಾರಿ ಲತಾ ಕುಮಾರಿ, ಎಸ್ಪಿ ಮೊಹಮ್ಮದ್ ಸುಜಿತಾ, ಹಾಗೂ ಸಿಇಒ ಪೂರ್ಣಿಮಾ ಚಾಲನೆ ನೀಡಿದ್ದು, ಸ್ವತಃ ನಡಿಗೆಯಲ್ಲಿ ಪಾಲ್ಗೊಂಡರು.
ಹೃದಯ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಿತ್ತಿಪತ್ರಗಳನ್ನು ಹಿಡಿದು ನೂರಾರು ಜನರು ವಾಕಥಾನ್ನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ವೈದ್ಯಾಧಿಕಾರಿಗಳ ಸಂಘ ಮತ್ತು ಜಿಲ್ಲಾಡಳಿತವು ಸಂಯುಕ್ತವಾಗಿ ಆಯೋಜಿಸಿತ್ತು.
