ಕೋಲಾರದಲ್ಲಿ 10 ಬಾಂಗ್ಲಾದೇಶ ಪ್ರಜೆಗಳ ಬಂಧನ: ಮಕ್ಕಳೂ ಸೇರಿ ಅಕ್ರಮ ವಲಸಿಗರ ವಿಚಾರಣೆ

ಕೋಲಾರ: ಮೂವರು ಮಕ್ಕಳು ಸೇರಿದಂತೆ 10 ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ಶ್ರೀನಿವಾಸಪುರ ಪಟ್ಟಣ ಠಾಣೆ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಇಬ್ಬರು ಬಾಂಗ್ಲಾದೇಶ ಪ್ರಜೆಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅವರೊಟ್ಟಿಗೆ ಬಂದಿದ್ದ ಉಳಿದ ಎಂಟು ಮಂದಿ ಬಗ್ಗೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ.

ಮಾಹಿತಿ ಆಧಾರಿಸಿ ಪೊಲೀಸರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ ಬಳಿ ನಾಲ್ವರು ಪುರುಷರು, ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದಂತೆ 10 ಮಂದಿ ಬ್ಲಾಂಗಾದೇಶ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ. ಅವರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಹತ್ತೂ ಜನ ಬಾಂಗ್ಲಾದೇಶದ ಕುಲ್ನಾ ರಾಜ್ಯದ ಬಾಗೇರ್ ಹಠ್ ಜಿಲ್ಲೆಯ ತಪಲ್ಬರಿ ಗ್ರಾಮದವರು ಎಂದು ತಿಳಿದುಬಂದಿದೆ.
ಪೊಲೀಸರು ಪತ್ತೆಹಚ್ಚಿದ್ದು ಹೇಗೆ?
ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಖಾಲಿ ಬಾಟಲ್ ಇತರೆ ಗುಜರಿ ವಸ್ತುಗಳನ್ನು ಸಂಗ್ರಹಿಸುತ್ತಿದ್ದನು. ಈ ವೇಳೆ ಆತನ ಚಹರೆಯನ್ನು ಗಮನಿಸಿ ಅನುಮಾನಗೊಂಡ ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತ ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿರುವುದು ಕಂಡು ಬಂತು. ಪೊಲೀಸರಿಗೆ ಈತ ಬಾಂಗ್ಲಾದೇಶದವನಿರಬಹುದು ಎಂದು ಹೆಚ್ಚಿನ ವಿಚಾರಣೆ ನಡೆಸಿದಾಗ ಎಲ್ಲ ಸಂಗತಿಯನ್ನು ಬಾಯಿಬಿಟ್ಟಿದ್ದಾನೆ.
ತಾನು ಬಾಂಗ್ಲಾದೇಶ ದೇಶದ ಕುಲ್ನಾ ರಾಜ್ಯದ ಬಾಗೇರ್ ಹಠ್ ಜಿಲ್ಲೆಯ ತಪಲ್ಬರಿ ಗ್ರಾಮದವನು ಎಂದು ಹೇಳಿದ್ದಾನೆ. ತನ್ನ ಹೆಸರು ಮೊಹಮ್ಮದ್ ಜಾಯಿದ್ ಇಸ್ಲಾಂ ಬಿನ್ ಸಿಕಂದರ್ ಔರಾದಾರ್ (23) ಎಂದು ಹೇಳಿದ್ದು, ಇಲ್ಲಿ ಗುಜರಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾನೆ.
ನಂತರ, ಪೊಲೀಸರು ಆತನ ಬಳಿ ಇದ್ದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದಾಗ ಆತ ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ಶ್ರೀನಿವಾಸಪುರಕ್ಕೆ ಬಂದು ನೆಲೆಸಿರುವುದು ಕಂಡು ಬಂದಿದೆ. ನಂತರ ಆತನ ಪತ್ನಿ ಮತ್ತು ಮಕ್ಕಳನ್ನು ಸಹ ವಶಕ್ಕೆ ಪಡೆದುಕೊಂಡು ಅವರನ್ನು ಮತ್ತಷ್ಟು ವಿಚಾರಣೆ ಮಾಡಿದಾಗ ಇವರ ಜೊತೆಗೆ ಇನ್ನೂ ಎಂಟು ಜನರು ಬಂದಿರುವುದು ಪೊಲೀಸರಿಗೆ ಗೊತ್ತಾಗಿದೆ.
ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ ಭಾಗದಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ತಡರಾತ್ರಿ ದಾಳಿ ಮಾಡಿ ಅಲ್ಲಿದ್ದ ಸುಮಾರು ಹತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಅವರ ಬಳಿ ಇರುವ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಪ್ರಾಥಮಿಕ ವಿಚಾರಣೆ ವೇಳೆ ಅವರೆಲ್ಲರೂ ಬಾಂಗ್ಲಾದೇಶದವರು ಎಂದು ತಿಳಿದುಬಂದಿದೆ.
ಆದರೆ, ಈ ಬಗ್ಗೆ ಇನ್ನು ಯಾವುದೇ ಪ್ರಕರಣ ದಾಖಲಾಗಿಲ್ಲ. ಬದಲಾಗಿ ಅವರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುವ ಕೆಲಸ ನಡೆಯುತ್ತಿದೆ. ಸದ್ಯ 12 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಿ, ನಾಲ್ವರು ಮಕ್ಕಳು, ಮೂವರು ಮಹಿಳೆಯರು, ಐದು ಜನರ ಪುರುಷರು ಇದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್.ಬಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನಂದಗುಡಿಯಲ್ಲಿ ನೆಲಸಿದ್ದ ಬಾಂಗ್ಲಾದೇಶಿಗರು
- ಮೊಹಮ್ಮದ್ ಜಾಯಿದ್ ಇಸ್ಲಾಂ ಬಿನ್ ಸಿಕಂದರ್ ಔರಾದಾರ್, 23 ವರ್ಷ ಗುಜರಿ ಕೆಲಸ.
- ನಜರಲ್ ಬಿನ್ ಅಬ್ದುಲ್ ಅಜೀಸ್, 40ವರ್ಷ ಗುಜರಿ ವ್ಯಾಪಾರ.
- ಮಹಮ್ಮದ್ ಪೈಝಲ್ ಔಲಾ ದಾರ್ ಬಿನ್ ಮಹಮ್ಮದ್ ಬಾದಲ್ ಔಲಾದಾರ್, 22 ವರ್ಷ,
- ಮಹಮ್ಮದ್ ನಹಿಮ್ ಔಲಾದಾರ್ ಬಿನ್ ಮಹಮದ್ ಬಾದಲ್ ಔಲಾದಾರ್, 14 ವರ್ಷ,
- ಮುರ್ಷಿದಾ ಅಕ್ತರ್ ಕೋಂ ನಜರುಲ್ ಇಸ್ಲಾಂ, 36 ವರ್ಷ(ಮಹಿಳೆ)
- ಸಮೇಲಿ ಕೋಂ ಜೋಶಿಂ, 28 ವರ್ಷ (ಮಹಿಳೆ)
- ಫಿರ್ ದೋಸಿ D/o ಜೊಸಿಮ್ ಮಲ್ಲಿಕ್,(6)
- ಕುಲ್ ಸಂ ಅಕ್ತರ್ D/o ಜೋಶಿಮ್ ಮಲ್ಲಿಕ್, ಎರಡು ತಿಂಗಳ ಮಗು,
- ಮೈಯಿರ್ ಇಸ್ಲಾಂ ಔಲಾದಾರ್ ಬಿನ್ ನಜರುಲ್ ಇಸ್ಲಾಂ, ಮೂರು ವರ್ಷ ಎಂದು ತಿಳಿದು ಬಂದಿದೆ.
ಸದ್ಯ ಎಲ್ಲರ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಮೇಲ್ನೋಟಕ್ಕೆ ಎಲ್ಲರೂ ಅಕ್ರಮ ಬಾಂಗ್ಲಾವಲಸಿಗರು ಎಂದು ತಿಳಿದು ಬಂದಿದ್ದು ಅವರ ಮೂಲ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಅನ್ನೋದು ಪೊಲೀಸ್ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.