ವಿಧಾನಸಭೆ ಶಿಸ್ತಿಗೆ ಶಾಸಕರ ಅಮಾನತು: ಸ್ಪೀಕರ್ ಖಡಕ್ ಎಚ್ಚರಿಕೆ

ತಪ್ಪು ಮಾಡಿದಾಗ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಪ್ಪು ಪುನರಾವರ್ತನೆ ಆಗುತ್ತದೆ. ಸ್ಪೀಕರ್ ಪೀಠಕ್ಕೆ ಅದಕ್ಕೇ ಆದ ಗೌರವ ಇದೆ. ಪೀಠದ ಮೇಲೆ ಬಂದರೆ ಏನು ಮಾಡಬೇಕೋ ಕಾನೂನು ಪ್ರಕಾರ ಮಾಡಿದ್ದೇವೆ. ಮತ್ತೆ ಮತ್ತೆ ಅದನ್ನೇ ಮಾಡಿದರೆ ಮುಂದೆ ಡಿಸ್ಮಿಸ್ ಮಾಡಿಸುತ್ತೇನೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರು, ಮಾ.24 : ತಪ್ಪು ಮಾಡಿದಾಗ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಪ್ಪು ಪುನರಾವರ್ತನೆ ಆಗುತ್ತದೆ. ಸ್ಪೀಕರ್ ಪೀಠಕ್ಕೆ ಅದಕ್ಕೇ ಆದ ಗೌರವ ಇದೆ. ಪೀಠದ ಮೇಲೆ ಬಂದರೆ ಏನು ಮಾಡಬೇಕೋ ಕಾನೂನು ಪ್ರಕಾರ ಮಾಡಿದ್ದೇವೆ. ಮತ್ತೆ ಮತ್ತೆ ಅದನ್ನೇ ಮಾಡಿದರೆ ಮುಂದೆ ಡಿಸ್ಮಿಸ್ ಮಾಡಿಸುತ್ತೇನೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿರುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ. ಹಿಂದೆ ಇದೇ ರೀತಿಯಾದ ಸಂದರ್ಭದಲ್ಲಿ ಆಗಿನವರು ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಇಂಥ ಕ್ರಮ ಕೈಗೊಂಡ ನಂತರ ಮತ್ತೆ ಪುನರಾವರ್ತನೆ ಆಗುವುದಿಲ್ಲ. ಯುಟಿ ಖಾದರ್ ಆಗಿ ಕ್ಷಮಿಸ ಬಹುದು. ಆದರೆ ಸ್ಪೀಕರ್ ಆಗಿ ಇದನ್ನೆಲ್ಲ ಕ್ಷಮಿಸಿ ಬಿಡುವುದಕ್ಕೆ ಆಗುವುದಿಲ್ಲ. ಈ ಕ್ರಮದಿಂದ ಇಡೀ ರಾಜ್ಯದ ಗೌರವ ಎತ್ತಿ ಹಿಡಿದಿದ್ದೇನೆ. ಕೆಲವರು ಸ್ಪೀಕರ್ ಪೀಠದ ಗಂಭೀರತೆ ತಿಳಿಯದೆ ಮಾಡಿದ್ದಾರೆ, ಅವರೆಲ್ಲ ನಮ್ಮ ಮಿತ್ರರೇ. ಇದಕ್ಕೆಲ್ಲ ಫುಲ್ ಸ್ಟಾಪ್ ಇಡಬೇಕೆಂದು ಕಠಿಣ ನಿರ್ಧಾರ ತಗೊಂಡಿದ್ದೇನೆ ಎಂದು ಹೇಳಿದರು.
ರಾಜಕೀಯವಾಗಿ ಕೆಲವರು ಒಂದೊಂದು ರೀತಿ ಹೇಳಿಕೆ ನೀಡಬಹುದು. ನಾನು ರಾಜಕೀಯ ಪ್ರಶ್ನೆಗೆ ಉತ್ತರ ನೀಡೋಕೆ ಹೋಗುವುದಿಲ್ಲ. ಸ್ಪೀಕರ್ ಅಸೆಂಬ್ಲಿಗೆ ಸುಪ್ರೀಂ ಆಗಿರುತ್ತಾರೆ, ಮುಂದೆಯೂ ಇದೇ ರೀತಿಯಾದರೆ ಇದಕ್ಕಿಂತ ಹೆಚ್ಚಿನ ಕ್ರಮ ಖಚಿತ. ಒಂದು ವರ್ಷವೋ, ಎರಡು ವರ್ಷವೋ ಅಮಾನತು ಮಾಡುತ್ತೇನೆ. ಬೇಕಾದರೆ ಕೋರ್ಟಿನಲ್ಲಿ ಪ್ರಶ್ನೆ ಮಾಡಲಿ, ಕೋರ್ಟ್ ಈಗಾಗಲೇ ಅಸೆಂಬ್ಲಿಗೆ ಸ್ಪೀಕರ್ ಸುಪ್ರೀಂ ಎಂದು ಹೇಳಿದೆ ಎಂದರು. ಶಾಸಕರು ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ಅನರ್ಹತೆ ಮಾಡಲು ಅವಕಾಶ ಇದೆ, ಶಾಸಕರು ಆ ಕಡೆ, ಈ ಕಡೆ ಹೋಗುತ್ತಾರೆಂದು ತಿಳಿದ ಕೂಡಲೇ ಸ್ಪೀಕರ್ ಕ್ರಮ ತೆಗೆದುಕೊಂಡರೆ ಏನೂ ಆಗುವುದಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಕಾನೂನು ಅಷ್ಟು ಪ್ರಬಲವಾಗಿದೆ ಎಂದು ಯುಟಿ ಖಾದರ್ ಈ ಹಿಂದಿನ ಪಕ್ಷಾಂತರ ವಿಚಾರ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದರು.
ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್ ವಿಚಾರ ಕೇಳಿದಾಗ, ಈ ಬಗ್ಗೆ ಮುಖ್ಯಮಂತ್ರಿಯವರು ಸ್ಪಷ್ಟ ಉತ್ತರ ನೀಡಿದ್ದಾರೆ. ಇದನ್ನು ಸದನ ಗಂಭೀರವಾಗಿ ಪರಿಗಣಿಸುತ್ತದೆ. ಈ ಬಗ್ಗೆ ನಾನು ಮತ್ತು ಗೃಹ ಸಚಿವರು ಕುಳಿತು ಚರ್ಚಿಸಿ ಉನ್ನತ ಮಟ್ಟದ ತನಿಖೆ ಮಾಡಿಸುತ್ತೇವೆ. ಯಾವ ರೀತಿಯ ತನಿಖೆಯಾಗಬೇಕು ಎನ್ನುವ ಬಗ್ಗೆ ಸಿಬಿಐ ಬೇಕೋ, ನಿವೃತ್ತ ನ್ಯಾಯಾಧೀಶರಿಂದ ಮಾಡಿಸಬೇಕೋ ಎನ್ನುವುದನ್ನು ನಿರ್ಧರಿಸುತ್ತೇವೆ ಎಂದಿದ್ದರು. ಬಜೆಟ್ ಮೇಲಿನ ಚರ್ಚೆ ಮುಖ್ಯವಾಗಿರುವಾಗ, ಈಗಲೇ ಯಾವ ರೀತಿಯ ತನಿಖೆ ಎಂದು ಹೇಳಬೇಕೆಂದು ಪ್ರತಿಭಟನೆ ಮಾಡುವುದು ಸರಿಯಾ ಎಂದು ಕೇಳಿದರು.