ಸ್ವಯಂ ಅಪಾಯ ತಂದುಕೊಂಡಿದ್ದಾರೆ” ಎಂಬ ಹೈಕೋರ್ಟ್ ಹೇಳಿಕೆಗೆ ಸುಪ್ರೀಂ ಗಂಭೀರ ತಿರಸ್ಕಾರ

ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಇತ್ತೀಚೆಗೆ “ಆಕ್ಷೇಪಾರ್ಹ” ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅಲಹಾಬಾದ್ ಹೈಕೋರ್ಟ್ ಅನ್ನು ಮಂಗಳವಾರ ಸುಪ್ರೀಂ ಕೋರ್ಟ್ (Supreme Court) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್ನ ಇತ್ತೀಚಿನ ಆದೇಶವನ್ನು ಸುಪ್ರೀಂ ಕೋರ್ಟ್ ಖಂಡಿಸಿದೆ ಹಾಗೂ ಆ ಮಹಿಳೆ “ತಾನೇ ತೊಂದರೆಗೆ ಆಹ್ವಾನ ನೀಡಿದ್ದಾಳೆ ಎಂಬ ಹೇಳಿಕೆಗೆ ಹೈಕೋರ್ಟನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು ಈ ಅವಲೋಕನಗಳನ್ನು ಅತ್ಯಂತ ಅಸಂವೇದನಶೀಲ ಎಂದು ಹೇಳಿದೆ.
ವಿವಾದಾತ್ಮಕ ಪ್ರಕರಣವೊಂದರಲ್ಲಿ ಅಲಹಾಬಾದ್ ಹೈಕೋರ್ಟ್ ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದೆ. ಅತ್ಯಾಚಾರಕ್ಕೆ ಸಂತ್ರಸ್ತೆಯೇ ಹೊಣೆ, ಸ್ನೇಹಿತನ ಮನೆಗೆ ಹೋಗುವ ಮೂಲಕ ಸ್ವಯಂ ಅಪಾಯ ತಂದುಕೊಂಡಿದ್ದಾರೆ. ಇದೊಂದು ಒಪ್ಪಿತ ಕೃತ್ಯವಾಗಿದ್ದು, ಅತ್ಯಾಚಾರವಾಗುವುದಿಲ್ಲ ಎಂದು ಹೇಳಿತ್ತು. ಹೈಕೋರ್ಟ್ ನ್ಯಾ.ಸಂಜಯ್ಕುಮಾರ್ ಸಿಂಗ್ ಅವರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಿರುವ ಸುಪ್ರೀಂ ಕೋರ್ಟ್ ಜಾಮೀನು ನೀಡಬಹುದು ಆದರೆ ಸ್ವಯಂ ಅಪಾಯ ತಂದುಕೊಂಡಿರುವುದು ಎಂದರೆ ಏನು? ಇಂತಹ ಪ್ರಕರಣದ ತೀರ್ಪು ನೀಡಬೇಕಾದರೆ ನ್ಯಾಯಮೂರ್ತಿಗಳು ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಬೇಕು ಹಾಗೂ ಜಾಗರೂಕರಾಗಿರಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಎ.ಜಿ. ಮಸಿಹ್ ಅವರ ಪೀಠ ಹೇಳಿದೆ.
ಮಾರ್ಚ್ 17 ರ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಕೂಡ ಸುಪ್ರೀಂ ಉಲ್ಲೇಖಿಸಿದೆ. ಇಂತಹ ಪ್ರಕರಣದ ತೀರ್ಪು ನೀಡುವಾಗ ಜಾಗರೂಕರಾಗಿರಬೇಕು. ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು. ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರು “ಸ್ತನಗಳನ್ನು ಹಿಡಿಯುವುದು” ಮತ್ತು “ಹುಡುಗಿಯ ಪೈಜಾಮಾದ ದಾರವನ್ನು ಮುರಿಯುವುದು” ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನಿಸುವುದಲ್ಲ ಎಂದು ತೀರ್ಪು ನೀಡಿದ್ದರು. . ಅಂತಹ ಅಪರಾಧವು ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.
ಈಗಿನ ಘಟನೆಯಲ್ಲಿ ನೊಯ್ಡಾ ಮೂಲದ ಸ್ನಾತಕೋತ್ತರ ವಿದ್ಯಾರ್ಥಿನಿ 2024ರ ಡಿಸೆಂಬರ್ನಲ್ಲಿ ದಿಲ್ಲಿಯ ರೆಸ್ಟೋರೆಂಟ್ಗೆ ಸ್ನೇಹಿತರ ಜತೆ ಪಾರ್ಟಿಗೆ ತೆರಳಿದ್ದರು. ಪಾರ್ಟಿ ಮುಗಿದ ಬಳಿಕ ಮದ್ಯದ ಅಮಲಿನಲ್ಲಿದ್ದ ಸಂತ್ರಸ್ತೆಯನ್ನು ಮನೆಗೆ ಕರೆದೊಯ್ಯುವ ನೆಪದಲ್ಲಿ ಬೇರೆಡೆಗೆ ಕರೆದುಕೊಂಡು ಹೋದ ಆರೋಪಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರು ಆಧರಿಸಿ 2024ರ ಡಿ.11 ರಂದು ಆರೋಪಿಯನ್ನು ಬಂಧಿಸಲಾಗಿತ್ತು.
ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾ.ಸಂಜಯ್ ಸಿಂಗ್, ”ಪ್ರಕರಣದ ಸಂದರ್ಭ ಸನ್ನಿವೇಶ, ಅಪರಾಧದ ಸ್ವರೂಪ, ಸಾಕ್ಷ್ಯಗಳು, ಆರೋಪಿಯ ಭಾಗೀದಾರಿಕೆ, ವಕೀಲರ ವಾದ-ಪ್ರತಿವಾದ ಗಮನಿಸಿದಾಗ ಸಂತ್ರಸ್ತೆಯ ತಪ್ಪು ಸಹ ಕಂಡುಬರುತ್ತದೆ. ಕುಡಿದ ನಶೆಯಲ್ಲಿಸ್ನೇಹಿತನ ಮನೆಗೆ ಹೋಗುವ ಮೂಲಕ ಸ್ವಯಂ ತೊಂದರೆ ಆಹ್ವಾನಿಸಿಕೊಂಡಿದ್ದಾರೆ ಎಂದು ಹೇಳಿದ್ದರು.