ಮೇ 10ರ ದಾಳಿಯಲ್ಲಿ ಪಾಕ್ ಪರಮಾಣು ಶಸ್ತ್ರಾಗಾರದ ಗೇಟ್ಗಳಿಗೆ ಹೊಡೆತ: ಟಾಮ್ ಕೂಪರ್ ಅನಾವರಣ

ನವದೆಹಲಿ: ಮೇ 10 ರಂದು ಭಾರತೀಯ ವಾಯುಸೇನೆ ಪಾಕ್ ವಾಯುನೆಲೆ ಮಾತ್ರವಲ್ಲ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಣಾ ಘಟಕ ಮೇಲೆ ಕ್ಷಿಪಣಿ ದಾಳಿ ನಡೆಸಿ ಎರಡೂ ಪ್ರವೇಶದ್ವಾರಗಳನ್ನು ಹೊಡೆದು ಹಾಕಿತ್ತು ಎಂದು ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾ ವಾಯು ಯುದ್ಧಗಳ ವಿಶ್ವ ಪ್ರಸಿದ್ಧ ಇತಿಹಾಸಕಾರ ಟಾಮ್ ಕೂಪರ್ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ಜೊತೆ ಮಾತನಾಡಿದ ಅವರು, ಒಂದು ಕಡೆ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹಣಾ ಸೌಲಭ್ಯಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿರುವಾಗ ಮತ್ತೊಂದು ಕಡೆ ಪಾಕಿಸ್ತಾನಕ್ಕೆ ದಾಳಿ ಮಾಡುವ ಸಾಮರ್ಥ್ಯ ಇಲ್ಲದೇ ಇದ್ದಾಗ ನನ್ನ ಅಭಿಪ್ರಾಯದಲ್ಲಿ ಭಾರತದ ಸ್ಪಷ್ಟವಾಗಿ ಜಯ ದಾಖಲಿಸಿದೆ ಎಂದು ಅವರು ವಿಶ್ಲೇಷಿಸಿದರು.
ಭಾರತೀಯ ವಾಯುಪಡೆಯು ಪಾಕಿಸ್ತಾನದಲ್ಲಿರುವ ವಾಯು ನೆಲೆಗಳ ಮೇಲೆ ಸ್ವತಂತ್ರವಾಗಿ ದಾಳಿ ಮಾಡಿತ್ತು. ಆದರೆ ಪಾಕಿಸ್ತಾನಕ್ಕೆ ಅದೇ ರೀತಿಯ ದಾಳಿ ಮಾಡಲು ಸಾಧ್ಯವಾಗಲಿಲ್ಲ. ಅಂದರೆ ಪಾಕಿಸ್ತಾನದ ಪ್ರತಿಬಂಧಕ ವಿಫಲವಾಗಿದೆ ಮತ್ತು ಅದರ ವಾಯು ರಕ್ಷಣಾ ವ್ಯವಸ್ಥೆಗಳು ಕುಸಿದಿದೆ ಎಂದರ್ಥ ಎಂದು ಅವರು ವಿವರಿಸಿದರು.
ಮೇ 10 ರಂದು, ಐಎಎಫ್ ಪಾಕ್ ವಾಯುಪಡೆಯ ನೆಲೆಗಳನ್ನು ಮಾತ್ರವಲ್ಲದೆ ಸರ್ಗೋಧಾ ಸಂಕೀರ್ಣದ ಭಾಗವಾಗಿರುವ ಮುಷಾಫ್ ವಾಯುನೆಲೆಯಲ್ಲಿರುವ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಣಾ ಸ್ಥಳದ ಎರಡೂ ಪ್ರವೇಶದ್ವಾರಗಳನ್ನೂ ಸಹ ಹೊಡೆದು ಹಾಕಿತ್ತು ಎಂದು ಹೇಳಿದರು.
ಪಾಕಿಸ್ತಾನಿಗಳು ಸುಲಭವಾಗಿ ತಲೆಬಾಗುವ ಅಥವಾ ಸೋಲನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಯಾವಾಗ ವಾಯುನೆಲೆಯ ಜೊತೆಗೆ ಶಸ್ತ್ರಾಸ್ತ್ರ ಸಂಗ್ರಹಣಾ ಘಟಕದ ಮೇಲೆ ಭಾರತೀಯ ಕ್ಷಿಪಣಿಗಳು ದಾಳಿ ಮಾಡಿದಾಗ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಪಾಕಿಸ್ತಾನ ಕರೆ ಮಾಡಿ ದಾಳಿ ನಿಲ್ಲಿಸಲು ಮನವಿ ಮಾಡಿತು ಎಂದು ತಿಳಿಸಿದರು.