ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋಹತ್ಯೆ ತಡೆಗೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಮುಸ್ಲಿಮರು ತ್ಯಾಗದ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ನಡುವಲ್ಲೇ ಗೋ ಹತ್ಯೆ-ಗೋವುಗಳ ಅಕ್ರಮ ಸಾಗಾಟ ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರು ನಗರ ಉಪ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.
ಗೋವು ಮತ್ತು ಒಂಟೆಗಳನ್ನು ವಧೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, 13 ವರ್ಷಕ್ಕಿಂತ ಮೇಲ್ಪಟ್ಟ ಕುರಿ, ಮೇಕೆ ಮತ್ತು ಎಮ್ಮೆಗಳನ್ನು ಮಾತ್ರ ವಧೆ ಮಾಡಲು ಅವಕಾಶವಿದೆ ಎಂದು ಬಿಬಿಎಂಪಿ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಆರ್ಟಿಒ, ಸಾರಿಗೆ ಇಲಾಖೆ, ಪೊಲೀಸ್ ಮತ್ತು ಪುರಸಭೆಯ ಅಧಿಕಾರಿಗಳು ಪ್ರಾಣಿಗಳ ಸಾಗಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಯಾರಾದರೂ ಜಾನುವಾರುಗಳನ್ನು ವಧೆ ಮಾಡುತ್ತಿರುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗೋವು ಅಥವಾ ಒಂಟೆಗಳನ್ನು ಅಕ್ರಮವಾದಿ ಸಾಗಾಟ ಮಾಡುತ್ತಿರುವುದು ಕಂಡು ಬಂದರೆ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.