ಕೊಳ್ಳೇಗಾಲದಲ್ಲಿ ಬಾಲಕನ ಮೇಲೆ ಬೀದಿನಾಯಿಗಳ ದಾಳಿ: ಗಂಭೀರ ಗಾಯ

ಕೊಳ್ಳೇಗಾಲ: ತಾಲ್ಲೂಕಿನ ತಿಮ್ಮರಾಜೀಪುರ ಗ್ರಾಮದಲ್ಲಿ ಮನೆಯ ಮುಂದೆ ಆಟ ಆಡುತ್ತಿದ್ದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಕಚ್ಚಿ ಗಂಭೀರ ಗಾಯಗೊಳಿಸಿವೆ.

ತಿಮ್ಮರಾಜೀಪುರ ಗ್ರಾಮದ ಶಶಿ ಮತ್ತು ಸುಧಾ ದಂಪತಿ ಪುತ್ರ ದಿಶಾಂತ್ (6) ನಾಯಿ ದಾಳಿಗೆ ಒಳಗಾದ ಬಾಲಕ. ಶಾಲೆಗೆ ರಜೆ ಇದ್ದ ಕಾರಣ ಮನೆಯ ಮುಂದೆ ಬಾಲಕ ಆಟವಾಡುತ್ತಿದ್ದ.
ನಾಯಿಗಳು ಬಾಲಕನನ್ನು ಏಕಾಏಕಿ ದಾಳಿ ಮಾಡಿ ಕಚ್ಚಿ, ಎಳೆದಾಡಿವೆ. ಪೋಷಕರು ಗಮನಕ್ಕೆ ಬರುತ್ತಿದ್ದಂತೆ ಬೀದಿ ನಾಯಿಗಳನ್ನು ಓಡಿಸಿ, ಮಗುವನ್ನು ರಕ್ಷಿಸಿಕೊಂಡಿದ್ದಾರೆ.
ಅಷ್ಟರಲ್ಲಾಗಲೇ ಬಾಲಕನ ಎದೆ, ಮುಖ ಹಾಗೂ ಕೈಗಳಿಗೆ ನಾಯಿಗಳು ಕಚ್ಚಿ ತೀವ್ರ ಗಾಯಗೊಳಿಸಿದ್ದವು. ಬಾಲಕನಿಗೆ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬೀದಿನಾಯಿಗಳ ಹಾವಳಿಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯ ಆಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.