Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಸವಾಲು: 18 ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವುದು ಕೇವಲ 1-2 ಮಕ್ಕಳು!

Spread the love

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ಸಂಖ್ಯೆ ಐದಕ್ಕಿಂತ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಪಕ್ಕದ ಸರ್ಕಾರಿ ಶಾಲೆಗಳಿಗೆ ವಿಲೀನ ಮಾಡಬೇಕು ಎನ್ನುವ ವಿಚಾರವೂ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಸುಮಾರು 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ.

ಅಚ್ಚರಿ ಎಂದರೆ ಕೇವಲ ಒಬ್ಬ ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಹೊಂದಿರುವ 18 ಸರ್ಕಾರಿ ಪ್ರಾಥಮಿಕ ಶಾಲೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಈ ಶಾಲೆಗಳು ಕಾರ್ಯಾರಂಭವಾಗಿವೆ. ಜಿಲ್ಲೆಯ 6 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರು ಮತ್ತು 12 ಸರ್ಕಾರಿ ಶಾಲೆಗಳಲ್ಲಿ ಇಬ್ಬರು ಮಕ್ಕಳು ಕಲಿಯುತ್ತಿದ್ದಾರೆ.

ಹೀಗೆ ಕಲಿಯುತ್ತಿರುವ ಒಬ್ಬರು, ಇಬ್ಬರು ಮಕ್ಕಳಿಗೆ ಇಡೀ ಶಾಲೆಗಳೇ ನಡೆಯುತ್ತಿದೆ. ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಕಠಿಣವಾದ ಮನವೊಲಿಕೆ: ಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವ ಸರ್ಕಾರಿ ಶಾಲೆಗಳ ಎಸ್‌ಡಿಎಂಸಿ ಸದಸ್ಯರ ಮನವೊಲಿಸಿ ಆ ಶಾಲೆಯನ್ನು ಪಕ್ಕದ ಶಾಲೆಯ ಜೊತೆ ವಿಲೀನ ಮಾಡಬೇಕು. ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ) ಪಡೆಯುವಂತೆ ಪೋಷಕರ ಮನವೊಲಿಸಬೇಕು. ಈ ಮನವೊಲಿಕೆಯೇ ಶಿಕ್ಷಣ ಇಲಾಖೆಗೆ ಸವಾಲಾಗಿದೆ.

ಕೆಲವು ಕಡೆಗಳಲ್ಲಿ ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ತಮ್ಮ ಗ್ರಾಮದ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಪಕ್ಕದ ಶಾಲೆಗೆ ವರ್ಗಾವಣೆ ಪ್ರಮಾಣ ಪತ್ರ ನೀಡಲು ಒಪ್ಪುತ್ತಿಲ್ಲ ಎನ್ನುತ್ತವೆ ಶಿಕ್ಷಣ ಇಲಾಖೆ ಮೂಲಗಳು.

‘ಒಬ್ಬರು, ಇಬ್ಬರು ವಿದ್ಯಾರ್ಥಿಗಳಿರುವ ಶಾಲೆಗಳಿಗೂ ಬಿಸಿಯೂಟದ ಸಾಮಗ್ರಿ ನೀಡಲಾಗುತ್ತಿದೆ. ಕೆಲವು ಕಡೆ ಶಿಕ್ಷಕರೇ ಪಕ್ಕದ ಶಾಲೆಗೆ ಮಕ್ಕಳನ್ನು ಕಳುಹಿಸಲು ವಿರೋಧಿಸುತ್ತಿದ್ದಾರೆ. ಗ್ರಾಮಸ್ಥರನ್ನು ಎತ್ತಿಕಟ್ಟುತ್ತಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಇದ್ದರೆ ತಮಗೆ ಕೆಲಸ ಕಡಿಮೆ ಎನ್ನುವ ಭಾವನೆ ಶಿಕ್ಷಕರಲ್ಲಿ ಇದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸುವರು.

‘ನೀವು (ಮಾಧ್ಯಮ) ಸಹ ಸರ್ಕಾರಿ ಶಾಲೆಗಳನ್ನು ಜಿಲ್ಲೆಯಲ್ಲಿ ಮುಚ್ಚಲಾಗುತ್ತಿದೆ ಎಂದು ಸುದ್ದಿಗಳನ್ನು ಮಾಡುವಿರಿ. ಆಗ ಶಾಲೆ ಮುಚ್ಚುತ್ತದೆ ಎನ್ನುವ ಭಾವನೆಯಲ್ಲಿ ವಿಲೀನಕ್ಕೂ ಗ್ರಾಮಸ್ಥರು ಒಪ್ಪುವುದಿಲ್ಲ. ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳನ್ನು ತಕ್ಷಣವೇ ಪಕ್ಕದ ಶಾಲೆಗೆ ವಿಲೀನಗೊಳಿಸಬೇಕು. ಶಿಕ್ಷಕರಿಗೆ, ಅಡುಗೆ ಸಿಬ್ಬಂದಿಗೆ ನೀಡುವ ವೇತನವೂ ಸರ್ಕಾರಕ್ಕೆ ಉಳಿಯುತ್ತದೆ. ಒಬ್ಬ ವಿದ್ಯಾರ್ಥಿಗೆ ಶಾಲೆ ನಡೆಸಿದರೆ ವೆಚ್ಚ ಹೆಚ್ಚುತ್ತದೆ’ ಎಂದು ಹೇಳಿದರು.

ಮಕ್ಕಳಿಲ್ಲದ ಶಾಲೆ ಹತ್ತಿರ ಶಾಲೆಗೆ ಸಂಯೋಜನೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆ, ಮಾನವ ಸಂಪನ್ಮೂಲದ ಸಮರ್ಪಕ ಬಳಕೆ ಇತ್ಯಾದಿ ಅಂಶಗಳ ಕುರಿತು ಚರ್ಚಿಸಿ, ಸುಧಾರಣೆ ತರುವ ಉದ್ದೇಶದಿಂದ ‘ತಾಲ್ಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿ’ ರಚಿಸಲು ಶಿಕ್ಷಣ ಇಲಾಖೆ ಈಗಾಗಲೇ ಮುಂದಾಗಿದೆ.

ಅತೀ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಮಕ್ಕಳ ಹಿತಾಸಕ್ತಿ ಕಾಯ್ದುಕೊಂಡು ಸರ್ವತೋಮುಖ ಬೆಳವಣಿಗೆ ಹಾಗೂ ಸಾಮಾಜೀಕರಣದ ಹಿತದೃಷ್ಟಿಯಿಂದ ಹತ್ತಿರ ಶಾಲೆಗಳ ಜೊತೆ ಸಂಯೋಜಿಸಬೇಕು. ಸಂಯೋಜಿತ ಶಾಲೆಯನ್ನು ‘ಹಬ್‌ ಆಯಂಡ್‌ ಸ್ಪೋಕ್‌ ಮಾಡೆಲ್‌’ ರೀತಿಯಲ್ಲಿ ಕೇಂದ್ರ ಶಾಲೆಯಾಗಿ ಅಭಿವೃದ್ಧಿಪಡಿಸುವುದು ಕೂಡಾ ಸಮಿತಿಯ ಕಾರ್ಯವಾಗಿದೆ ಎಂದೂ ಶಿಕ್ಷಣ ಇಲಾಖೆ ತಿಳಿಸಿದೆ. ಆ ಮೂಲಕ, ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನ ಪದ ಬಳಸದೆ ಸಮೀಪದ ಶಾಲೆಗೆ ಸಂಯೋಜಿಸುವ ನಿರ್ಧಾರಕ್ಕೆ ಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *