ಕಾಲ್ತುಳಿತ ಪ್ರಕರಣದ ಎಫ್ಐಆರ್ ಚರ್ಚೆಗೆ ಗ್ರಾಸ: ಅವ್ಯಕ್ತತೆ, ಅನುಮಾನಗಳು ಮತ್ತು ಉತ್ತರಹೀನ ಪ್ರಶ್ನೆಗಳು

ಬೆಂಗಳೂರು: ನಗರದಲ್ಲಿ ನಡೆದ ಘೋರ ಕಾಲ್ತುಳಿತ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. 11 ಆರ್ಸಿಬಿ (RCB) ಅಭಿಮಾನಿಗಳು ಸಾವನ್ನಪ್ಪಿದ್ದರು. ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದ್ದು, ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಆದರೆ ಇದೀಗ ಕರ್ನಾಟಕ ಪೊಲೀಸರು ದಾಖಲಿಸಿರುವ ಎಫ್ಐಆರ್ ವಿರುದ್ಧ ಕೆಲ ಪ್ರಶ್ನೆ ಮತ್ತು ಅನುಮಾನಗಳು ಹುಟ್ಟಿಕೊಂಡಿವೆ.
ಕಾಲ್ತುಳಿತದ ಬಗ್ಗೆ ಕೇವಲ ಯುಡಿಆರ್ ದಾಖಲಿಸಿ ಪೊಲೀಸ್ ಇಲಾಖೆ ಕೈತೊಳೆದುಕೊಂಡಿತ್ತು. ಆದರೆ ವ್ಯಾಪಕ ಆರೋಪ ವ್ಯಕ್ತವಾಗಿದ್ದರಿಂದ ಎಚ್ಚೆತ್ತ ಪೊಲೀಸರು ಕೊನೆಗೆ ಘಟನೆ ಬಗ್ಗೆ ಎಫ್ಐಆರ್ ದಾಖಲಿಸಿದ್ದರು. ಆದರೆ ಈಗ ದಾಖಲಾಗಿರುವ ಎಫ್ಐಆರ್ ಹಲವು ಅನುಮಾಗಳಿಗೆ ಕಾರಣವಾಗಿದೆ.
ಎಫ್ಐಆರ್ ವಿರುದ್ಧ ಎದ್ದಿರುವ ಅನುಮಾನಗಳು?
ಎಫ್ಐಆರ್: ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ, ಜೂನ್ 3ರಂದು ಸಂಜೆ 6 ಗಂಟೆಗೆ KSCA ಎಕ್ಸಿಕ್ಯೂಟಿವ್ ಆಫೀಸರ್ ಶುಭೇಂದು ಘೋಷ್, ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಸಂಭ್ರಮಾಚರಣೆ ಇರಲಿದೆ. ಇದಕ್ಕೆ ಸೂಕ್ತ ಭದ್ರತೆ ನೀಡುವಂತೆ ಮನವಿ ಪತ್ರ ನೀಡಿರುತ್ತಾರೆ.
ಪ್ರಶ್ನೆ: ಅಂದರೆ, ಐಪಿಎಲ್ ಫೈನಲ್ ಪಂದ್ಯ ಪ್ರಾರಂಭಗೊಳ್ಳುವ ಮೊದಲೇ ಕೆಎಸ್ಸಿಎಸಿಗೆ ಆರ್ಸಿಬಿ ಗೆಲ್ಲುತ್ತೆ ಎನ್ನುವುದು ಗೊತ್ತಿತ್ತಾ. ಇದು ಹೇಗೆ ಸಾಧ್ಯ ಎಂಬ ಅನುಮಾನ ಮೂಡಿದೆ.
ಎಫ್ಐಆರ್: ಜೂನ್ 4ರಂದು ಬೆಳಿಗ್ಗೆ 9 ಗಂಟೆ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆದು ಬಂದೋಬಸ್ಥ್ ವ್ಯವಸ್ಥೆ ಮಾಡಿಕೊಳ್ಳಲಾಯಿತು ಎಂದು ಉಲ್ಲೇಖಿಸಲಾಗಿದೆ.
ಪ್ರಶ್ನೆ: ಅಂದರೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಯಿತು ಎನ್ನುವುದೇ ಸುಳ್ಳು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಎಫ್ಐಆರ್: ಇನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಿರುವಂತೆ ಮಧ್ಯಾಹ್ನ 03.10ರ ಸಮಯಕ್ಕೆ ಕಾಲ್ತುಳಿತಕ್ಕೆ ಒಳಗಾಗಿ 11 ಜನ ಮೃತಪಟ್ಟಿರುತ್ತಾರೆ.
ಪ್ರಶ್ನೆ: ಹಾಗಾದರೆ ಕೃತ್ಯ ನಡೆದದ್ದು, ಸಂಜೆ 4ರಿಂದ 5 ಗಂಟೆ ಎನ್ನುವುದೇ ಸುಳ್ಳು.
ಪ್ರಶ್ನೆ: ಸಂಜೆ 05.45ಕ್ಕೆ ಕಾರ್ಯಕ್ರಮ ಶುರುವಾಯಿತು. 9 ನೇ ನಂಬರ್ ಗೇಟ್ ಬಳಿ ಕಾಲ್ತುಳಿತಕ್ಕೆ ಒಳಗಾಗಿದ್ದು, ಯಾವ ಯಾವ ಗೇಟ್ಗಳಲ್ಲಿ ಯಾರು ಯಾರ ಮೃತ ದೇಹ ಸಿಕ್ಕಿದ್ದು ವಿವರವಿಲ್ಲ. ಜೂನ್ 4ರಂದು ಆ ಜಾಗಗಳ ಮಹಜರು ನಡೆಸಿದ ಬಗ್ಗೆ ವಿವರವಿಲ್ಲ. ಜೊತೆಗೆ ಅನುಮಾನಿಸಿದ ವ್ಯಕ್ತಿಗಳ ಹೆಸರು ಪಟ್ಟಿಯಲ್ಲಿ ಇಲ್ಲ.
ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ನ ಈ ಅಂಶಗಳು ಸದ್ಯ ಚರ್ಚೆಗೆ ಗ್ರಾಸವಾಗಿದೆ.