ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ: ಸರ್ಕಾರದ ದಿಢೀರ್ ನಿರ್ಧಾರ ದುರಂತಕ್ಕೆ ಕಾರಣ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಸ್ತಾಪವನ್ನು ಸರ್ಕಾರ ದಿಢೀರ್ ಆಗಿ ಒಪ್ಪಿಕೊಂಡ ಕಾರಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ನಡೆದಿದೆ.

ಬುಧವಾರ ಆರ್ಸಿಬಿ ವಿಜಯೋತ್ಸವ ಆಚರಣೆ ಮಾಡುವುದಕ್ಕೆ ಕೆಎಸ್ಸಿಎ ಸರ್ಕಾರದ ಬಳಿ ಅನುಮತಿ ಕೇಳಿತ್ತು. ಕೆಎಸ್ಸಿಎ ಅನುಮತಿಗೆ ಸರ್ಕಾರ ಬುಧವಾರ ಬೇಡ ಬೇರೆ ದಿನ ಆಯೋಜನೆ ಮಾಡಿ ಎಂದು ಸೂಚಿಸಬಹುದಿತ್ತು. ಆದರೆ ಸರ್ಕಾರ ಚಿನ್ನಸ್ವಾಮಿ ಸ್ಟೇಡಿಯಂ ಕಾರ್ಯಕ್ರಮದ ಜೊತೆ ಹೆಚ್ಚುವರಿಯಾಗಿ ವಿಧಾನಸೌಧದ ಕಾರ್ಯಕ್ರಮವನ್ನು ಸೇರಿಸಿತ್ತು.
ಎರಡು ಕಾರ್ಯಕ್ರಮಗಳ ಘೋಷಣೆಯಾದ ನಂತರ ಗೃಹ ಇಲಾಖೆ ಯಾವ ರೀತಿ ಕಾರ್ಯಕ್ರಮ? ಎರಡು ಕಡೆ ಎಷ್ಟು ಜನ ಸೇರಬಹುದು? ಸಿದ್ದತೆ ಹೇಗೆ ಎಂಬುದರ ಕುರಿತು ಮುಂಜಾಗ್ರತಾ ಕ್ರಮಗಳನ್ನು ಮಾಡಬೇಕಿತ್ತು.
ಚಿನ್ನಸ್ವಾಮಿಗೆ ರೋಡ್ ಶೋ ಮೂಲಕ ಆರ್ಸಿಬಿ ಆಟಗಾರರು ಬರಬೇಕಿತ್ತು. ಆದರೆ ವಿಕ್ಟರಿ ಪರೇಡ್ಗೆ ಭದ್ರತಾ ಕಾರಣ ನೀಡಿ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೆ ಸರ್ಕಾರ ರೋಡ್ ಶೋ ಜಾಗದಲ್ಲಿ ವಿಧಾನಸೌಧದ ಕಾರ್ಯಕ್ರಮ ಸೇರ್ಪಡೆ ಮಾಡಿತ್ತು. ಯಾವುದೇ ಪೂರ್ವಭಾವಿ ಸಭೆ ಮಾಡದೇ ಏಕಾಏಕಿ ನಿರ್ಧಾರ ಮಾಡಿ ಅನುಮತಿ ನೀಡಿದ್ದರಿಂದ ದುರಂತ ಸಂಭವಿಸಿದೆ.
ದುರಂತಕ್ಕೆ ಕಾರಣ ಏನು?
ಮಧ್ಯಾಹ್ನ ಮೂರು ಗಂಟೆಯವರೆಗೆ ಅಭಿಮಾನಿಗಳು ಸರದಿಯಲ್ಲೇ ನಿಂತುಕೊಂಡಿದ್ದರು. ವಿಕ್ಟರಿ ಪರೇಡ್ ರದ್ದಾದ ವಿಚಾರ ತಿಳಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿಅಭಿಮಾನಿಗಳು ಚಿನ್ನಸ್ವಾಮಿಯತ್ತ ಬರತೊಡಗಿದರು.
ಈ ಸಂದರ್ಭದಲ್ಲಿ ಕೆಲ ಗೇಟ್ಗಳಿಂದ ಅಭಿಮಾನಿಗಳನ್ನು ಒಳಗಡೆ ಬಿಡುತ್ತಿದ್ದರು. ಕಾರ್ಯಕ್ರಮ ಉಚಿತ ಎಂದು ಹೇಳಿದ್ದರೂ ಯಾಕೆ ಉಳಿದ ಗೇಟ್ಗಳಿಂದ ಜನರನ್ನು ಒಳಗಡೆ ಬಿಡಲಾಗುತ್ತಿದೆ ಎಂದು 18,19,20 ಗೇಟ್ನಲ್ಲಿದ್ದ ಅಭಿಮಾನಿಗಳು ಆಯೋಜಕರು, ಪೊಲೀಸರ ಜೊತೆ ಪ್ರಶ್ನೆ ಮಾಡಲು ಆರಂಭಿಸಿದ್ದಾರೆ.
ಗೇಟ್ಗಳ ಬಳಿ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಕೆಲವರು ಸ್ಟೇಡಿಯಂ ಕಾಂಪೌಂಡ್ ಹತ್ತಿ ಒಳ ನುಗ್ಗಲು ಆರಂಭಿಸಿದ್ದಾರೆ. ಅಭಿಮಾನಿಗಳ ಹುಚ್ಚಾಟವನ್ನು ನಿಉಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ತಳ್ಳಾಟ ನೂಕಾಟ ಆರಂಭವಾಗುತ್ತಿದ್ದಂತೆ ದಿಢೀರ್ ಗೇಟ್ ಓಪನ್ ಮಾಡಲಾಗಿದೆ. ಓಪನ್ ಮಾಡಿದ್ದೇ ತಡ ಜನ ಒಳಗಡೆ ನುಗ್ಗಲು ಓಡಿದ್ದಾರೆ. ಓಡುವ ವೇಳೆ ಕೆಳಗೆ ಕೆಲವರು ಬಿದ್ದಿದ್ದಾರೆ. ಬಿದ್ದವರ ಮೇಲೆ ಓಡಿದ್ದರಿಂದ ದುರಂತ ಸಂಭವಿಸಿದೆ.