ಸಿಬ್ಬಂದಿ ಕೊರತೆಯ ಕಾರಣ: ಶಿರಸಿಯಲ್ಲಿ ರಾತ್ರಿ ಬಸ್ ಸೇವೆಗೆ ಅಡೆತಡೆ

ಶಿರಸಿ: ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಶಿರಸಿ ಬಸ್ ನಿಲ್ದಾಣಗಳಲ್ಲಿ ಸಿಬ್ಬಂದಿ ಕೊರತೆಯ ಕಾರಣ ನೀಡಿ ರಾತ್ರಿ ಪಾಳಿಯ ಬಸ್ಗಳನ್ನು ಹೊಸ ಬಸ್ ನಿಲ್ದಾಣಕ್ಕೆ ಕಳುಹಿಸದೆ ಹಳೆಯ ಬಸ್ ನಿಲ್ದಾಣಕ್ಕೆ
ಸೀಮಿತಗೊಳಿಸುತ್ತಿರುವುದಕ್ಕೆ ಪ್ರಯಾಣಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಎರಡು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಇಲ್ಲಿನ ಗಣೇಶನಗರದ ಬಳಿಯ ಹೊಸ ಬಸ್ ನಿಲ್ದಾಣದಿಂದ ಎಲ್ಲ ಬಸ್ಗಳು ಕಾರ್ಯಾಚರಣೆ ಮಾಡುತ್ತಿದ್ದವು. ಇತ್ತೀಚೆಗೆ ಬಿಡ್ಕಿ ಬಯಲಿನ ಹಳೆಯ ಬಸ್ ನಿಲ್ದಾಣ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಈವರೆಗೆ ಕೇವಲ ಪಿಕ್ಅಪ್ ಪಾಯಿಂಟ್ ಆಗಿದ್ದ ಬಸ್ ನಿಲ್ದಾಣ ಈಗ ಪೂರ್ಣ ಪ್ರಮಾಣದೊಂದಿಗೆ ಜನಸೇವೆಗೆ ಲಭ್ಯವಾಗಿದೆ. ಕಾರಣ ಎಲ್ಲ ಬಸ್ಗಳು ಇದೇ ಬಸ್ ನಿಲ್ದಾಣಕ್ಕೆ ಬರುತ್ತಿದ್ದು, ಗಣೇಶನಗರದ ಬಳಿಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಇದು ಪ್ರಯಾಣಿಕರು, ವಿದ್ಯಾರ್ಥಿಗಳು, ಸ್ಥಳೀಯ ವ್ಯಾಪಾರಿಗಳು, ಆಟೋದವರ ಸಂಕಷ್ಟಕ್ಕೆ ಕಾರಣವಾಗಿದೆ’ ಎಂಬ ದೂರು ಕೇಳಿ ಬರುತ್ತಿದೆ.
‘ಹಳೆಯ ಬಸ್ ನಿಲ್ದಾಣ ಕಾಮಗಾರಿ ನಡೆದಿದ್ದ ಕಾರಣ ಈವರೆಗೆ ಹೊಸ ಬಸ್ ನಿಲ್ದಾಣ ಮಾತ್ರ ಇತ್ತು. ಈಗ ಎರಡು ಬಸ್ ನಿಲ್ದಾಣಗಳಿಗೂ ಪ್ರಯಾಣಿಕರು ಬರುತ್ತಿದ್ದಾರೆ. ಆದರೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ಸಿಬ್ಬಂದಿ ಕೊರತೆ ನೆಪ ಒಡ್ಡಿ ಒಂದೇ ಬಸ್ ನಿಲ್ದಾಣವನ್ನು ಕೇಂದ್ರೀಕರಿಸಲು ಮುಂದಾಗಿದ್ದಾರೆ. ಇದರಿಂದ ರಾತ್ರಿ ಪ್ರಯಾಣವನ್ನು ನಂಬಿರುವ ಪ್ರಯಾಣಿಕರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಹೊಸ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಪಡೆದು ಬಸ್ ಹತ್ತಲು ರಾತ್ರಿ ಸಂದರ್ಭದಲ್ಲಿ ಬಂದರೆ ಇಲ್ಲಿ ಬಸ್ ವ್ಯವಸ್ಥೆಯೇ ಇರುವುದಿಲ್ಲ. ಹಳೆಯ ನಿಲ್ದಾಣಕ್ಕೇ ತೆರಳಬೇಕು. ಹಗಲು ಸಮಯದಲ್ಲಿ ಮಾತ್ರ ಹೊಸ ನಿಲ್ದಾಣಕ್ಕೆ ಬಸ್ ಬರುತ್ತಿದೆ. ಇಂಥ ಅವ್ಯವಸ್ಥೆ ಸರಿಯಲ್ಲ’ ಎನ್ನುತ್ತಾರೆ ಪ್ರಯಾಣಿಕರಾದ ರಾಧಾ ಉಪಾಧ್ಯಾಯ.
‘ಹೊಸ ಬಸ್ ನಿಲ್ದಾಣಕ್ಕೆ ಹೋಗಬಾರದು. ಹಳೆಯ ಬಸ್ ನಿಲ್ದಾಣಕ್ಕೇ ಹೋಗಬೇಕು ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳ ಮೌಖಿಕ ಸೂಚನೆಯಿದೆ. ಅಲ್ಲದೇ, ಹೊಸ ಬಸ್ ನಿಲ್ದಾಣಕ್ಕೆ ಬಸ್ ತೆರಳದಂತೆ ಸಿಬ್ಬಂದಿ ಇಟ್ಟು ತಿಳಿಸಲಾಗುತ್ತಿದೆ. ಹೀಗಾಗಿ ಹೊಸ ನಿಲ್ದಾಣದಲ್ಲಿ ಪ್ರಯಾಣಿಕರಿದ್ದರೂ ನಾವು ಹೋಗಲಾರದ ಸ್ಥಿತಿಯಿದೆ’ ಎಂದು ಹೆಸರು ಹೇಳಲಿಚ್ಛಿಸದ ಚಾಲಕರೊಬ್ಬರು ತಿಳಿಸಿದರು.
ರಾತ್ರಿ 9 ರಿಂದ ಬೆಳಗಿನ ಜಾವದವರೆಗೆ 30ಕ್ಕೂ ಹೆಚ್ಚು ಮಾರ್ಗಗಳಿಗೆ ತೆರಳುವ ಬಸ್ಗಳು ಹೊಸ ನಿಲ್ದಾಣದ ಮೂಲಕ ಹೋಗುತ್ತಿದ್ದುದು, ಈಗ ಹಳೆಯ ನಿಲ್ದಾಣದ ಮೂಲಕ ಸಾಗುತ್ತಿವೆ. ಇದೇ ಕಾರಣಕ್ಕೆ ಹೊಸ ನಿಲ್ದಾಣ ಭಾಗದ ಅಂಗಡಿಕಾರರ, ಆಟೋ ಚಾಲಕರ ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ಇಳಿಕೆಯಾಗಿವೆ. ಈ ಬಗ್ಗೆ ಅಂಗಡಿಕಾರರೂ ಆಕ್ರೋಶ ಹೊರಹಾಕುತ್ತಿದ್ದಾರೆ.
‘ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವ ಕೌಂಟರ್ಗೆ ಬೀಗ ಹಾಕಲಾಗಿದೆ. ನಿಲ್ದಾಣದ ಸಿಬ್ಬಂದಿ ವಿಚಾರಿಸಿದರೆ ಹಳೆಯ ಬಸ್ ನಿಲ್ದಾಣದಲ್ಲಿ ಕೌಂಟರ್ ಮಾಡಲಾಗಿದ್ದು, ಅಲ್ಲಿಂದಲೇ ಪಡೆದುಕೊಳ್ಳಲು ಸೂಚಿಸುತ್ತಾರೆ. ಎರಡೂ ಕಡೆ ಬಸ್ ಪಾಸ್ ನೀಡುವ ವ್ಯವಸ್ಥೆ ಇದ್ದರೆ ಒತ್ತಡ ಇಲ್ಲದೇ ಪಾಸ್ ಪಡೆಯಬಹುದು’ ಎಂಬುದು ವಿದ್ಯಾರ್ಥಿ ಗಣೇಶ ನಾಯ್ಕ ಮಾತು.
ಪ್ರಭಾ ಭಟ್ ಪ್ರಯಾಣಿಕರುಈ ಹಿಂದೆ ರಾತ್ರಿ ಸಮಯದಲ್ಲಿ ಹೊಸ ನಿಲ್ದಾಣಕ್ಕೂ ಎಲ್ಲ ಬಸ್ ಬರುತ್ತಿತ್ತು. ಇನ್ನು ಮುಂದೆ ಕೂಡ ಆ ವ್ಯವಸ್ಥೆ ಮುಂದುವರಿಯಬೇಕು ಬಸವರಾಜ ಅಮ್ಮಣ್ಣನವರ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಉತ್ತರ ಕನ್ನಡ ವಿಭಾಗದ ಡಿ.ಸಿಹೊಸ ಬಸ್ ನಿಲ್ದಾಣಕ್ಕೆ ಹೋದಂತೆ ಯಾವ ಸೂಚನೆಯೂ ನೀಡಿಲ್ಲ. ಯಾಕಾಗಿ ಬಸ್ ಬರುತ್ತಿಲ್ಲ ಎಂಬ ಬಗ್ಗೆ ನಿಗಾ ಇಡಲು ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿದೆ. ಅವರು ನೀಡುವ ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು