ಬೆಂಗಳೂರು ಮಳೆಯಿಂದ ವೈರಾಣು ಜ್ವರ ಹಾಗೂ ಡೆಂಗ್ಯೂ ಪ್ರಕರಣಗಳ ಉಲ್ಬಣ: ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆ

ಬೆಂಗಳೂರು: ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿ ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ಕೊಳಚೆ ಆವರಿಸಿದೆ. ಕೆಲವೆಡೆ ಮನೆಗಳಿಗೂ ನೀರು ನುಗ್ಗಿದೆ. ಬಿಸಿಲಿನಿಂದ ಕೂಡಿದ್ದ ವಾತಾವರಣ ಏಕಾಏಕಿ ಥಂಡಿಯಾಗಿದೆ. ಜೊತೆಗೆ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರವಾಗಿದೆ. ಇದರಿಂದಾಗಿ ಏಕಾಏಕಿ ಇದೀಗ ಸಾಂಕ್ರಾಮಿಕ ರೋಗಗಳು ಹೆಚ್ಚಾಗತೊಡಗಿವೆ. ವೈರಾಣು ಜ್ವರ, ಕೆಮ್ಮು, ನೆಗಡಿ, ಅತಿಸಾರ ವಾಂತಿ, ಬೇಧಿ ಪ್ರಕರಣಹಳು ಹೆಚ್ಚಿವೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ 30 ರಷ್ಟು ಹೆಚ್ಚಳ ಕಂಡುಬಂದಿದೆ. ಇದಕ್ಕೆಲ್ಲ ಸಿಲಿಕಾನ್ ಸಿಟಿಯಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಮಾನ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ವೈರಾಣು ಜ್ವರದ ಜೊತೆ ಇನ್ಫ್ಲುಯೆಂಜಾ ಪ್ರಕರಣಗಳಲ್ಲಿಯೂ ಏರಿಕೆ ಕಂಡು ಬರುತ್ತಿದೆ. ಜತೆಗೆ ಕೆಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿವಿ ರಾಮನ್ ನಗರ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿದಂತೆ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ದದಷ್ಟು ಹೊರ ರೋಗಿಗಳಲ್ಲಿಯೂ ವೈರಾಣು ಜ್ವರ ಕಂಡು ಬರುತ್ತಿದೆ
ವೈದ್ಯರು ಹೇಳುವುದೇನು?
ಮಕ್ಕಳಲ್ಲಿ ಹಾಗೂ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಹೆಚ್ಚಾಗಿ ಜ್ವರ ಕಂಡುಬರುತ್ತಿದೆ. ಮನೆಯಲ್ಲಿ ಸೋಂಕು ತಗುಲಿದವರಿಂದ ಮನೆ ಮಂದಿಗೆಲ್ಲ ಹರಡುತ್ತಿದೆ. ಡೆಂಗ್ಯೂ, ಮಲೇರಿಯಾದಂತಹ ಜ್ವರ ಪತ್ತೆಗೆ ಗುಣಲಕ್ಷಣ ಕಂಡುಬಂದ ರೋಗಿಗಳಿಗೆ ಪರೀಕ್ಷೆ ಮಾಡಿಸಲಾಗುತ್ತಿದೆ. ಜನರು ಆರೋಗ್ಯದಲ್ಲಿ ಸಣ್ಣ ಬದಲಾವಣೆಯಾದರೂ ನಿರ್ಲಕ್ಷ್ಯವಹಿದಂತೆ ವೈದ್ಯೆ ಡಾ. ಪಲ್ಲವಿ ಸೂಚಿಸಿದ್ದಾರೆ.
ಡೆಂಗ್ಯೂ ತಡೆಗೆ ಆರೋಗ್ಯ ಇಲಾಖೆ ಅಲರ್ಟ್
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಏರಿಕೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಡೆಂಗ್ಯೂ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ 240 ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ 700 ಸ್ವಯಂ ಸೇವಕರನ್ನು ನೇಮಿಸಿದೆ. ಕರ್ನಾಟಕದ ಒಟ್ಟು ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿಯೇ ಶೇ 40 ರಿಂದ 50 ರಷ್ಟು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿದ್ದು, ನಾಗರಿಕರು ಕೂಡ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಒಟ್ಟಿನಲ್ಲಿ ಡೆಂಗ್ಯೂ ಹಾವಳಿ ಜೊತೆಗೆ ಈಗ ಹೆಚ್ಚಾಗುತ್ತಿರುವ ವೈರಾಣು ಜ್ವರ ಆತಂಕಕ್ಕೆ ಕಾರವಾಗಿದೆ. ಹೀಗಾಗಿ ಜನರು ಸ್ವಚ್ಛತೆ ಕಾಪಾಡುವುದು ಹಾಗೂ ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಮಾಡುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.