ಸಚಿವರ ಬೇಜವಾಬ್ದಾರಿತನಕ್ಕೆ ಸ್ಪೀಕರ್ ಗರಂ: ಶಾಸಕರ ಪ್ರಶ್ನೆಗಳಿಗೆ ಉತ್ತರವಿಲ್ಲದ್ದಕ್ಕೆ ಸದನ ಮುಂದೂಡಿದ ಯು.ಟಿ. ಖಾದರ್

ಬೆಂಗಳೂರು : ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಇದೇ ಮೊದಲ ಬಾರಿಗೆ ಸದನವನ್ನೇ ಮುಂದೂಡಿಕೆ ಮಾಡಿ, ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಸೋಮವಾರ ವಿಧಾನಸಭೆಯ ಲಿಖಿತ ಉತ್ತರ ಪ್ರಕ್ರಿಯೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, 230 ಲಿಖಿತ ಮೂಲಕ ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳನ್ನು ಮಂಡಿಸಿದರು.
ಆಗ ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿ, ಯಾವ ರೀತಿಯಲ್ಲೂ ಲೆಕ್ಕ ಹಾಕಿದರೂ ಶೇಕಡಾ 50ರಷ್ಟು ಗಡಿ ದಾಟಿಲ್ಲ. ಈ ಹಿಂದೆ ಹೇಳಿದ ಸಭಾಧ್ಯಕ್ಷರ ಆದೇಶಗಳಿಗೆ ಈ ಸರಕಾರ ಯಾವುದೇ ಬೆಲೆ ನೀಡಿಲ್ಲ. ಇಲ್ಲಿನ ಅಧಿಕಾರಿಗಳು ನಿತ್ಯ ದೇವರ ರೂಪದಂತೆ ಬಂದು ಕುಳಿತುಕೊಳ್ಳುತ್ತಾರೆ. ಆನಂತರ ದೇವರಂತೆ ಹೋಗುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಕಳೆದ ಬಾರಿಯೂ ಸಚಿವ ರಾಮಲಿಂಗಾರೆಡ್ಡಿ ಅವರು 131 ಲಿಖಿತ ಮೂಲಕ ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳನ್ನು ಮಂಡಿಸಿದ್ದರು. ಆದರೆ, ಈಗಲೂ ಯಾವುದೇ ಬದಲಾವಣೆ ಆಗಿಲ್ಲ. ಒಟ್ಟಾರೆ ಐದನೇ ಬಾರಿಗೂ ಕ್ರಮ ಆಗಿಲ್ಲ. ಇಂಹತ ಅಧಿಕಾರಿಗಳನ್ನು ಶೂಟ್ ಮಾಡಬೇಕು ಎಂದು ಅವರು ಉಲ್ಲೇಖಿಸಿದರು.
ಆಗ ಸ್ಪೀಕರ್ ಯು.ಟಿ.ಖಾದರ್ ಅವರು, ಈ ಸದನ ನಡೆಸುವುದು ಮಂತ್ರಿಗಳಿಗಾಗಿ ಅಲ್ಲ. ಬದಲಾಗಿ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ಧ್ವನಿ ಎತ್ತಿ ಸರಕಾರದ ಮುಂದೆ ತರಲು. ಆದರೇ, ಇದಕ್ಕೆ ಸಂಬಂಧಿಸಿದಂತೆ ಉತ್ತರಗಳೇ ನೀಡಿಲ್ಲ ಎಂದರೆ, ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಮುಂದೆ ಈ ರೀತಿಯಲ್ಲಿ ಮರುಕಳಿಸಬಾರದು. ಹೀಗಾಗಿ, ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡುವರೆಗೂ ಸದನದ ಕಾರ್ಯ ಕಲಾಪ ಕೈಗೆತ್ತಿಕೊಳ್ಳುವುದಿಲ್ಲ ಎಂದು ಉಲ್ಲೇಖಿಸಿ, ಸದನವನ್ನು ಮುಂದೂಡಿಕೆ ಮಾಡಿದರು.
ಈ ವೇಳೆ ಬಿಜೆಪಿ ಸದಸ್ಯರು, ಮೇಜು ತಟ್ಟಿ ಸ್ಪೀಕರ್ ನಿರ್ಧಾರ ಸ್ವಾಗತಿಸಿದಲ್ಲದೇ, ಈ ಸರಕಾರಕ್ಕೆ ಸ್ಪೀಕರ್ ಛೀಮಾರಿ ಹಾಕಿದ್ದಾರೆ ಎಂದು ಕೂಗಿದ ದೃಶ್ಯ ಕಂಡಿತು.