ತಾಯಿಯ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ ಮಗ: ಆಭರಣ ನೀಡಿಲ್ಲವೆಂದೇ ಚಿತೆಯ ಮೇಲೆ ಮಲಗಿ ನಾಟಕ!

ಜೈಪುರ: ದೇಶದಲ್ಲಿ ಎಂತೆಂಥಾ ಜನರು ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಹಣ, ಆಭರಣದ ಎದುರು ಸಂಬಂಧಗಳು ಕೇವಲ ಹೆಸರಿಗಷ್ಟೇ ಎಂಬುದಕ್ಕೆ ಜೈಪುರದಲ್ಲಿ ನಡೆದ ಘಟನೆ ಸ್ಪಷ್ಟ ಉದಾಹರಣೆ ಎಂದು ಹೇಳಬಹುದು.
ಇಲ್ಲಿ ಹೆತ್ತ ತಾಯಿ ಮೃತಪಟ್ಟ ದುಃಖದಲ್ಲಿರಬೇಕಾದ ಕಿರಿಯ ಮಗ ತಾಯಿಯ ಮೈಮೇಲಿದ್ದ ಬೆಳ್ಳಿಯ ಆಭರಣಕ್ಕಾಗಿ ಸಹೋದರರ ಜೊತೆ ಜಗಳಕ್ಕೆ ಇಳಿದಿದ್ದಾನೆ, ಅಲ್ಲದೆ ಆಭರಣ ನೀಡದೆ ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಬೇಕಿದ್ದರೆ ನನ್ನನ್ನೂ ತಾಯಿಯ ಜೊತೆ ಸುಟ್ಟು ಬಿಡಿ ಎಂದು ಚಿತೆಯ ಮೇಲೆ ಮಲಗಿ ರಾದ್ದಂತ ಮಾಡಿರುವ ಘಟನೆ ನಡೆದಿದೆ.
ಏನಿದು ಪ್ರಕರಣ:
ರಾಜಸ್ಥಾನದ ಜೈಪುರ ನಿವಾಸಿಯಾಗಿರುವ ಭೂರಿ ದೇವಿ ಎಂಬ ಮಹಿಳೆಗೆ ಏಳು ಮಂದಿ ಮಕ್ಕಳು ಅದರಲ್ಲಿ ಆರು ಗಂಡು ಮಕ್ಕಳಾದರೆ ಒಂದು ಹೆಣ್ಣು, ಗಂಡು ಮಕ್ಕಳು ಒಟ್ಟಿಗೆ ವಾಸಿಸುತ್ತಿದ್ದರೂ ಇತ್ತೀಚಿಗೆ ಕಿರಿಯ ಮಗ ಓಂ ಪ್ರಕಾಶ್ ಗ್ರಾಮದ ಹೊರಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ, ಇಲ್ಲಿನ ಗ್ರಾಮಸ್ಥರು ಹೇಳುವಂತೆ ಕಳೆದ ಮೂರೂ ನಾಲ್ಕು ವರ್ಷಗಳಿಂದ ಓಂ ಪ್ರಕಾಶ್ ಹಾಗೂ ಇತರ ಸಹೋದರರ ನಡುವೆ ಆಸ್ತಿ ವಿಚಾರವಾಗಿ ವೈಮನಸ್ಸು ಇತ್ತು ಗಲಾಟೆಗಳು ನಡೆಯುತಿತ್ತು ಎಂದು ಹೇಳಿದ್ದಾರೆ.
ಹಾಗೆ ಕಳೆದ ಮೇ 3 ರಂದು ಮಧ್ಯಾಹ್ನದ ವೇಳೆಗೆ ಭೂರಿ ದೇವಿ ನಿಧನಹೊಂದಿದ್ದಾರೆ. ಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ, ಭೂರಿ ದೇವಿಯ ದೇಹವನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗುವ ಮೊದಲು, ತಾಯಿಯ ದೇಹದ ಮೇಲಿದ್ದ ಆಭರಣಗಳನ್ನು ತೆಗೆದು ಹಿರಿಯ ಮಗನಾದ ಗಿರ್ಧಾರಿಗೆ ಹಸ್ತಾಂತರಿಸಿದ್ದಾರೆ ಈ ವೇಳೆ ಕಿರಿಯ ಮಗ ಓಂ ಪ್ರಕಾಶ್ ಕೂಡ ಅಲ್ಲಿ ಇದ್ದ ಇದಾದ ಬಳಿಕ ಪುತ್ರರು ತಾಯಿಯ ಶವವನ್ನು ಹೊತ್ತು ಅಂತ್ಯಕ್ರಿಯೆ ಸ್ಥಳಕ್ಕೆ ಬಂದು ಇನ್ನೇನು ಚಿತೆಗೆ ತಾಯಿಯ ಮೃತದೇಹವನ್ನು ಇಡಬೇಕು ಎನ್ನುವಷ್ಟರಲ್ಲಿ ಕಿರಿಯ ಮಗ ಓಂ ಪ್ರಕಾಶ್ ತಾಯಿಯ ಆಭರಣಗಳನ್ನು ತನಗೆ ನೀಡುವಂತೆ ಖ್ಯಾತೆ ತೆಗೆದಿದ್ದಾನೆ ಇಲ್ಲದೆ ಹೋದರೆ ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಎಂದು ಸಹೋದರರಿಗೆ ಗದರಿಸಿದ್ದಾನೆ ಇದನ್ನು ಕಂಡು ಅಲ್ಲಿ ನೆರೆದಿದ್ದ ಗ್ರಾಮಸ್ಥರು ಕಕ್ಕಾಬಿಕ್ಕಿಯಾಗಿದ್ದಾರೆ, ಈ ವೇಳೆ ಅಲ್ಲಿದ್ದ ಕೆಲವರು ಆತನನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ ಆದರೆ ಇದ್ಯಾವುದಕ್ಕೂ ಜಗ್ಗದೆ ಬೇಕಿದ್ದರೆ ತಾಯಿಯ ಜೊತೆ ನನ್ನನ್ನೂ ಸುಟ್ಟು ಬಿಡಿ ಎಂದು ಚಿತೆ ಮೇಲೆ ಮಲಗಿ ನಾಟಕವಾಡಿದ್ದಾನೆ ಸುಮಾರು ಎರಡು ಗಂಟೆಗಳ ಬಳಿಕ ಹಿರಿಯ ಸಹೋದರ ಆಭರಣ ನೀಡಲು ಒಪ್ಪಿದ ಬಳಿಕ ಅಂತ್ಯಕ್ರಿಯೆ ನಡೆಸಲು ಒಪ್ಪಿದ್ದಾನೆ.
ಹೆತ್ತು ಹೊತ್ತು ಸಲಹಿದ ತಾಯಿ ಮೃತಪಟ್ಟಿದ್ದಾರೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಮಕ್ಕಳು ಹೆಣದ ಎದುರು ಆಸ್ತಿಗಾಗಿ ಜಗಳ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಮಾತನಾಡುವ ಸ್ಥಿತಿ ನಿರ್ಮಾಣವಾಗಿದೆ.