ಪ್ರತಿಷ್ಠಿತ ಜ್ಯುವೆಲರ್ಸ್ ಮಳಿಗೆ ಮಾಲಿಕನ ಪುತ್ರ ಪೊಲೀಸರಿಂದ ಬಂಧನ – ಹೋಟೆಲ್ ಸಿಬ್ಬಂದಿಗೆ ಕತ್ತಿ ತೋರಿಸಿ ಗೂಂಡಾಗಿರಿ

ಬೆಂಗಳೂರು : ತಮ್ಮ ಬೈಕ್ ಅನ್ನು ಜಖಂಗೊಳಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಎ2ಬಿ ಹೋಟೆಲ್ ಸಿಬ್ಬಂದಿಗೆ ಕತ್ತಿ ತೋರಿಸಿ ಗೂಂಡಾಗಿರಿ ನಡೆಸಿದ ಆರೋಪದ ಮೇರೆಗೆ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಮಳಿಗೆಯೊಂದರ ಮಾಲಿಕರ ಪುತ್ರ ಹಾಗೂ ಆತನ ಸ್ನೇಹಿತರನ್ನು ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭೀಮಾ ಜ್ಯುವೆಲರ್ಸ್ ಮಳಿಗೆ ಮಾಲಿಕರ ಪುತ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಭಟ್, ಆತನ ಸ್ನೇಹಿತರಾದ ಕೆವಿನ್ ಥಾಮಸ್ ಹಾಗೂ ಸತೀಶ್ ಬಂಧಿತರಾಗಿದ್ದು, ಎಚ್ಎಸ್ಆರ್ ಲೇಔಟ್ನ ಬಿಡಿಎ ಕಾಂಪ್ಲೆಕ್ಸ್ನಲ್ಲಿರುವ ಎ2ಬಿ ಹೋಟೆಲ್ ಸಿಬ್ಬಂದಿ ಮೇಲೆ ಬುಧವಾರ ಆರೋಪಿಗಳು ದುಂಡಾವರ್ತನೆ ತೋರಿದ್ದರು. ಈ ಬಗ್ಗೆ ಹೋಟೆಲ್ ಮಾಲಿಕ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಎಸ್ಆರ್ ಲೇಔಟ್ನಲ್ಲಿ ನೆಲೆಸಿರುವ ವಿಷ್ಣು, ತನ್ನ ತಂದೆ ಆರಂಭಿಸಿದ ಭೀಮಾ ಜ್ಯುವೆಲರ್ಸ್ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿದ್ದಾನೆ. ಎಚ್ಎಸ್ಆರ್ ಲೇಔಟ್ನ ಬಿಡಿಎ ಕಾಂಪ್ಲೆಕ್ಸ್ನಲ್ಲಿರುವ ಎ2ಬಿ ಹೋಟೆಲ್ಗೆ ಆಗಾಗ್ಗೆ ಕಾಫಿ ಕುಡಿಯಲು ಆತ ಹೋಗುತ್ತಿದ್ದ. ಅಂತೆಯೇ ಫೆ.9 ರಂದು ಹೋಟೆಲ್ಗೆ ಹೋಗಿದ್ದಾಗ ಆ ಹೋಟೆಲ್ನ ಹೊರಗಡೆ ನಿಲ್ಲಿಸಿದ್ದ ಸಿಬ್ಬಂದಿಯ ಬೈಕ್ ಅನ್ನು ಜಖಂಗೊಳಿಸಿ ಬಂದಿದ್ದ. ಈ ಕೃತ್ಯವು ಹೋಟೆಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಫೆ.26 ರಂದು ಮತ್ತೆ ಹೋಟೆಲ್ಗೆ ಕಾಫಿ ಕುಡಿಯಲು ತನ್ನ ಸ್ನೇಹಿತರ ಜತೆ ತೆರಳಿದ್ದ ವಿಷ್ಣುನನ್ನು ಗುರುತಿಸಿ ಬೈಕ್ ಅನ್ನು ಒಡೆದು ಹಾಕಿದ್ದೇಕೆ ಎಂದು ಹೋಟೆಲ್ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಈ ಆಕ್ಷೇಪಕ್ಕೆ ಕೆರಳಿದ ವಿಷ್ಣು, ಹೋಟೆಲ್ ಕೆಲಸಗಾರರ ಮೇಲೆ ಗಲಾಟೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೋಪಗೊಂಡ ಆತ, ತನ್ನ ಕಾರಿನಲ್ಲಿದ್ದ ಕತ್ತಿಯನ್ನು ತಂದು ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆಗ ಪ್ರಾಣಭೀತಿಯಿಂದ ಹೋಟೆಲ್ ಕೆಲಸಗಾರರು ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಹೋಟೆಲ್ ಮಾಲಿಕ ತಿರುಸೆಲ್ವಂ ಸೆಂದಿಲ್ ದೂರು ನೀಡಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ಸಬ್ ಇನ್ಸ್ಪೆಕ್ಟರ್ ರಾಮಚಂದ್ರ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ ಎಂದು ಮೂಲಗಳು ಹೇಳಿವೆ.
ಕೋರಮಂಗಲದ ಎ2ಬಿ ಹೋಟೆಲ್ ಸಿಬ್ಬಂದಿಗೂ ಸಹ ಕತ್ತಿ ತೋರಿಸಿ ವಿಷ್ಣು ಗೂಂಡಾಗಿರಿ ನಡೆಸಿದ್ದ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ಸಂತ್ರಸ್ತರಿಂದ ದೂರು ಪಡೆದು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.