ಸಾಮಾಜಿಕ ಹೋರಾಟಗಾರನಿಗೆ ಪ್ರೆಸ್ಟೀಜ್ ಗ್ರೂಪ್ ನಿಂದ ಕೊ*ಲೆ ಬೆದರಿಕೆ?

ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಬಿಲ್ಡರ್ ಗಳಲ್ಲಿ ಒಂದಾದ ‘ಪ್ರೆಸ್ಟೀಜ್ ಗ್ರೂಪ್’ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸಾಮಾಜಿಕ ಹೋರಾಟಗಾರ ಪರಮೇಶ್ ಎಂಬುವವರು ತಮಗೆ ಪ್ರಾಣಾಪಾಯವಿದೆ ಎಂದು ಕಾಡುಗೋಡಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಚಿಕ್ಕಬನಹಳ್ಳಿ ಗ್ರಾಮದಲ್ಲಿರುವ ‘ಪ್ರೆಸ್ಟೀಜ್ ಪಾರ್ಕ್ ಗ್ರೋ’ ಯೋಜನೆಗಾಗಿ ಸುಮಾರು 2 ಎಕರೆ 24 ಗುಂಟೆಗಳಷ್ಟು ಸರ್ಕಾರಿ ಕಾಲುವೆ ಜಮೀನನ್ನು ಅತಿಕ್ರಮಿಸಲಾಗಿದೆ ಎಂಬುದು ಇವರ ಮುಖ್ಯ ಆರೋಪವಾಗಿದೆ. ಈ ಜಮೀನನ್ನು ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿರುವ ಪರಮೇಶ್, ಈ ಬಗ್ಗೆ ಈಗಾಗಲೇ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದ್ದಾರೆ. ಆದರೂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಕಾಮಗಾರಿ ಮುಂದುವರಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.


ಈ ಕಾನೂನು ಹೋರಾಟದಿಂದ ರೊಚ್ಚಿಗೆದ್ದಿರುವ ಪ್ರೆಸ್ಟೀಜ್ ಗ್ರೂಪ್ ಬಿಲ್ಡರ್ಗಳು ತನ್ನನ್ನು ಕೊಲೆ ಮಾಡಲು’ಸುಪಾರಿ’ ನೀಡಿದ್ದಾರೆ ಎಂದು ಪರಮೇಶ್ ಗಂಭೀರವಾಗಿ ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ, ತಮ್ಮನ್ನು ಕೊಲೆ ಮಾಡುವ ಸಂಚು ರೂಪಿಸುತ್ತಿರುವ ಬಗ್ಗೆ ಲಭ್ಯವಾಗಿರುವ ವಿಡಿಯೋ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡಲಾಗಿದೆ. ಸಾಕ್ಷ್ಯಗಳಿದ್ದರೂ ಪೊಲೀಸರು ಪ್ರಭಾವಿ ಬಿಲ್ಡರ್ಗಳ ವಿರುದ್ಧ ಎಫ್ಐಆರ್ ದಾಖಲಿಸಲು ಹಿಂಜರಿಯುತ್ತಿದ್ದು, ಕೇವಲ ಎನ್ಸಿಆರ್ (NCR) ಮಾಡಲು ಮುಂದಾಗುತ್ತಿದ್ದಾರೆ ಎಂಬುದು ಹೋರಾಟಗಾರನ ಅಸಮಾಧಾನವಾಗಿದೆ.

ಸದ್ಯ ಕಾಡುಗೋಡಿ ಪೊಲೀಸ್ ಠಾಣೆಯ ಮುಂದೆಯೇ ಬೀಡು ಬಿಟ್ಟಿರುವ ಪರಮೇಶ್, ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸುವವರೆಗೂ ತಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರಭಾವಿ ಬಿಲ್ಡರ್ಗಳ ಪರವಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಸರ್ಕಾರಿ ಆಸ್ತಿ ರಕ್ಷಣೆಗಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.