ಚೈತ್ರಾ ವಿರುದ್ಧ ಅಪ್ಪನ ಶಾಕಿಂಗ್ ಆರೋಪ: ಸುಪಾರಿ ಕೊಲೆ ಯತ್ನ?

ಕುಂದಾಪುರ: ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂದೆಯ ನಡುವಿನ ವೈಮನಸ್ಸು ತಾರಕಕ್ಕೆ ಏರಿದೆ. ಪುತ್ರಿಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಆಕೆಯ ತಂದೆ ಬಾಲಕೃಷ್ಣ ನಾಯಕ್ ಈಗ ಪುತ್ರಿಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪುತ್ರಿಯ ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರಿಸಿರುವ ಬಾಲಕೃಷ್ಣ ನಾಯಕ್, ತನ್ನ ಕೊಲೆಗೆ ಮಗಳು ಸುಪಾರಿ ನೀಡಿರುವುದಾಗಿ ಕುಂದಾಪುರ ಠಾಣೆಗೆ ವಾರದ ಹಿಂದೆಯೇ ದೂರು ನೀಡಿದ್ದಾರೆ. ಆದರೆ ಕುಂದಾಪುರ ಪೊಲೀಸರು ಎಫ್ಐಆರ್ ದಾಖಲಿಸಿಲ್ಲವೆಂದು ತಿಳಿದುಬಂದಿದೆ.
ನನ್ನ ಆಸ್ತಿ, ಭೂಮಿಗಾಗಿ ಮಗಳು ನನ್ನನ್ನು ಕೊಲ್ಲಬಹುದು, ರಕ್ಷಣೆ ನೀಡಿ ಎಂದು ಅವರು ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಚೈತ್ರಾ-ಶ್ರೀಕಾಂತ್ ಮದುವೆಗೆ ತಾನು ಒಪ್ಪಿರಲಿಲ್ಲ. ಬೇರೆ ಹುಡುಗನನ್ನು ಮದುವೆ ಆಗಬೇಕಾದರೆ ₹5 ಲಕ್ಷ ನಗದು ನೀಡಲು ಒತ್ತಾಯಿಸಿದ್ದ ಆಕೆ, ಮದುವೆಗೆ ಬರದೇ ಹೋದರೆ ಭೂಗತ ದೊರೆಗಳ ಮೂಲಕ ಕೊಲ್ಲುವ ಬೆದರಿಕೆ ಹಾಕಿದ್ದಳು ಎಂದೆಲ್ಲ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೆಸರು ಬದಲಿಸಿಕೊಂಡ ಚೈತ್ರಾ: ಬಿಗ್ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಮದುವೆಯಾಗಿ ಹೊಸ ಬಾಳ್ವೆ ನಡೆಸುವ ಹೊತ್ತಿಗೇ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮೊದಲಿಗೆ ಅವರ ತಂದೆ ಮಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಗಂಡ-ಹೆಂಡತಿ ಇಬ್ಬರೂ ಕಳ್ಳರು ಎಂದಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಚೈತ್ರಾ, ಅಪ್ಪ ಕುಡುಕ ಆಗಿದ್ದು, ಕುಡಿಯಲು ದುಡ್ಡು ಕೊಡದಿದ್ದರೆ ಬಾಯಿಗೆ ಬಂದ ಹಾಗೆ ಹೇಳುತ್ತಾರೆ ಎಂದರು. ಅದಕ್ಕೆಮತ್ತೆ ಅಪ್ಪ ಚಾಟಿ ಬೀಸಿದ್ದರು. ಅದಾದ ಬಳಿಕ, ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ, ಆಕೆಯ ಭಾವ ಹಾಗೂ ಶ್ರೀರಾಮ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಮ್ಯಾನೇಜರ್ ಚಂದ್ರಶೇಖರ್ ಅವರು ಗಂಭೀರ ಆರೋಪಗಳನ್ನು ಮಾಡಿದರು. ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್, ಸಚಿವರಿಗೆ ಸೇರಿದೆ ಎನ್ನಲಾದ ಕೋಟ್ಯಾಂತರ ರೂಪಾಯಿಗಳನ್ನು ತಮ್ಮ ಸೊಸೈಟಿಯಲ್ಲಿ ಠೇವಣಿ ಇಡಿಸಿ, ನಂತರ ಅದರ ಮೇಲೆ ನಕಲಿ ದಾಖಲೆಗಳ ಆಧಾರದ ಮೇಲೆ ಸಾಲ ಪಡೆದು ವಂಚಿಸಿದ್ದಾರೆ ಎಂದು ಚಂದ್ರಶೇಖರ್ ದೂರಿದ್ದಾರೆ.
ಹೀಗೆ, ಮದುವೆಯಾಗುತ್ತಿದ್ದಂತೆಯೇ ಭಾರಿ ವಿವಾದಕ್ಕೆ ಸಿಲುಕಿರುವ ಚೈತ್ರಾ ಕುಂದಾಪುರ ಅವರು ಇದೀಗ ಹೆಸರು ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಹಾಗೆಂದ ಮಾತ್ರಕ್ಕೆ ಹೆಸರು ಬದಲಾವಣೆಗೂ, ಗಲಾಟೆಗೂ ಏನೂ ಸಂಬಂಧ ಇಲ್ಲ ಎನ್ನಿ. ಸಾಮಾನ್ಯವಾಗಿ ಹಿಂದೂಗಳಲ್ಲಿ ಮಹಿಳೆಯರು ಮದುವೆಯಾಗಿ ಪತಿಯ ಮನೆಗೆ ಹೋದ ಬಳಿಕ ಬೇರೆಯ ಹೆಸರು ಇಡುತ್ತಾರೆ. ಇದು ತಲೆತಲಾಂತರಗಳಿಂದ ನಡೆದು ಬಂದಿದೆ. ಆದರೆ ಕಾಲ ಬದಲಾದಂತೆ ಈ ಸಂಪ್ರದಾಯ ಹೋಗಿದೆ. ಅಪ್ಪನ ಮನೆಯನ್ನು ತೊರೆದ ಮಾತ್ರಕ್ಕೆ, ಅವರ ಇಟ್ಟ ಹೆಸರನ್ನೂ ತೊರೆಯುವುದು ಸಲ್ಲದು, ಹೆಣ್ಣಿಗೇಕೆ ಇಷ್ಟೊಂದು ಶಾಸ್ತ್ರ ಸಂಪ್ರದಾಯಗಳು ಎಂದು ಬಹುತೇಕ ಮಹಿಳೆಯರು ಹೆಸರು ಬದಲಾಯಿಸಲು ಕೊಡುವುದಿಲ್ಲ. ಹಲವು ಗಂಡಿನ ಮನೆಯವರು ಕೂಡ ತಮ್ಮ ಸೊಸೆಯ ಹೆಸರನ್ನು ಬದಲಾಯಿಸಲು ಇಚ್ಛೆ ಪಡುವುದಿಲ್ಲ. ಆದರೂ ಈ ಸಂಪ್ರದಾಯವನ್ನು ಕೆಲವು ಕುಟುಂಬಗಳಲ್ಲಿ ನಡೆಸಿಕೊಂಡು ಬರಲಾಗಿದ್ದು, ಅದರಂತೆಯೇ ಚೈತ್ರಾ ಅವರಿಗೂ ಬೇರೆ ನಾಮಕರಣ ಮಾಡಲಾಗಿದೆ.