ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಶಾಕ್: ಶಾರ್ಟ್ ಲಿಸ್ಟ್ ಜಾಗಗಳಿಗೆ ರೈತರ ಭಾರೀ ವಿರೋಧ

ಬೆಂಗಳೂರು:ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೀಗ ಶಾರ್ಟ್ ಲಿಸ್ಟ್ ಮಾಡಿರುವ ಜಾಗಗಳಲ್ಲಿ ಸಂಕಷ್ಟ ಎದುರಾಗಿದ್ದು. ಎರಡನೇ ವಿಮಾನ ನಿಲ್ದಾಣ ಜಾಗ ನಿಗದಿ ಮಾಡುವ ಮೊದಲ ಹಂತವೇ ಮುಕ್ತಾಯವಾಗುತ್ತಿಲ್ಲ.
ಆದರೆ, ತಮಿಳುನಾಡು ಈಗಾಗಲೇ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಬೇಕಾದ ಎಲ್ಲಾ ಮಾದರಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಮಿಳುನಾಡಿನ ಹೊಸೂರಿನಲ್ಲಿ ಈಗಾಗಲೇ ವಿಮಾನ ನಿಲ್ದಾಣದ ಜಾಗ ಫೈನಲ್ ಆಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯೊಂದಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ಬೆಂಬಲಿತ ಫೇರ್ಫ್ಯಾಕ್ಸ್ ಸಂಸ್ಥೆಯೊಂದಿಗೆ ಚರ್ಚೆ ನಡೆದಿದೆ. ಆದರೆ, ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಮೊದಲಿದ್ದ ಡಿಮ್ಯಾಂಡ್ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಜಾಗ ಕಳೆದುಕೊಳ್ಳುವ ಆತಂಕ.
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸು ಸದ್ಯಕ್ಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ. ಯಾಕೆಂದರೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೊದಲು ಯಾವುದಾದರೂ ಜಾಗ ರಾಜ್ಯ ಸರ್ಕಾರ ಶಾರ್ಟ್ ಲಿಸ್ಟ್ ಮಾಡುವುದರೊಂದಿಗೆ ಕೇಂದ್ರ ಸರ್ಕಾರವೂ ಸಹ ಶಾರ್ಟ್ ಲಿಸ್ಟ್ ಮಾಡಬೇಕು. ಆದರೆ, ಮೊದಲ ಹಂತದಲ್ಲೇ ಭಾರೀ ಹಿನ್ನಡೆ ಎದುರಾಗುತ್ತಿದೆ. ಇದೀಗ ಶಾರ್ಟ್ ಲಿಸ್ಟ್ ಮಾಡಿರುವ ಮತ್ತೊಂದು ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ನೆಲಮಂಗಲ ಹಾಗೂ ಸೋಲೂರು ಭಾಗದಲ್ಲಿ ರೈತರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಎರಡೂ ಜಾಗಗಳು ಶಾರ್ಟ್ ಲಿಸ್ಟ್ ಮಾಡಿರುವ ಪ್ರದೇಶಗಳಲ್ಲಿ ಪ್ರಮುಖವಾಗಿವೆ. ಈ ಭಾಗದಲ್ಲಿ ಫಲವತ್ತದ ಕೃಷಿ ಭೂಮಿ ಇದೆ. ಇಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಮಾಡಿದರೆ ಭೂಮಿ ಕಳೆದುಕೊಳ್ಳಲಿದ್ದೇವೆ ಎನ್ನುವ ಆತಂಕ ರೈತರದ್ದು. ನೆಲಮಂಗಲದ ದಾಸೇಗೌಡನಪಾಳ್ಯದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಕೆಲವರು ನಿರಂತರ ಪ್ರತಿಭಟನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೂ ದಾಖಲಾಗಿದ್ದಾರೆ. ಜನರಿಗೆ ಇಲ್ಲಿನ ಶಾಸಕ ಎನ್ ಶ್ರೀನಿವಾಸ್ ಅವರು ಧೈರ್ಯ ತುಂಬಿದ್ದಾರೆ.