ಮಳೆ-ಭೂಕುಸಿತದಿಂದ ಕೇದಾರನಾಥ ಯಾತ್ರೆ ಅಡಚಣೆ: ಯಾತ್ರಿಕರ ಸುರಕ್ಷತೆಗಾಗಿ ಎಚ್ಚರಿಕೆ ಕ್ರಮ

ನವದೆಹಲಿ: ಸೋನ್ಪ್ರಯಾಗ್ ಬಳಿ ಭೂಕುಸಿತ ಸಂಭವಿಸಿದ ಹಿನ್ನೆಲೆ ಕೇದಾರನಾಥ ಯಾತ್ರೆಯನ್ನು ಗೌರಿಕುಂಡ್ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಎಸ್ಡಿಆರ್ಎಫ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಸಬ್-ಇನ್ಸ್ಪೆಕ್ಟರ್ ಆಶಿಶ್ ದಿಮ್ರಿ ನೇತೃತ್ವದ ಎಸ್ಡಿಆರ್ಎಫ್ ಸೋನ್ಪ್ರಯಾಗ್ನ ತಂಡವನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಯಿತು ಮತ್ತು ಸಮಗ್ರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಕಾರ್ಯಾಚರಣೆಯ ಸಮಯದಲ್ಲಿ, ಎಸ್ಡಿಆರ್ಎಫ್ ತಂಡ ನಿರ್ಬಂಧಿತ ಮಾರ್ಗದ ಹೊರಗೆ ಸಿಲುಕಿಕೊಂಡಿದ್ದ ಸುಮಾರು 100 ಯಾತ್ರಿಕರಿಗೆ ಸಹಾಯ ಮಾಡಿತು.
ಈ ನಡುವೆ ಲೋಕೋಪಯೋಗಿ ಇಲಾಖೆಯ ಕಾರ್ಮಿಕರು ತೊಂದರೆಗೊಳಗಾದ ಯಾತ್ರಾರ್ಥಿಗಳ ಸಂಚಾರವನ್ನು ಪುನಃಸ್ಥಾಪಿಸಲು ಪರ್ಯಾಯ ಮಾರ್ಗವನ್ನು ರಚಿಸುವ ಕೆಲಸದಲ್ಲಿದ್ದಾರೆ. ಎಸ್ಡಿಆರ್ಎಫ್ ಕಟ್ಟೆಚ್ಚರ ವಹಿಸಿದ್ದು, ಈ ಪ್ರದೇಶದಲ್ಲಿ ಮೇಲ್ವಿಚಾರಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಡೆಹ್ರಾಡೂನ್, ಚಂಪಾವತ್ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಮಿಂಚಿನ ಎಚ್ಚರಿಕೆ ನೀಡಿದೆ. ಇದಲ್ಲದೇ ಉಧಮ್ ಸಿಂಗ್ ನಗರ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಮತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜುಲೈ 31 ರವರೆಗೆ ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ.
ರುದ್ರಪ್ರಯಾಗ ಜಿಲ್ಲೆಯಲ್ಲಿ ಮಳೆಯಿಂದ ಭಾರೀ ನಷ್ಟ ಸಂಭವಿಸಿದೆ. ಕೇದಾರಘಾಟಿಯ ರುಮ್ಸಿ ಗ್ರಾಮದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಅರ್ಧ ಡಜನ್ಗೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅನೇಕ ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿದೆ. ಅಪಾಯದ ಮಟ್ಟ ಹೆಚ್ಚುತ್ತಿರುವುದರಿಂದ ನದಿಗಳು ಮತ್ತು ತೊರೆಗಳಿಂದ ದೂರವಿರಲು ಹವಾಮಾನ ಇಲಾಖೆ ಜನರನ್ನು ಕೋರಿದೆ. ಅಲ್ಲದೇ ಪರ್ವತ ಪ್ರದೇಶಗಳಲ್ಲಿ ಭೂಕುಸಿತಕ್ಕೆ ಒಳಗಾಗುವ ಸೂಕ್ಷ್ಮ ಪ್ರದೇಶಗಳಿಗೆ ಹೋಗದಂತೆ ಜನರಿಗೆ ಸೂಚಿಸಲಾಗಿದೆ. ಮಳೆಯ ಎಚ್ಚರಿಕೆಯ ಕಾರಣ, ಸರ್ಕಾರ ಮತ್ತು ಜಿಲ್ಲಾಡಳಿತವು ಎಚ್ಚರಿಕೆಯ ಕ್ರಮದಲ್ಲಿರಲು ಸೂಚಿಸಲಾಗಿದೆ.