Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶೇಖ್ ಹಸೀನಾ ವಿರುದ್ಧ ಗಂಭೀರ ಆರೋಪ: ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆದೇಶದ ಆಡಿಯೋ ಲೀಕ್!

Spread the love

ಢಾಕಾ : ಕಳೆದ ವರ್ಷ ನಡೆದ ಸಾಮೂಹಿಕ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭದ್ರತಾ ಪಡೆಗಳಿಗೆ ಆದೇಶಿಸಿದ್ದರು ಎಂಬುದು, ಬಿಬಿಸಿ ದೃಢೀಕರಿಸಿದ ಸೋರಿಕೆಯಾದ ಫೋನ್ ಕರೆಯೊಂದರಿಂದ ಬಹಿರಂಗಗೊಂಡಿದೆ.

ಧ್ವನಿಮುದ್ರಣದಲ್ಲಿ ಶೇಖ್‌ ಹಸೀನಾ ಅವರು ಪ್ರತಿಭಟನಾಕಾರರ ವಿರುದ್ಧ ಮಾರಕ ಆಯುಧಗಳನ್ನು ಬಳಸಲು ಅಧಿಕಾರ ನೀಡುತ್ತಾ, “ಅವರು ಎಲ್ಲಿ ಕಂಡರೂ ಗುಂಡು ಹಾರಿಸಿ” ಎಂದು ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳಿಗೆ ನಿರ್ದೇಶಣ ನೀಡಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. ಇದು ಶೇಖ್‌ ಹಸೀನಾ ಅವರ ವಿರುದ್ಧದ ಮಾನವೀಯತೆ ವಿರುದ್ಧದ ಅಪರಾಧಗಳ ತನಿಖೆಗೆ ಮತ್ತಷ್ಟು ಬಲ ನೀಡಿದೆ.

ಜುಲೈ 18, 2024ರಂದು ಢಾಕಾದಲ್ಲಿರುವ ಅವರ ಅಧಿಕೃತ ನಿವಾಸದಿಂದ ಮಾಡಿದ ಫೋನ್ ಕರೆಯಲ್ಲಿ, ಹಸೀನಾ ಅವರು, “ನಾನು ಅವರೆಲ್ಲರನ್ನೂ ಇಂದು ರಾತ್ರಿ ಬಂಧಿಸಲು ಆದೇಶಿಸಿದ್ದೇನೆ. ಎಲ್ಲರಿಗೂ ಮಾಹಿತಿ ನೀಡಲಾಗಿದೆ, ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಲ್ಲಿ ಕಂಡರೂ ಅವರ ಮೇಲೆ ಗುಂಡಿಕ್ಕಿ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಳೆದ ವರ್ಷ ನಡೆದ ಬಾಂಗ್ಲಾದೇಶ ಪ್ರತಿಭಟನೆ ಇಡೀ ವಿಶ್ವದ ಗಮನ ಸೆಳೆದಿತ್ತು.

ನಾಗರಿಕ ಸೇವಾ ಉದ್ಯೋಗ ಮೀಸಲಾತಿಗಾಗಿ ಆರಂಭವಾದ ಪ್ರತಿಭಟನೆಗಳು, ಶೀಘ್ರವಾಗಿ ದೇಶಾದ್ಯಂತ ದಂಗೆಯಾಗಿ ಉಲ್ಬಣಗೊಂಡು, ಅಂತಿಮವಾಗಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಯಿತು. 1971ರ ಯುದ್ಧದ ನಂತರ ದೇಶದಲ್ಲಿ ಸಂಭವಿಸಿದ ಭೀಕರ ರಾಜಕೀಯ ಹಿಂಸಾಚಾರವನ್ನು ದಮನ ಮಾಡಲು, ಶೇಖ್‌ ಹಸೀನಾ ಸರ್ಕಾರ ಅತ್ಯಂತ ಕ್ರೂರ ನೀತಿಯನ್ನು ಅನುಸರಿಸಿತ್ತು. ಈ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಸುಮಾರು 1,400 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಹೇಳುತ್ತಾರೆ.

ಆಡಿಯೋ ಸಾಕ್ಷಿ:

ಬಾಂಗ್ಲಾದೇಶದ ಪ್ರಾಸಿಕ್ಯೂಟರ್‌ಗಳು ಸೋರಿಕೆಯಾದ ಆಡಿಯೊವನ್ನು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಹಸೀನಾ ಅವರ ಗೈರುಹಾಜರಿ ವಿಚಾರಣೆಯಲ್ಲಿ ಪ್ರಮುಖ ಸಾಕ್ಷಿಯಾಗಿ ಬಳಸಲು ಯೋಜಿಸಿದ್ದಾರೆ. ನಿರಾಯುಧ ಪ್ರತಿಭಟನಾಕಾರರ ಮೇಲೆ ಮಾರಕ ಬಲಪ್ರಯೋಗಕ್ಕೆ ಹಸೀನಾ ನೇರವಾಗಿ ಅಧಿಕಾರ ನೀಡಿದ್ದಾರೆ ಎಂಬುದಕ್ಕೆ ಈ ಆಡಿಯೋ ಸ್ಪಷ್ಟ ಸೂಚನೆ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದ್ದಾರೆ.

ಶೇಖ್ ಹಸೀನಾ ಅವರ ಮೇಲೆ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪ ಹೊರಿಸಲಾಗಿದೆ. ಇದರಲ್ಲಿ ಪ್ರಚೋದನೆ, ಪಿತೂರಿ ಮತ್ತು ಸಾಮೂಹಿಕ ಹತ್ಯೆಗಳಿಗೆ ಕಾರಣವಾದ ಆದೇಶಗಳನ್ನು ನೀಡುವುದು ಸೇರಿವೆ. ಅವರ ಸರ್ಕಾರ ಪತನಗೊಳ್ಳುವ ಸ್ವಲ್ಪ ಮೊದಲು ಅವರು ಭಾರತಕ್ಕೆ ಪಲಾಯನ ಮಾಡಿದ್ದರು.

ಶೇಖ್ ಹಸೀನಾ‌ ಅವರ ಜೊತೆಗೆ ಮಾಜಿ ಹಿರಿಯ ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ, ಒಟ್ಟು 203 ವ್ಯಕ್ತಿಗಳ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿ (ICT) ದೋಷಾರೋಪಣೆ ಮಾಡಿದೆ. ಈ ಪೈಕಿ 73 ಜನರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಶೇಖ್ ಹಸೀನಾ ಪದಚ್ಯುತಗೊಂಡ ನಂತರ, ಬಾಂಗ್ಲಾದೇಶವು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಆಡಳಿತದಲ್ಲಿದೆ. ಯೂನಸ್ ಈಗ ದೇಶವನ್ನು ರಾಷ್ಟ್ರೀಯ ಚುನಾವಣೆಗಳಿಗೆ ಸಿದ್ಧಪಡಿಸುತ್ತಿದ್ದಾರೆ. ಮೊಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶ ಮಧ್ಯಂತರ ಸರ್ಕಾರವು, ಶೇಖ್‌ ಹಸೀನಾ ಹಸ್ತಾಂತರಕ್ಕೆ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.‌


Spread the love
Share:

administrator

Leave a Reply

Your email address will not be published. Required fields are marked *