ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಿಂದ ಕಳ್ಳತನಗಳ ಸರಮಾಲೆ

ಬೆಂಗಳೂರು: ಚಿನ್ನಾಭರಣ ಕಳ್ಳತನ ಮಾಡುವುದನ್ನೇ ಖಯಾಲಿ ಮಾಡಿಕೊಂಡಿದ್ದ ಆಂಧ್ರ ಪ್ರದೇಶದ ಕೆಂಪಲ್ಲಿ ಮೂಲದ ಶ್ರೀನಿವಾಸ್ (35) ಎಂಬಾತ, ಒಂದೇ ದಿನದಲ್ಲಿ ಕೊಡಿಗೆಹಳ್ಳಿ ವ್ಯಾಪ್ತಿಯ ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ. ಈತನ ವಿರುದ್ಧ ಈಗಾಗಲೇ 90ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಕೇವಲ ಕಳ್ಳತನವಲ್ಲ, ಸೈಬರ್ ವಂಚನೆಗೂ ಈತನ ಕೈವಾಡವಿದೆ. ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಶ್ರೀನಿವಾಸ್, ಪದವಿ ಪೂರ್ಣಗೊಳಿಸಿದ ಬಳಿಕ ಒಂದು ಕಾಲದಲ್ಲಿ ಆಂಧ್ರದ ಸಿನೆಮಾ ಇಂಡಸ್ಟ್ರಿಯಲ್ಲಿ ಸೆಟ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, 2008 ರಲ್ಲಿ ಸೆಟ್ನಲ್ಲಿ ಲ್ಯಾಪ್ಟಾಪ್ ಕಳವು ಮಾಡಿದ್ದಕ್ಕಾಗಿ ಮೊದಲ ಬಾರಿಗೆ ಜೈಲು ಸೇರಿದ್ದನು. ನಂತರದ ದಿನಗಳಲ್ಲಿ ಕಳ್ಳತನದ ಮಾರ್ಗವನ್ನೇ ಆತನ ಜೀವನಶೈಲಿ ಮಾಡಿಕೊಂಡಿದ್ದನು.
ಆನ್ಲೈನ್ ಗೇಮ್ ಹುಚ್ಚು ಈತನನ್ನು ತೀವ್ರ ಹಣದ ಬೇಡಿಕೆಗೆ ದೂಡಿದೆ. ಅದೆ ಕಾರಣದಿಂದ ಶ್ರೀನಿವಾಸ್ ವಿವಿಧ ರಾಜ್ಯಗಳಲ್ಲೂ ಕಳ್ಳತನಕ್ಕೆ ಇಳಿದಿದ್ದ. ಆಂಧ್ರಪ್ರದೇಶದಲ್ಲಿ ಈತನ ವಿರುದ್ಧ 87ಕ್ಕೂ ಹೆಚ್ಚು ಪ್ರಕರಣಗಳು, ಮತ್ತು ಕರ್ನಾಟಕದ ಧಾರವಾಡ, ಬೀದರ್, ಜೆ. ಬಿ. ನಗರ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಇನ್ನೂ ನಾಲ್ಕು ಪ್ರಕರಣಗಳು ದಾಖಲಾಗಿದೆ. ಇತ್ತೀಚೆಗೆ ನಡೆದ ಘಟನೆಗಳಲ್ಲಿ, ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಜಿ ಲೇಔಟ್ನಲ್ಲಿ ಎರಡು ಮನೆಗಳು, ಮತ್ತು ಪಾರ್ವತಮ್ಮ ಲೇಔಟ್ನಲ್ಲಿ ಒಂದು ಮನೆಗಳ್ಳತನವಾಗಿದೆ. ಮನೆ ಮಾಲೀಕರು ಮನೆಯಲ್ಲಿ ಇಲ್ಲದಿರುವ ಸಮಯವನ್ನು ಬಳಸಿಕೊಂಡು, ಶ್ರೀನಿವಾಸ್ ಮನೆಯಲ್ಲಿ ಬೀಗ ಮುರಿದು ನುಗ್ಗಿ ಚಿನ್ನಾಭರಣ ದೋಚಿದ್ದ. ಪೊಲೀಸರು ತನಿಖೆ ನಡೆಸಿ ಮೈಸೂರಿನಲ್ಲಿ ಖಾಸಗಿ ಪಿಜಿಯೊಂದರಲ್ಲಿ ತಂಗಿದ್ದ ಶ್ರೀನಿವಾಸನನ್ನು ಬಂಧಿಸಿದ್ದಾರೆ. ಬಂಧಿತನಿಂದ 145 ಗ್ರಾಂ ಚಿನ್ನಾಭರಣಗಳು, ಅಂದಾಜು ₹9 ಲಕ್ಷ ಮೌಲ್ಯದ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.