“ದೊಡ್ಡಗೌಡ್ರು ಎಷ್ಟು ಗಟ್ಟಿಮುಟ್ಟು ನೋಡಿ”: ಅನಾರೋಗ್ಯದ ನಡುವೆಯೂ ದೇವರ ಸ್ತೋತ್ರಗಳ ಪುಸ್ತಕ ಓದುತ್ತಿರುವ ಹೆಚ್.ಡಿ. ದೇವೇಗೌಡರ ಫೋಟೋ ವೈರಲ್

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಚಳಿಜ್ವರ ಮತ್ತು ಮೂತ್ರದ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ದೇವೇಗೌಡರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಹೀಗಾಗಿ ಇಂದು (ಅಕ್ಟೋಬರ್ 13) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ದೊಡ್ಡಗೌಡ್ರು ಆಸ್ಪತ್ರೆಯಿಂದ ಮನೆಗೆ ಬರುತ್ತಿದ್ದಂತೆಯೇ ಕೈಯಲ್ಲಿ ಪುಸ್ತಲ ಹಿಡಿದು ಓದುತ್ತ ಕುಳಿತ್ತಿದ್ದಾರೆ. 94ರ ಇಳಿವಯಸ್ಸಿನಲ್ಲಿ ಅದರಲ್ಲೂ ಅನಾರೋಗ್ಯದ ನಡುವೆಯೂ ಬುಕ್ ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ದೊಡ್ಡಗೌಡ್ರು ಎಷ್ಟು ಗಟ್ಟಿಮುಟ್ಟು ನೋಡಿ ಎಂದು ನೆಟ್ಟಿಗರು ಕೊಂಡಿದ್ದಾರೆ.

ಇಂದು ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪದ್ಮನಾಭ ನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದು, ಫ್ರೆಶಪ್ ಆಗಿ ಬಳಿಕ ದೇವರ ಸ್ತೂತ್ರಗಳ ಪುಸ್ತಕವನ್ನು ಓದಿದ್ದಾರೆ. ದೊಡ್ಡಗೌಡ್ರು ಪ್ರತಿ ದಿನ ದೇವರ ಸ್ತೋತ್ರಗಳ ಬುಕ್ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಆದ್ರೆ, ಅನಾರೋಗ್ಯದ ಸಲುವಾಗಿ ಆಸ್ಪತ್ರೆಗೆ ದಾಖಲಾಗಿದ್ದ ದೇವೇಗೌಡ್ರು ಕೆಲವು ದಿನ ಪುಸ್ತಕ ಓದಲು ಸಾಧ್ಯವಾಗಿರಲಿಲ್ಲ. ಆದ್ರೆ, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಮನೆಗೆ ಬಂದು ಆಂಜನೇಯ್ಯ ಸೇರಿದಂತೆ ಇತರೆ ದೇವರುಗಳ ಸ್ತೋತ್ರಗಳ ಪುಸ್ತಕವನ್ನು ಓದಿದ್ದಾರೆ.
ಆಸ್ಪತ್ರೆಯಿಂದ ಮನೆಗೆ ಬಂದು ಪುಸ್ತಕ ಓದುತ್ತಿರುವ ಫೋಟೋವನ್ನು ದೇವೇಗೌಡ್ರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಆಸ್ಪತ್ರೆಯಲ್ಲಿ ಕಳೆದ ನಂತರ ಮನೆಗೆ ಮರಳಿದ್ದೇನೆ. ದೇವರ ದಯೆಯಿಂದ ನನ್ನ ಆರೋಗ್ಯ ಸ್ಥಿರವಾಗಿದೆ. ನನಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಮಣಿಪಾಲ್ ಆಸ್ಪತ್ರೆ ವೈದ್ಯರಿಗೆ ಕೃತಜ್ಞನಾಗಿದ್ದೇನೆ. ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಮತ್ತು ನನ್ನನ್ನು ನೋಡಲು ಬಂದ ಸ್ನೇಹಿತರು ಮತ್ತು ನಾಯಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ನು ನಾನು ಶೀಘ್ರದಲ್ಲೇ ನನ್ನ ಸಾರ್ವಜನಿಕ ಕರ್ತವ್ಯಗಳನ್ನು ಪುನರಾರಂಭಿಸುತ್ತೇನೆ ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.
94ರ ಇಳಿವಯಸ್ಸು, ಅನಾರೋಗ್ಯದ ನಡುವೆಯೂ ದೇವೇಗೌಡ್ರು ಪುಸ್ತಕ ಓದುತ್ತಿರುವ ಫೋಟೋ ಇದೀಗ ವೈರಲ್ ಆಗಿದ್ದು, ದೇವೇಗೌಡರ ಆರೋಗ್ಯ ಜನ ಕೊಂಡಾಡಿದ್ದಾರೆ. ರಾಗಿ ಮುದ್ದೆ ತಿಂದು ಬೆಳೆದ ದೇಹ ಈ ವಯಸ್ಸಿನಲ್ಲೂ ಕುಳಿತು ಪುಸ್ತಕ ಓದುತ್ತಾರೆ ಅಂದ್ರೆ ಗ್ರೇಟ್ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಹದಿನೈದು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಗೌಡರಿಗೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅಭಿಮಾನಿಗಳು, ಕಾರ್ಯಕರ್ತರು ಮನೆಗೆ ಬರದೇ ಸಹಕರಿಸುವಂತೆ ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ. ಇನ್ನು ದೇವೇಗೌಡ್ರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಹಲವರಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸೇರಿದಂತೆ ಹಲವು ದೊಡ್ಡಗೌಡರ ಆರೋಗ್ಯಕ್ಕಾಗಿ ಪ್ರಾರ್ಥನೆಗಳು ಸಲ್ಲಿಸಿದ್ದರು.