ವಂದೇ ಮಾತರಂ ಕಡ್ಡಾಯ: ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸರಕಾರ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ನುಡಿಸುವುದು ಅಥವಾ ಹಾಡುವುದು ಕಡ್ಡಾಯಗೊಳಿಸಿ ಕೇಂದ್ರ ಸರಕಾರ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ ಎಂದು Bar and Bench ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಯಲ್ಯ ಬಾಗ್ನಿ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ಶೈಕ್ಷಣಿಕ ಸಂಸ್ಥೆಯನ್ನು ನಡೆಸುತ್ತಿರುವ ಮುಹಮ್ಮದ್ ಸಯೀದ್ ನೂರಿ ಅವರು ಈ ಕುರಿತು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಜನವರಿ 28ರ ಗೃಹ ಸಚಿವಾಲಯದ ಸುತ್ತೋಲೆಯನ್ನು ನೂರಿ ಪ್ರಶ್ನಿಸಿದ್ದರು. ಸುತ್ತೋಲೆಯಲ್ಲಿ ವಂದೇ ಮಾತರಂನ ಎಲ್ಲಾ 6 ಚರಣಗಳನ್ನು ರಾಷ್ಟ್ರಗೀತೆ ಜನ ಗಣಮನಕ್ಕೂ ಮೊದಲು ಹಾಡಬೇಕೆಂದು ನಿರ್ದೇಶಿಸಿತ್ತು.
ಹಾಡಿನ ಮೊದಲ ಎರಡು ಚರಣಗಳನ್ನು ಮಾತ್ರ ಈ ಹಿಂದೆ ಅಧಿಕೃತ ಕಾರ್ಯಕ್ರಮಗಳಲ್ಲಿ ನುಡಿಸಲಾಗುತ್ತಿತ್ತು. ಹಿಂದೂ ದೇವತೆಗಳಾದ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಪ್ರಾರ್ಥಿಸುವ ಉಳಿದ ಚರಣಗಳನ್ನು ಕೈಬಿಡಲಾಗಿತ್ತು.
ಅಧಿಕೃತ ದಂಡಗಳು ಇಲ್ಲದಿದ್ದರೂ, ಈ ಆದೇಶ ಸಾಮಾಜಿಕ ಒತ್ತಡಕ್ಕೆ ಕಾರಣವಾಗಬಹುದು. ಇದನ್ನು ಅನುಸರಿಸದ ವ್ಯಕ್ತಿಗಳನ್ನು ಪ್ರತ್ಯೇಕಿಸಿ ತಾರತಮ್ಯ ಮಾಡುವ ಸಾಧ್ಯತೆ ಇದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಆತುರದ ಮತ್ತು “ಅಸ್ಪಷ್ಟ ಆತಂಕಗಳ” ಆಧಾರಿತವಾಗಿದೆ ಎಂದು ಹೇಳಿದೆ ಎಂದು Live Law ವರದಿ ಮಾಡಿದೆ.
