ಸೆಪ್ಟೆಂಬರ್ ತನಕ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗ ಬಂದ್: ಹಲವಾರು ಎಕ್ಸ್ಪ್ರೆಸ್ ರೈಲುಗಳ ಸಂಚಾರ ರದ್ದು

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ – ಸುಬ್ರಹ್ಮಣ್ಯ ರಸ್ತೆ ಮಾರ್ಗದಲ್ಲಿ ಜೂನ್ 1ರಿಂದ ನವೆಂಬರ್ 1 ರವರೆಗೆ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣ ಇದೀಗ ಈ ಮಾರ್ಗದಲ್ಲಿ ಸಾಗುವ ರೈಲುಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಒಂದಷ್ಟು ಸಮಸ್ಯೆಯಿಂದ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಕ್ಕೆ ಸುಬ್ರಮಣ್ಯ ಮತ್ತು ಮಂಗಳೂರಿಗೆ ರೈಲಿನ ಮುಖಾಂತರ ಪ್ರಯಾಣಿಸುವವರ ಗಮನಕ್ಕೆ ಈ ಮಾಹಿತಿ:
- ಮೇ.31ರಿಂದ ನವೆಂಬರ್ 1 ರವರೆಗೆ ಶನಿವಾರದಂದು ಸಂಚರಿಸುವ ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16539) ರದ್ದು.
- ಜೂನ್ 1ರಿಂದ ನವೆಂಬರ್ 2ರವರೆಗೆ ಭಾನುವಾರದಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16540) ರದ್ದು.
- ಜೂನ್ 1ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರದಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16575) ರದ್ದು.
- ಜೂನ್ 2ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16576) ರದ್ದು.
- ಜೂನ್ 2ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16515) ರದ್ದು.
6.ಜೂನ್ 3ರಿಂದ ನವೆಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಂಚರಿಸುವ ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16516) ರೈಲು ಸಹ ರದ್ದು.