ರನ್ವೇ ಗುರುತು ಇಲ್ಲ, ಹಳೆಯ ಟೈರ್ನಲ್ಲೇ ಹಾರುತ್ತಿದೆ ಭಾರತೀಯ ವಿಮಾನಗಳು

ನವದೆಹಲಿ:ಅಹಮದಾಬಾದ್ ವಿಮಾನ ದುರಂತದ ನಂತರ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಸೇಫ್ಟಿ ಚೆಕ್ ಗಳನ್ನು ಮತ್ತಷ್ಟು ಬಿಗಿಗೊಳಿಸಲು ತಾಕೀತು ಮಾಡಿದ ನಂತರವೂ,ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಸಮಯದಲ್ಲಿ ಗಂಭೀರ ಸುರಕ್ಷತಾ ಲೋಪಗಳು ಕಂಡುಬಂದಿದೆ.
ಹೀಗಾಗಿ ಈ ಲೋಪಗಳನ್ನು ಸರಿಪಡಿಸಲು ಭಾರತದ ವಿಮಾನಯಾನ ನಿಯಂತ್ರಕ ಇಲಾಖೆ ವಿಮಾನ ನಿಲ್ದಾಣ ನಿರ್ವಾಹಕರಿಗೆ ಏಳು ದಿನಗಳ ಕಾಲಾವಕಾಶ ನೀಡಿದೆ.ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೇಳಿಕೊಂಡಿರುವಂತೆ,ತಾವು ನಡೆಸಿದ ಕಾರ್ಯಾಚರಣೆ ಸಮಯದಲ್ಲಿ ಪರಿಣಾಮಕಾರಿಯಲ್ಲದ ಮೇಲ್ವಿಚಾರಣೆ ಮತ್ತು ಕೆಲ ದೋಷಗಳು ಕಂಡುಬಂದಿದೆ ಎಂದು ತಿಳಿಸಿದೆ.

ಜೂನ್ 19 ರಿಂದ ನಡೆಸಲಾದ ಈ ಲೆಕ್ಕ ಪರಿಶೋಧನೆ ವಿಮಾನ ಕಾರ್ಯಾಚರಣೆಗಳು,ವಾಯು ಗುಣಮಟ್ಟ,ರ್ಯಾಂಪ್ ಸುರಕ್ಷತೆ, ವಾಯು ಸಂಚಾರ ನಿಯಂತ್ರಣ,ಸಂವಹನ ಮತ್ತು ಸಂಚರಣೆ ವ್ಯವಸ್ಥೆಗಳು ಮತ್ತು ಪೂರ್ವ-ವಿಮಾನ ವೈದ್ಯಕೀಯ ತಪಾಸಣೆಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳ ತಪಾಸಣೆ ನಡೆಸಲಾಗಿದೆ.
ಈ ವೇಳೆ ಕೆಲವು ಕಡೆಗಳಲ್ಲಿ ಸವೆದ ಟೈರ್ಗಳಲ್ಲೇ ವಿಮಾನಗಳು ಕಾರ್ಯನಿರ್ವಹಿಸುವುದು ಕಂಡುಬಂದಿದೆ.ಇನ್ನು ಕೆಲವು ಕಡೆಗಳಲ್ಲಿ ರನ್ ವೆ ಗುರುತುಗಳೇ ನಾಪತ್ತೆಯಾಗಿದೆ.ಈ ರೀತಿಯ ಹಲವು ಲೋಪಗಳನ್ನು ದುರಸ್ತಿ ಮಾಡಿದ ನಂತರವೇ ಆ ವಿಮಾನಗಳನ್ನು ಕಾರ್ಯನಿರ್ವಹಿಸಲು ಅನುಮತಿಸಲಾಗುವುದು ಮತ್ತು ಇದಕ್ಕಾಗಿ 7 ದಿನಗಳ ಕಾಲಾವಕಾಶ ನೀಡಲಾಗಿದೆ.